ಎಲ್ಲಿಂದ ಎಲ್ಲಿ ತನಕ ಚಂಡಮಾರುತದ ಹಾವಳಿ ಪೂರ್ಣ ವರದಿ ಇಲ್ಲಿದೆ
ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಭಾಗದಲ್ಲಿ ಕಂಡುಬಂದಿದ್ದ ಅಲ್ಪ ವಾಯುಭಾರ ಕುಸಿತ ಸಂಜೆಯ ವೇಳೆಗೆ ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಭಾಗದಲ್ಲಿ ವಾಯಭಾರ ಕುಸಿತವಾಗಿ ಪರಿವರ್ತನೆಗೊಂಡಿದೆ. ಹೀಗಾಗಿ, ಮೇ 23 ರಿಂದ ಮೇ 27ರ ತನಕ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮಳೆ, ಗಾಳಿ ಅಬ್ಬರವನ್ನು ಯಾಸ್(Yaas) ಚಂಡಮಾರುತ ಹೊತ್ತು ತರಲಿದೆ ಎಂದು ಉಪಗ್ರಹದ ಚಿತ್ರಗಳು ಮತ್ತು ಕಡಲ ಅವಲೋಕನ ಮೂಲಕ ಕಂಡುಬಂದಿರುವ ಅಂಶಗಳ ಮೂಲಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 23 ರಂದು ಅಂತಾರಾಷ್ಟ್ರೀಯ ಕಾಲಮಾನ ಬೆಳಗ್ಗೆ 11.30ರ ವೇಳೆಗೆ ದಕ್ಷಿಣಕ್ಕೆ ಅಕ್ಷಾಂಶ 16.1° ಮತ್ತು ಪೂರ್ವಕ್ಕೆ ರೇಖಾಂಶ 90.2° ಅಂದರೆ ಪೋರ್ಟ್ ಬ್ಲೇರ್(ಅಂಡಮಾನ್ ದ್ವೀಪದಿಂದ) ಉತ್ತರ - ವಾಯವ್ಯದಿಂದ 560 ಕಿ.ಮೀ. ದೂರದಲ್ಲಿ, ಪಾರಾದೀಪ್ ನ (ಒಡಿಶಾ) ಪೂರ್ವ ಆಗ್ನೇಯಕ್ಕೆ 590 ಕಿ.ಮೀ., ಬಾಲ್ ಸೋರ್(ಒಡಿಶಾ)ನಿಂದ ದಕ್ಷಿಣ ಆಗ್ನೇಯಕ್ಕೆ 690 ಕಿ.ಮೀ. ಮತ್ತು ದಿಘಾ(ಪಶ್ಚಿಮ ಬಂಗಾಳ)ದಿಂದ ದಕ್ಷಿಣ ಆಗ್ನೇಯಕ್ಕೆ 670 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು.
ಮೇ 24ರ ಬೆಳಗ್ಗೆ ವೇಳೆಗೆ ಈ ಚಂಡಮಾರುತ ಉತ್ತರ - ವಾಯವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇದೆ ಮತ್ತು ಅದು ತೀವ್ರಗೊಳ್ಳಲಿದೆ ಮತ್ತು ಆನಂತರದ 24 ಗಂಟೆಗಳಲ್ಲಿ ಚಂಡಮಾರುತ ತೀವ್ರ ಗಂಭೀರ ರೂಪ ಪಡೆದುಕೊಳ್ಳಲಿದೆ. ಅದು ಉತ್ತರ ವಾಯವ್ಯದತ್ತ ಸಾಗುವುದು ಮುಂದುವರಿದು ಮೇ 26ರ ಬೆಳಗ್ಗೆ ವೇಳೆಗೆ ಬಂಗಾಳಕೊಲ್ಲಿಯ ವಾಯವ್ಯಕ್ಕೆ ಪಶ್ಚಿಮಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿ ತಲುಪಲಿದೆ. ಇದು ಉತ್ತರ ಒಡಿಶಾ - ಪಶ್ಚಿಮ ಬಂಗಾಳ ಹಾದು ಪಾರದೀಪ್ ಮತ್ತು ಸಾಗರ ದ್ವೀಪಗಳ ನಡುವೆ ಮೇ 26ಕ್ಕೆ ತಲುಪಿ ಗಂಭೀರ ಸ್ವರೂಪ ಪಡೆಯಲಿದೆ.
ಒಡಿಶಾ ಮಳೆ ಮುನ್ಸೂಚನೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ: ಮೇ 23 ಮತ್ತು 24ರಂದು ಒಳನಾಡು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಿಂದ ಹಿಡಿದು, ಅಧಿಕದಿಂದ ಕೂಡಿದ ಭಾರಿ ಮಳೆಯಾಗಿದೆ.
ಒಡಿಶಾದಲ್ಲಿ ಮೇ 25ರಂದು ಉತ್ತರ ಕರಾವಳಿ ಜಿಲ್ಲೆಗಳ ಒಳನಾಡು ಪ್ರದೇಶದ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಮತ್ತು ಇನ್ನೂ ಕೆಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ. ಬಾಲಸೋರ್, ಭದ್ರಕ್, ಕೇಂದ್ರಪಾರ, ಮಯೂರ್ ಭಂಜ್ ನ ಹಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ. ಮೇ 26ರಂದು ಉತ್ತರ ಒಡಿಶಾದ ಜಿಲ್ಲೆಗಳಾದ ಜಗತ್ ಸಿಂಗ್ ಪುರ್, ಕಟಕ್, ಜೈಪುರ್ ಮತ್ತು ಕಿಯೋಂಜಾರ್ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.
ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ
ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ: ಮೇ 25ರಂದು ಮೇದಿನಿಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮತ್ತು ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ. ಜಾರ್ಗ್ರಾಮ್, ಮೇದಿನಿಪುರ್, ಉತ್ತರ ಮತ್ತು ದಕ್ಷಿಣ 24 ಪರಗಣ, ಹೌರಾ, ಹೂಗ್ಲಿ, ಕೋಲ್ಕತ್ತಾದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಮತ್ತು ನಾದಿಯಾ, ಬರ್ಧಮಾನ್, ಬಂಕುರ, ಪುರುಲಿಯಾ, ಭೀರ್ ಭೂಮ್ ನ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.
ಮೇ 26ರಂದು ಮುರ್ಷಿದಾಬಾದ್, ಮಾಲ್ಡಾ ಮತ್ತು ದಕ್ಷಿಣ್ ದಿನಾಜ್ ಪುರ್ ಜಿಲ್ಲೆಗಳ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಮಾಲ್ಡಾ ಮತ್ತು ಡಾರ್ಜಲಿಂಗ್ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ, ದಿನಾಜ್ ಪುರ್, ಕಲೀಂಪೋಂಗ್, ಜಲ್ಪಾಯ್ ಗುರಿ, ಸಿಕ್ಕಿಂಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ.
ಮೇ 27ರಂದು ಬಂಕುರ, ಪುರುಲಿಯಾ, ಬರ್ಧಮಾನ್, ಭೀರ್ ಭೂಮ್ ಮತ್ತು ಮುರ್ಷಿದಾಬಾದ್ ನ ಹಲವು ಪ್ರದೇಶಗಳಲ್ಲಿ ಅಧಿಕ ಮಳೆಯಾಗಲಿದೆ.
ಗಾಳಿ ಮುನ್ನೆಚ್ಚರಿಕೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಮುದ್ರ ಮತ್ತು ಅದಕ್ಕೆ ಹೊಂದಿಕೊಂಡಿರುವ ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಮತ್ತು ಆಗ್ನೇಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಂಡಮಾರುತದ ಗಾಳಿ ಪ್ರತಿ ಗಂಟೆಗೆ 45-55 ರಿಂದ 65 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೇ 24ರ ಮಧ್ಯಾಹ್ನದ ವೇಳೆಗೆ ಬಂಗಾಳಕೊಲ್ಲಿಯ ಬಹುತೇಕ ಭಾಗಗಳಲ್ಲಿ ಗಾಳಿಯ ರಭಸ ಪ್ರತಿ ಗಂಟೆಗೆ 65-75 ರಿಂದ ಹಿಡುದು 85 ಕಿ.ಮೀ. ವೇಗದಲ್ಲಿ ಸಾಗಿದ್ದು, ಆನಂತರ 12 ಗಂಟೆಗಳಲ್ಲಿ ಅದು ರಭಸವಾಗಿ ಬೀಸಿ ಕ್ರಮೇಣ ತನ್ನ ವೇಗ ತಗ್ಗಿಸಿಕೊಳ್ಳಲಿದೆ.
ಮೇ 24ರ ಸಂಜೆಯಿಂದ ಬಂಗಾಳಕೊಲ್ಲಿಯ ಉತ್ತರ ಭಾಗ ಒಡಿಶಾ - ಪಶ್ಚಿಮ ಬಂಗಾಳದ ಕರಾವಳಿ ಉದ್ದಕ್ಕೂ ಹಾಗೂ ಬಾಂಗ್ಲಾದೇಶದ ಕರಾವಳಿಯಲ್ಲಿ ಚಂಡಮಾರುತದ ಗಾಳಿ ಪ್ರತಿ ಗಂಟೆಗೆ 40-50 ರಿಂದ 60 ಕಿ.ಮೀ. ರಭಸವಾಗಿ ಬೀಸಿದೆ. ಮೇ 25ರ ಸಂಜೆಯ ವೇಳೆಗೆ ಅದು ತನ್ನ ವೇಗವನ್ನು 50-60ರಿಂದ 70 ಕಿ.ಮೀ.ವರೆಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ನಂತರ ಮೇ 26ರ ಮುಂಜಾನೆ ವೇಳೆಗೆ ಪಶ್ಚಿಮ ಬಂಗಾಳದ ಕಡಲ ಪ್ರದೇಶ ಮತ್ತು ಉತ್ತರ ಒಡಿಶಾ ಹಾಗೂ ಬಾಂಗ್ಲಾದೇಶದ ಕರಾವಳಿಯಲ್ಲಿ ತನ್ನ ವೇಗವನ್ನು ಪ್ರತಿ ಗಂಟೆಗೆ 60-70ರಿಂದ 80ಕ್ಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಮೇ 26ರ ಮಧ್ಯಾಹ್ನದಿಂದ 26ರ ಸಂಜೆಯ ವೇಳೆಗೆ ಚಂಡಮಾರುತದ ವೇಗ ಪ್ರತಿ ಗಂಟೆಗೆ 90-100ರಿಂದ ಹಿಡಿದು 110 ಕಿ.ಮೀ.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.
ಸಮುದ್ರದ ಸ್ಥಿತಿಗತಿ
ಮೇ 23 ಮತ್ತು 24ರಂದು ಬಂಗಾಳಕೊಲ್ಲಿಯ ಪೂರ್ವ ಕೇಂದ್ರಕ್ಕೆ ಹೊಂದಿಕೊಂಡಿರುವ ಮತ್ತು ಅಂಡಮಾನ್ ಸಮುದ್ರದ ಪ್ರದೇಶದಲ್ಲಿ ಸಮುದ್ರದ ಸ್ಥಿತಿಗತಿ ತುಂಬಾ ಒರಟಾಗಿರಲಿದೆ. ಮೇ 24ರಿಂದ 26ರ ಅವಧಿಯಲ್ಲಿ ಬಂಗಾಳಕೊಲ್ಲಿಯ ಬಹುತೇಕ ಕೇಂದ್ರ ಭಾಗದಲ್ಲಿ, ಬಂಗಾಳಕೊಲ್ಲಿಯ ಉತ್ತರ ಭಾಗ ಹಾಗೂ ಒಡಿಶಾ, ಪಶ್ಚಿಮಬಂಗಾಳ - ಬಾಂಗ್ಲಾದೇಶದ ಕರಾವಳಿ ಉದ್ದಕ್ಕೂ ಸಮುದ್ರದ ಸ್ಥಿತಿಗತಿ ಗಂಭೀರದಿಂದ ತೀವ್ರ ಗಂಭೀರವಾಗಿರಲಿದೆ.
ಭಾರಿ ಅಲೆ : ಮೇ 23 ಮತ್ತು 24ರಂದು ಅಲೆಗಳು ಒಂದರಿಂದ ಎರಡು ಮೀಟರ್ ಭಾರೀ ಎತ್ತರಕ್ಕೆ ಏರಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ತಗ್ಗು ಪ್ರದೇಶಗಳನ್ನು ಮುಳುಗಡೆ ಮಾಡುವ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ
ಮೇ 23 ರಿಂದ 24ರ ಅವಧಿಯಲ್ಲಿ ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಭಾಗ ಮತ್ತು ಆಗ್ನೇಯ ಭಾಗ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಉದ್ದಕ್ಕೂ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಅಂತೆಯೇ ಮೇ 23 ರಿಂದ 25ರ ವರೆಗೆ ಬಂಗಾಳಕೊಲ್ಲಿಯ ಕೇಂದ್ರ ಭಾಗ, ಮೇ 24 ರಿಂದ 26ರ ವರೆಗೆ ಬಂಗಾಳಕೊಲ್ಲಿಯ ಉತ್ತರ ಮತ್ತು ಪಶ್ಚಿಮಬಂಗಾಳ-ಒಡಿಶಾ-ಬಾಂಗ್ಲಾದೇಶ ಕರಾವಳಿ ಉದ್ದಕ್ಕೂ ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚಿಸಲಾಗಿದೆ.
ಬಂಗಾಳಕೊಲ್ಲಿಯ ಈಶಾನ್ಯಕ್ಕೆ ಹೊಂದಿಕೊಂಡಿರುವ ಪ್ರದೇಶ ಮತ್ತು ಪೂರ್ವ ಕೇಂದ್ರ ಪ್ರದೇಶದಲ್ಲಿ ಸಮುದ್ರದ ಆಳಕ್ಕಿಳಿದಿರುವ ಮೀನುಗಾರರು ಕಡಲ ತೀರಕ್ಕೆ ವಾಪಸ್ ಆಗುವಂತೆ ಸೂಚಿಸಲಾಗಿದೆ.