ವೆಂಕಯ್ಯ ನಾಯ್ಡು ಬೀಳ್ಕೊಡುಗೆ: ಕನ್ನಡದಲ್ಲೇ ಜೋಶಿ ಹಾರೈಕೆ
ಬೆಂಗಳೂರು ಆಗಸ್ಟ್ 08: ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಸೋಮವಾರ ಕೊನೆಯ ದಿನದ ಕಲಾಪವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಡೆಸಿದರು. ಕರ್ನಾಟಕದ ಬಿಜೆಪಿ ನಾಯಕ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕನ್ನಡದಲ್ಲಿ ಭಾಷಣ ಮಾಡಿ ಉಪರಾಷ್ಟ್ರಪತಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಗಮನ ಸೆಳೆದರು.
ರಾಜ್ಯಸಭೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಸೋಮವಾರ ಭಾವುಕ ದಿನ, ಭಾವನಾತ್ಮಕ ಕ್ಷಣ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ವೆಂಕಯ್ಯನಾಯ್ಡು ರಾಜ್ಯಸಭೆ ಸಭಾಪತಿಯಾಗಿ ಕೊನೆಯ ದಿನದ ಕಲಾಪ ನಡೆಸಿದರು.
ಅನ್ಯ ಧರ್ಮದ ಅವಹೇಳನ ಭಾರತೀಯ ಸಂಸ್ಕೃತಿಯಲ್ಲ: ವೆಂಕಯ್ಯ ನಾಯ್ಡು
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಯ ಹಲವು ಸದಸ್ಯರು ವೆಂಕಯ್ಯ ನಾಯ್ಡು ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೆಂಕಯ್ಯ ನಾಯ್ಡು ಶಿಸ್ತು ಸ್ಮರಿಸಿದ ಜೋಶಿ; ಇದೇ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಲಾಪದಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡಿ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ ನೀಡಿದರು.
ಕರ್ನಾಟಕದ ಜತೆಗಿನ ವೆಂಕಯ್ಯ ನಾಯ್ಡು ಅವರ ಬಾಂಧವ್ಯ, ಮಾತೃ ಭಾಷೆ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರಾಸಬದ್ಧ ಭಾಷಣ, ವಿಶೇಷವಾಗಿ ದಕ್ಷಿಣ ಭಾರತದ ಡ್ರೆಸ್ ಕೋಡ್ ಪಾಲನೆಯಲ್ಲಿ ವೆಂಕಯ್ಯ ನಾಯ್ಡು ಅವರ ಶಿಸ್ತಿನ ಬಗ್ಗೆ ಜೋಶಿ ಭಾಷಣದಲ್ಲಿ ಉಲ್ಲೇಖಿಸಿದರು.
ಸದನದಲ್ಲಿ 22 ಪ್ರಾದೇಶಿಕ ಭಾಷೆಗೆ ಅನುಮತಿ; ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾಪತಿಯಾಗಿ ಸದನದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸುಮಾರು 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ರಾಜ್ಯಸಭೆಯಲ್ಲಿ ಅನುಮತಿ ನೀಡಿದ್ದರು ಎಂದರು.
ಅಂತಹ ಉನ್ನತ ಹುದ್ದೆಯಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ವಂದನಾ ಭಾಷಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತೃ ಭಾಷೆಯಲ್ಲಿಯೇ ಮಾತನಾಡುವ ಮೂಲಕ ರಾಜ್ಯಸಭೆಯ ಮೇಲ್ಪಂಕ್ತಿಯಿಂದ ಪ್ರಶಂಸೆಗೆ ಪಾತ್ರವಾಯಿತು.
ಇನ್ನು ವೆಂಕಯ್ಯ ನಾಯ್ಡು ಅವರ ಸರಳ ಸ್ವಭಾವ, ಬೆಂಗಳೂರಿಗೆ ಬಂದರೆ ಸಣ್ಣ ಜನಾರ್ಧನ ಹೋಟೆಲ್ಗೆ ಹೋಗುವ ಅವರ ಸರಳತೆ, ಯಾವ ಹುದ್ದೆಯಲ್ಲಿದ್ದರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನು ಜೋಶಿ ಪ್ರಶಂಸಿದರು. ದಣಿವರಿಯದ ನಾಯಕರ ಮಾರ್ಗದರ್ಶನ ನಮಗಿರಲಿ ಎಂದು ಜೋಶಿ ಅವರು ಶುಭ ಹಾರೈಸಿ ಬೀಳ್ಕೊಟ್ಟರು.