ಸದನದಲ್ಲೇ ಗಳ-ಗಳನೇ ಅತ್ತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
Recommended Video
ನವದೆಹಲಿ, ಜುಲೈ 29: ಹಳೆಯ ಗೆಳೆಯನನ್ನು ನೆನೆದು ಸದನದ ಪೀಠದಲ್ಲಿ ಕುಳಿತುಕೊಂಡೇ ಉಪರಾಷ್ಟ್ರಪತಿ, ರಾಜ್ಯಸಭೆ ಸಭಾದ್ಯಕ್ಷ ವೆಂಕಯ್ಯನಾಯ್ಡು ಅವರು ಭಾವುಕರಾಗಿ ಗಳಗಳನೆ ಅತ್ತರು.
ನಿನ್ನೆ ನಿಧನರಾದ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರಿಗೆ ಇಂದು ರಾಜ್ಯಸಭೆಯಲ್ಲಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಅವರು ಭಾವುಕರಾಗಿ ಪೀಠದಲ್ಲಿ ಕುಳಿತುಕೊಂಡೇ ಅತ್ತುಬಿಟ್ಟರು. ಪಕ್ಕದಲ್ಲಿ ನಿಂತಿದ್ದ ರಾಜ್ಯಸಭೆ ಸಿಬ್ಬಂದಿ ವೆಂಕಯ್ಯ ಅವರಿಗೆ ನೀರು ಕೊಟ್ಟು ಉಪಚರಿಸಿದರು.
ಸಮಾಜವಾದಿ ಗುರುವಿನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್
ಜೈಪಾಲ್ ರೆಡ್ಡಿ ಅವರು ವೆಂಕಯ್ಯ ನಾಯ್ಡು ಅವರಿಗೆ ಹಳೆಯ ಆತ್ಮೀಯ ಮಿತ್ರರು. ಇಬ್ಬರೂ ವಿರುದ್ಧ ಪಕ್ಷದಲ್ಲಿ ಇದ್ದರೂ ಸಹ ಅತ್ಯಂತ ಆತ್ಮೀಯ ಗೆಳೆಯರಾಗಿದ್ದರು. 1970 ರಲ್ಲಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ವೆಂಕಯ್ಯನಾಯ್ಡು, 'ಬೆಳಿಗ್ಗೆ 7 ಗಂಟೆಗೆ ಒಟ್ಟಿಗೆ ತಿಂಡಿ ತಿನ್ನುತ್ತಾ ಎಷ್ಟೋಂದು ವಿಷಯಗಳನ್ನು ನಾವು ಚರ್ಚೆ ಮಾಡುತ್ತಿದ್ದೆವು' ಎಂದು ಹೇಳಿ ಗದ್ಗದಿತರಾದರು.
ಜೈಪಾಲ್ ರೆಡ್ಡಿ ಅವರೊಂದಿಗಿನ ಗೆಳೆತನ, ಒಡನಾಟದ ಬಗ್ಗೆ ರಾಜ್ಯಸಭೆಯಲ್ಲಿ ಭಾವುಕರಾಗಿ ಮಾತನಾಡಿದ ವೆಂಕಯ್ಯ ನಾಯ್ಡು, 'ಅವರೊಬ್ಬ ಅದ್ಭುತ ಗೆಳೆಯ, ಮಾರ್ಗದರ್ಶಕ, ನಾನು ಅವರಿಗಿಂತಲೂ 6 ವರ್ಷ ಕಿರಿಯ, ನನಗೆ ದುಃಖ ತಡೆದುಕೊಳ್ಳಲಾಗಲಿಲ್ಲ' ಎಂದು ಕಣ್ಣೀರು ಒರೆಸಿಕೊಂಡ ವೆಂಕಯ್ಯ ನಾಯ್ಡು ಸದನದ ಕ್ಷಮೆ ಕೋರಿದರು.
ಕಾಂಗ್ರೆಸ್ ಹಿರಿಯ ನಾಯಕ ಜೈಪಾಲ್ ರೆಡ್ಡಿ ವಿಧಿವಶ
'ಜೈಪಾಲ್ ರೆಡ್ಡಿ ಅವರೊಬ್ಬ ಅದ್ಭುತ ಆಡಳಿತಗಾರ, ಅವರಿಗೆ ಅದ್ಬುತವಾದ ಮುಂದಾಲೋಚನೆ ಇತ್ತು, ಅವರಿಗೆ ಬಡವರ ಪರ ಕಾಳಜಿ ಇತ್ತು ಎಂದು ಮನಸಾರೆ ಹೊಗಳಿದ ವೆಂಕಯ್ಯ ನಾಯ್ಡು, ಜೈಪಾಲ್ ರೆಡ್ಡಿ ಅವರ ಅಗಲಿಕೆ ತಮಗೆ ತೀವ್ರ ನೋವುಂಟು ಮಾಡಿದೆ' ಎಂದು ಸದನದಲ್ಲಿ ಹೇಳಿದರು.