ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ
ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆದೇಶದ 15ನೇ ಉಪರಾಷ್ಟ್ರಪತಿಯಾಗಿ ಎಂ.ವೆಂಕಯ್ಯ ನಾಯ್ಡು ಆಯ್ಕೆ
ಬೆಂಗಳೂರು, ಆ.05 : ಉಪ ರಾಷ್ಟ್ರಪತಿ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ದೇಶದ 15ನೇ ಉಪರಾಷ್ಟ್ರಪತಿಯಾಗಿ ಎಂ.ವೆಂಕಯ್ಯ ನಾಯ್ಡು ಆಯ್ಕೆ ಯಾಗಿದ್ದಾರೆ. ಎನ್ಡಿಎ ಬೆಂಬಲಿತ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಚುನಾವಣೆಗೆ ಸ್ಪರ್ಧಿಸಿದ್ದರು.
ಶನಿವಾರ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಿತು. ಶೇ 98.21ರಷ್ಟು ಮತದಾನವಾಗಿತ್ತು. ಸಂಜೆಯೇ ಮತ ಎಣಿಕೆ ನಡೆದಿದ್ದು, ವೆಂಕಯ್ಯ ನಾಯ್ಡು 516 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಕ್ತಿಚಿತ್ರ
ವೆಂಕಯ್ಯ ನಾಯ್ಡು ಅವರ ವಿರುದ್ಧ ಯುಪಿಎ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅವರು 244 ಮತಗಳನ್ನು ಪಡೆದು ಸೋಲು ಅನುಭವಿಸಿದರು. 771 ಸಂಸದರು ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ್ದರು. ಈ ಪೈಕಿ 11 ಮತಗಳು ಅಸಿಂಧುವಾದವು.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ 1949 ಜುಲೈ 1ರಂದು ಜನಿಸಿದ ವೆಂಕಯ್ಯ ನಾಯ್ಡು ಅವರು 1978 ಮತ್ತು 1983ರಲ್ಲಿ ಆಂಧ್ರ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ನಗರಾಭಿವೃದ್ಧಿ, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
1998, 2004, 2010 ಹೀಗೆ ಮೂರು ಬಾರಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆಗಸ್ಟ್ 10ರಂದು ಹಮೀದ್ ಅನ್ಸಾರಿ ಅವರ ಅವಧಿ ಮುಗಿಯಲಿದ್ದು, ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.