ಇನ್ನು 4 ದಿನಗಳಲ್ಲಿ ಆಂಧ್ರಕ್ಕೆ ಅಪ್ಪಳಿಸಲಿದೆ 'ವರ್ಧಾ'
ಬೆಂಗಳೂರು, ಡಿಸೆಂಬರ್ 8: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ತೀವ್ರವಾದ ವಾಯುಭಾರ ಕುಸಿತವಾಗಿದ್ದು, ಸೈಕ್ಲೋನ್ ಮಾರುತ 'ವರ್ಧಾ' ಬೀಸುವ ಸಾಧ್ಯತೆಗಳಿವೆ. ಈ ಮಾರುತ ವಿಶಾಖಪಟ್ಟಣ ಆಗ್ನೇಯ ಭಾಗದ 1040 ಕಿ.ಮೀ ಹಾಗೂ ಮಚಲೀ ಪಟ್ಣಂನ ಪೂರ್ವದ ಆಗ್ನೇಯ ಭಾಗಕ್ಕೆ 1,135 ಕಿ.ಮೀ. ದೂರದಲ್ಲಿದೆ.
ತೀವ್ರವಾದ ಸೈಕ್ಲೋನ್ ಮಾರುತದ ಸಾಧ್ಯತೆಗಳು ಇದ್ದು. ಮಾರುತವು ಕೆಲ ಕಾಲ ಉತ್ತರಕ್ಕೆ ಬೀಸಿ, ಆ ನಂತರ ಉತ್ತರ-ಪಶ್ಚಿಮಕ್ಕೆ ಚಲಿಸುತ್ತಾ ಮುಂದಿನ ನಾಲ್ಕು ದಿನಗಳಲ್ಲಿ ಆಂಧ್ರ ಪ್ರದೇಶದ ಕಡಲುತೀರದ ಭಾಗಕ್ಕೆ ತಲುಪವ ಸಾಧ್ಯತೆಗಳಿವೆ ಎಂದು ಸೈಕ್ಲೋನ್ ಎಚ್ಚರಿಕೆ ಕೇಂದ್ರದ ವಕ್ತಾರ ತಿಳಿಸಿದ್ದಾರೆ.[ತಮಿಳುನಾಡಿಗೆ 'ನಾಡಾ' ಚಂಡಮಾರುತ , ಕರ್ನಾಟಕದಲ್ಲೂ ಮಳೆ]
ಸಂಭವನೀಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸಮುದ್ರದಲ್ಲಿ ಇರುವವರು ಡಿಸೆಂಬರ್ 10ರೊಳಗೆ ತೀರಕ್ಕೆ ಹಿಂತಿರುಗುವಂತೆ ಈಗಾಗಲೇ ತಿಳಿಸಲಾಗಿದೆ. ಇನ್ನು ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು ಹಾಗೂ ಪುದುಚೆರಿಯ ಕೆಲವು ಪ್ರದೇಶಗಳಲ್ಲಿ ಗುಡುಗುಸಹಿತ ತುಂತುರು ಮಳೆ ಸಾಧ್ಯತೆ ಇದೆ.
ದಕ್ಷಿಣ ತಮಿಳುನಾಡು ಹಾಗೂ ಅಕ್ಕಪಕ್ಕದಲ್ಲಿ ಸೈಕ್ಲೋನ್ ಮಾರುತಗಳ ಪ್ರಭಾವ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಗುಡುಗು ಸಹಿತ ತುಂತುರು ಮಳೆ ಸಾಧ್ಯತೆ ಇದೆ.