ವಾರಾಣಸಿ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು 12 ಬಲಿ
ವಾರಾಣಸಿ, ಮೇ 15: ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಭಾಗವೊಂದು ಕುಸಿದು ಕನಿಷ್ಠ 12 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಮೇಲ್ಸೇತುವೆಯ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಂದೇಹ ವ್ಯಕ್ತವಾಗಿದೆ.
ವಾರಾಣಸಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ಫ್ಲೈಓವರ್ನ ಎರಡು ಪಿಲ್ಲರ್ಗಳು ಕುಸಿದುಬಿದ್ದಿವೆ. ಇದರಿಂದ ಪಿಲ್ಲರ್ಗಳ ಮೇಲೆ ಅಳವಡಿಸಿದ್ದ ಬೃಹತ್ ಗಾತ್ರದ ಕಾಂಕ್ರೀಟ್ ಸ್ಲ್ಯಾಬ್ ಧರೆಗುರುಳಿದೆ. ಅದರ ಅಡಿಯಲ್ಲಿ ಸಿಲುಕಿದ ಕಾರ್ಗಳು ಮತ್ತು ಬಸ್ ನಜ್ಜುಗುಜ್ಜಾಗಿವೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಲ್ಲಿ ಹೆಚ್ಚಿನವರು ಮೇಲ್ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಾಗಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ತಂಡದ 250 ಸಿಬ್ಬಂದಿಯನ್ನು ಒಳಗೊಂಡ 5 ತಂಡಗಳು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿವೆ. ಪೊಲೀಸರು ಕೂಡ ಸ್ಥಳದಲ್ಲಿದ್ದು, ನೆರವು ನೀಡುತ್ತಿದ್ದಾರೆ.
ಅವಶೇಷಗಳನ್ನು ತೆರವುಗೊಳಿಸಲು ಎಂಟು ಕ್ರೇನ್ಗಳನ್ನು ಬಳಸಲಾಗುತ್ತಿದ್ದು, 200 ಟನ್ಗೂ ಅಧಿಕ ತೂಕವನ್ನು ಎತ್ತಬಲ್ಲ ಸಾಮರ್ಥ್ಯದ ಕ್ರೇನ್ಅನ್ನು ತರಿಸಲಾಗುತ್ತಿದೆ.
Extremely saddened by the loss of lives due to the collapse of an under-construction flyover in Varanasi. I pray that the injured recover soon. Spoke to officials and asked them to ensure all possible support to those affected.
— Narendra Modi (@narendramodi) 15 May 2018
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಪ್ರಥಮ ಆದ್ಯತೆಯಾಗಿ ಗ್ಯಾಸ್ ಕಟರ್ಗಳನ್ನು ಬಳಸಲಾಗುತ್ತಿದೆ. ನಾಲ್ಕು ಕಾರ್ಗಳು, ಆಟೊ ರಿಕ್ಷಾ ಮತ್ತು ಒಂದು ಮಿನಿಬಸ್ ಪುಡಿಯಾಗಿವೆ. ಘಟನೆ ನಡೆದು ಒಂದು ಗಂಟೆಯ ಬಳಿಕ ಅಧಿಕಾರಿಗಳು ನೆರವು ನೀಡಲು ದೌಡಾಯಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಅನೇಕರು ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಘಟನೆ ಸಂಬಂಧ 48 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.