'ಜಗತ್ತಿನಾದ್ಯಂತ ಅತ್ಯಾಚಾರಕ್ಕೆ ವ್ಯಾಲೆಂಟೇನ್ಸ್ ಡೇ ಕಾರಣ'
ಜೈಪುರ್, ಜೂನ್ 3: ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಅವರ ಮಾತುಗಳನ್ನೇ ನಂಬುವುದಾದರೆ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅನೈತಿಕ ಸಂತಾನಕ್ಕೆ 'ಪಾಶ್ಚಾತ್ಯ' ಸಂಸ್ಕೃತಿಯಾದ ಪ್ರೇಮಿಗಳ ದಿನವೇ ಕಾರಣ.
ಆರೆಸ್ಸೆಸ್ ಸ್ವಯಂಸೇವಕರ ತರಬೇತಿ ಕಾರ್ಯಕ್ರಮ ಪೂರ್ಣಗೊಂಡ ನಂತರ ಇಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರೀತಿ ಅಂದರೆ ದೈವಿಕವಾದದ್ದು ಹಾಗೂ ಪವಿತ್ರವಾದದ್ದು ಎಂಬ ಭಾವನೆ ಇದೆ. ಆದರೆ ಪಾಶ್ಚಾತ್ಯರಲ್ಲಿ ವಾಣಿಜ್ಯವಾಗಿ ಬಿಟ್ಟಿದೆ. ಹಬ್ಬದಂತೆ ಆಚರಿಸಲಾಗುತ್ತಿದೆ ಎಂದರು.
ಪ್ರೀತಿ ಅಂದರೆ ರಾಧಾ-ಕೃಷ್ಣ, ಲೈಲಾ-ಮಜ್ನು, ಹೀರಾ-ರಾಂಜಾ ಕಥೆಗಳನ್ನು ಹಾಡಲಾಗುತ್ತದೆ. ಆದರೆ ಪಾಶ್ಚಾತ್ಯರು ವಾಣಿಜ್ಯ್ ರೂಪ ನೀಡಿದ್ದಾರೆ. ಅದರಿಂದಲೇ ಅತ್ಯಾಚಾರ, ಅನೈತಿಕ ಮಕ್ಕಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯಲು ಕಾರಣವಾಗುತ್ತಿದೆ ಎಂದಿದ್ದಾರೆ.[RSS ಇಲ್ಲದಿದ್ರೆ ಕಾಶ್ಮೀರ, ಪಾಕಿಸ್ತಾನದ ಪಾಲಾಗುತ್ತಿತ್ತು: ಯೋಗಿ]
ಭಾರತ ಅಷ್ಟೇ ಅಲ್ಲ, ಇಡೀ ಜಗತ್ತು ಈ ಸಮಸ್ಯೆ ಎದುರಿಸುತ್ತಿದೆ. ಆರೆಸ್ಸೆಸ್ ನಿಂದ ಆತ್ಮ ಶುದ್ಧಿ ಆಗುತ್ತದೆ. ವ್ಯಕ್ತಿತ್ವದಲ್ಲಿ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳು ಒಳಗೊಳ್ಳುತ್ತವೆ. ಜನರ ಆತ್ಮ ಶುದ್ಧಿಗಾಗಿ ಚಳವಳಿಯೇ ನಡೆಯಬೇಕು. ಆಗ ಸಮಾಜ ಹಾಗೂ ದೇಶದ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದಾರೆ.
ಅಸ್ಪೃಶ್ಯತೆ ಹಾಗೂ ಜಾತೀಯತೆಗೆ ಆರೆಸ್ಸೆಸ್ ಯಾವಾಗಲೂ ವಿರುದ್ಧವಾಗಿದೆ. ಅಂಥ ಪಿಡುಗನ್ನು ತೊಲಗಿಸಲು ಪಣ ತೊಡಬೇಕು ಎಂದು ಇಂದ್ರೇಶ್ ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಕಲ್ಲೆಸೆಯುವವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎನ್ನುವವರ ವಿರುದ್ಧ ವಾಗ್ದಾಳಿ ನಡೆಸಿದರು.