ನಮಗ್ಯಾಕೆ ಕೊರೊನಾ ಲಸಿಕೆ: ಪ್ರಶ್ನೆ ಕೇಳುವವರಿಗೆ ಇಲ್ಲಿದೆ ಉತ್ತರ
ನವದೆಹಲಿ, ಏಪ್ರಿಲ್ 22: ಕೊರೊನಾವೈರಸ್ ಲಸಿಕೆಯು ತೀವ್ರ ಅನಾರೋಗ್ಯದಿಂದ ರಕ್ಷಿಸುತ್ತದೆಯೇ ವಿನಃ ಸೋಂಕು ಹರಡದಂತೆ ನಿಯಂತ್ರಿಸುವುದಿಲ್ಲ ಎಂದು ನವದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ.
ನಾರಾಯಣ ಆರೋಗ್ಯ ಕೇಂದ್ರ ಚೇರ್ ಮನ್ ಡಾ. ದೇವಿ ಶೆಟ್ಟಿ, ಮೇದಾಂತ ಚೇರ್ ಮನ್ ಡಾ. ನರೇಶ್ ತೆಹ್ರಾನ್ ಅವರ ಜೊತೆಗೆ ಬುಧವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ಕೊರೊನಾವೈರಸ್ ಲಸಿಕೆ ಬಗ್ಗೆ ಚರ್ಚೆ ನಡೆಸಲಾಯಿತು.
ಭಾರತದಲ್ಲಿ ಹೊಸ ಅಲೆಯ ಆತಂಕ: ಕೊರೊನಾ 3ನೇ ರೂಪಾಂತರ ತಳಿ!
ಕೊವಿಡ್-19 ಲಸಿಕೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವಿನ್ಯಾಸಗೊಳ್ಳುತ್ತದೆ. ಇದರಿಂದ ಸೋಂಕು ತೀವ್ರಗೊಂಡು ಸಾವಿನ ಹಂತಕ್ಕೆ ತಲುಪುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆಯೇ ವಿನಃ ಸೋಂಕು ಹರಡದಂತೆ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೊನಾ ಅಂಟದಂತೆ ರಕ್ಷಿಸುವುದಿಲ್ಲ ಲಸಿಕೆ
"ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯಿಂದ ಏನು ಉಪಯೋಗ ಎಂದು ಸಾಕಷ್ಟು ಮಂದಿ ಪ್ರಶ್ನಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡು ಎರಡು ವಾರಗಳಲ್ಲಿ ಲಸಿಕೆ ಹಾಕಿಸಿಕೊಂಡವರಿಗೇ ಕೊವಿಡ್-19 ಸೋಂಕು ತಗುಲಿರುವ ಉದಾಹರಣೆಗಳಿವೆ. ಆದರೆ ಲಸಿಕೆಯು ಕೊರೊನಾವೈರಸ್ ಸೋಂಕಿನಿಂದ ಉಂಟಾಗುವ ತೀವ್ರ ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸುತ್ತದೆ. ಆಸ್ಪತ್ರೆಗೆ ದಾಖಲಾಗುವುದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ಅಥವಾ ಸಾವನ್ನಪ್ಪುವ ಆತಂಕದಿಂದ ದೂರ ಮಾಡುತ್ತದೆ. ಲಸಿಕೆಯು ಸೋಂಕು ಹರಡದಂತೆ ತಡೆಯುವುದಿಲ್ಲ" ಎಂದು ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಕೊವಿಡ್-19 ಸೋಂಕು ಹೇಗೆ ಹರಡುತ್ತದೆ ಗೊತ್ತೆ?
ನೀವು ಕೊರೊನಾವೈರಸ್ ರೋಗವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂದುಕೊಳ್ಳೋಣ. ಆದರೆ ಕೆಲವು ಸಮಯದಲ್ಲಿ ನೀವು ಕೊವಿಡ್-19 ಸೋಂಕಿತನೊಂದಿಗೆ ಬೆರೆತಾಗ ನಿಮಗೆ ಗೊತ್ತಿಲ್ಲದೇ, ನಿಮ್ಮ ಮೂಗು ಮತ್ತು ಗಂಟಲಿಗೆ ಸೋಂಕು ಅಂಟಿಕೊಳ್ಳುತ್ತದೆ. ಲಸಿಕೆ ತೆಗೆದುಕೊಂಡಿದ್ದರಿಂದ ನಿಮ್ಮ ದೇಶದಲ್ಲಿ ರೋಗನಿರೋಧಕ ಶಕ್ತಿಯು ವೃದ್ಧಿಯಾಗಿರುತ್ತದೆ. ಇದರಿಂದ ನಿಮ್ಮ ದೇಹವನ್ನು ಪ್ರವೇಶಿಸಿದ ಸೋಂಕು ನಿಮ್ಮನ್ನು ತೀವ್ರ ಅನಾರೋಗ್ಯಕ್ಕೀಡು ಮಾಡದಂತೆ ನೋಡಿಕೊಳ್ಳುತ್ತದೆ. ಹೀಗಿದ್ದರೂ ಕೂಡಾ RT-PCR ಪರೀಕ್ಷೆಯಲ್ಲಿ ನಿಮಗೆ ಬೇರೊಬ್ಬರಿಂದ ಸೋಂಕು ಅಂಟಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಕೊವಿಡ್-19 ವಿರುದ್ಧ ಹೋರಾಡಲು ಲಸಿಕೆಯೇ ಅಸ್ತ್ರ
ಭಾರತದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಲಸಿಕೆಯು ಒಂದು ಅಸ್ತ್ರವಾಗಿದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ಲಸಿಕೆ ಒಂದು ಅಸ್ತ್ರವಾಗಿದೆಯೇ ವಿನಃ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಇದರಿಂದ ಸಾಧ್ಯವಿಲ್ಲ. ಲಸಿಕೆ ಪಡೆದ ನಂತರದಲ್ಲೂ ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯರಲ್ಲಿ ನಡುಕ ಹುಟ್ಟಿಸಿದ ಕೊವಿಡ್-19
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,14,835 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 2,104 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಒಂದು ದಿನದಲ್ಲಿ 1,78,841 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 1,59,30,965 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 1,34,54,880 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,84,657 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 22,91,428 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Recommended Video
ದೇಶದಲ್ಲಿ ಮೂರು ಮಾದರಿ ಕೊರೊನಾ ಲಸಿಕೆ ವಿತರಣೆ
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೂ ಅನುಮೋದನೆ ನೀಡಲಾಗಿದೆ.