ಉತ್ತರಾಖಂಡ್ ರಕ್ಷಣಾ ಕಾರ್ಯಾಚರಣೆಗೆ 20 ಕೋಟಿ ಬಿಡುಗಡೆ
ಡೆಹ್ರಾಡೂನ್, ಫೆಬ್ರವರಿ.07: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮನದಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 202ಕ್ಕೂ ಅಧಿಕ ಮಂದಿ ಕಾರ್ಮಿಕರು ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರಾಖಂಡ್ ನಲ್ಲಿ ಸಂಭವಿಸಿದ ಹಿಮನದಿ ಸ್ಫೋಟ ಮತ್ತು ಪ್ರವಾಹ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಕ್ಷಣಾ ಕಾರ್ಯಾಚರಣೆ ಅನುಕೂಲಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದರು.
Uttarakhand glacier burst live updates: 100ಕ್ಕೂ ಅಧಿಕ ಮಂದಿ ಸಾವಿನ ಶಂಕೆ?
ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಮತ್ತು ಉತ್ತರಾಖಂಡ್ ಸಂಸದರ ಸಭೆ ನಡೆಸಲಾಯಿತು ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಯಾವ ಹಂತದಲ್ಲಿ ನಡೆಯುತ್ತಿದೆ ಎನ್ನುವುದರ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.
ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆ:
ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ತಂಡವು ಉತ್ತರಾಖಂಡ್ ನ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನಾ ಪಡೆಯ 6 ತಂಡ ಮತ್ತು ನೌಕಾಪಡೆಯ ಆರು ತಂಡವನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.
ಎನ್ ಟಿಪಿಸಿ ಪವರ್ ಪ್ರಾಜೆಕ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 148 ಮಂದಿ ಕಾರ್ಮಿಕರು ಮತ್ತು ರಿಷಿ ಗಂಗಾ ಪವರ್ ಪ್ರಾಜೆಕ್ಟ್ ಕೆಲಸ ಮಾಡುತ್ತಿದ್ದ 22 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಂದು ಸುರಂಗದಲ್ಲಿ ಸಿಲುಕಿದ್ದ 12 ಮಂದಿ ಕಾರ್ಮಿಕರನ್ನು ಐಟಿಬಿಪಿ ತಂಡವು ರಕ್ಷಿಸಿದೆ. 2.5 ಕಿಲೋ ಮೀಟರ್ ಉದ್ದದ ಮತ್ತೊಂದು ಸುರಂಗದಲ್ಲಿ 30 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.