ಖಾತೆ ಹಂಚಿಕೆ: 23 ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡ ಉತ್ತರಾಖಂಡ ಸಿಎಂ
ಡೆಹ್ರಾಡೂನ್, ಮಾರ್ಚ್ 30: ಎರಡನೇ ಬಾರಿಗೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಷ್ಕರ್ ಸಿಂಗ್ ಧಾಮಿ, ಒಂದು ವಾರದ ನಂತರ ಮಂಗಳವಾರ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಿದ್ದಾರೆ. ಆದರೆ 23 ಇಲಾಖೆಗಳನ್ನು ತಮ್ಮ ಬಳಿಯೇ ಪುಷ್ಕರ್ ಸಿಂಗ್ ಧಾಮಿ ಉಳಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 23 ಇಲಾಖೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರೆ, ಸತ್ಪಾಲ್ ಮಹಾರಾಜ್ ಅವರಿಗೆ ಪಿಡಬ್ಲ್ಯೂಡಿ ಸೇರಿದಂತೆ 10 ಇಲಾಖೆಗಳನ್ನು ಹೊಂದಿದ್ದಾರೆ. ಗಣೇಶ್ ಜೋಶಿ ಅವರಿಗೆ 9, ಧನ್ ಸಿಂಗ್ ರಾವತ್, ಸೌರಭ್ ಬಹುಗುಣ, ಚಂದನ್ ರಾಮದಾಸ್ ಮತ್ತು ಪ್ರೇಮಚಂದ್ ಅಗರ್ವಾಲ್ ಅವರಿಗೆ ತಲಾ 6 ಇಲಾಖೆಗಳು ಮತ್ತು ಸುಬೋಧ್ ಉನಿಯಾಲ್, ರೇಖಾ ಆರ್ಯ ತಲಾ 4 ಇಲಾಖೆಗಳನ್ನು ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಮಿಕ ಖಾತೆ, ಗೃಹ ಖಾತೆ, ಅಬಕಾರಿ ಸೇರಿದಂತೆ 23 ಇಲಾಖೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಉತ್ತರಾಖಂಡದಲ್ಲಿ ಬಿಜೆಪಿ ಟಿಕೆಟ್ ಪಡೆದ ಆರೂ ಮಹಿಳೆಯರು ವಿನ್!
ಇದಕ್ಕೂ ಹಿಂದಿನ ದಿನ ಉತ್ತರಾಖಂಡದ ನೂತನವಾಗಿ ಚುನಾಯಿತವಾದ ವಿಧಾನಸಭೆಯ ಮೊದಲ ಅಧಿವೇಶನ ನಡೆಯಿತು. ಈ ಅಧೀವೇಶನದಲ್ಲಿ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಹಣಕಾಸು ವರ್ಷದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು ಮತ್ತು ಅಭಿವೃದ್ಧಿ ಗುರಿಗಳನ್ನು ವಿವರಿಸುವ ಮೂಲಕ ಈ ಅಧಿವೇಶನಕ್ಕೆ ಚಾಲನೆ ನೀಡಲಾಗಿದೆ.
ಆರೋಗ್ಯ ಸೌಲಭ್ಯಗಳ ಸುಧಾರಣೆಯು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ವಿವರಿಸಿದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್, ಆಸ್ಪತ್ರೆಗಳನ್ನು ಬಲಪಡಿಸಲು ಮತ್ತು ವೈದ್ಯರ ಲಭ್ಯತೆಯನ್ನು ಹೆಚ್ಚಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾತನಾಡಿದರು.
ಮುಖ್ಯಮಂತ್ರಿ ವಾತ್ಸಲ್ಯ ಯೋಜನೆ ಬಗ್ಗೆ ಉಲ್ಲೇಖಿಸಿದ ಗವರ್ನರ್
ರಾಜ್ಯಪಾಲರು ಮುಖ್ಯಮಂತ್ರಿ ವಾತ್ಸಲ್ಯ ಯೋಜನೆಯ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಿದರು. ಈ ಮುಖ್ಯಮಂತ್ರಿ ವಾತ್ಸಲ್ಯ ಯೋಜನೆ ಅಡಿಯಲ್ಲಿ ಕೊರೊನಾ ವೈರಸ್ ಕಾರಣದಿಂದಾಗಿ ತಮ್ಮ ಹೆತ್ತವರು ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 21 ವರ್ಷದವರೆಗೆ ಮಾಸಿಕ 3,000 ರೂ. ನೀಡಲಾಗುತ್ತದೆ.
ಉತ್ತರಾಖಂಡ್ ಫಲಿತಾಂಶ: ಬಿಜೆಪಿ, ಕಾಂಗ್ರೆಸ್ ಶೇಕಡಾವಾರು ಮತ ಗಳಿಕೆ
ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳು ಮತ್ತು ಪ್ರಯೋಗಗಳ ಕುರಿತು ಮಾತನಾಡಿದ ಗವರ್ನರ್ ಗುರ್ಮಿತ್ ಸಿಂಗ್, 189 ಅಟಲ್ ಉತ್ಕೃಷ್ಟ್ ಸರ್ಕಾರಿ ಮಾಧ್ಯಮಿಕ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲಾಗಿದೆ. ಜೊತೆಗೆ 14 ಹೊಸ ಸರ್ಕಾರಿ ಕಾಲೇಜುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಕಂಪ್ಯೂಟರ್ಗಳನ್ನು ಖರೀದಿಸಲು ನೇರವಾಗಿ ಹಣ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ (SC) ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಇರುವ ಗ್ರಾಮಗಳನ್ನು ಮರು-ಅಭಿವೃದ್ಧಿಗಾಗಿ ಆಯ್ಕೆ ಮಾಡಲಾಗಿದೆ," ಎಂದು ವಿವರಿಸಿದರು.
ಒಂದು ವಾರದ ಹಿಂದೆ ಪ್ರಮಾಣವಚನ ಸ್ವೀಕರಿಸಿದ ಉತ್ತರಾಖಂಡ ಸಿಎಂ
ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 47 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಅಧಿಕಾರವನ್ನು ಪಕ್ಕಾ ಮಾಡಿಕೊಂಡು ಒಂದು ವಾರದ ಹಿಂದೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಿದೆ. ಹಂಗಾಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೇರಿದಂತೆ ವಿವಿಧ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಉಪಸ್ಥಿತರಿದ್ದರು ಶಿವರಾಜ್ ಸಿಂಗ್ ಚೌಹಾಣ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಕೂಡಾ ಉಪಸ್ಥಿತರಿದ್ದರು. (ಒನ್ಇಂಡಿಯಾ ಸುದ್ದಿ)