ಕೊರೊನಾ ನಿರ್ಬಂಧದ ನಡುವೆ ಚಾರ್ ಧಾಮ್ ಯಾತ್ರೆಗೆ ಅವಕಾಶ
ಉತ್ತರಾಖಂಡ, ಜೂನ್ 14: ಕೊರೊನಾ ಪ್ರಕರಣಗಳ ಇಳಿಕೆ ಬೆನ್ನಲ್ಲೇ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ಜೂನ್ 15ರಿಂದ ಚಮೋಲಿ, ರುದ್ರಪ್ರಯಾಗ ಹಾಗೂ ಉತ್ತರಕಾಶಿಯಲ್ಲಿ ಯಾತ್ರೆಗೆ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟಿರುವುದಾಗಿ ರಾಜ್ಯ ಸರ್ಕಾರ ಸೋಮವಾರ ಘೋಷಣೆ ಮಾಡಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಲ್ಲಿ ಜೂನ್ 15ರಿಂದ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಸ್ಥಾನಕ್ಕೆ ಬರುವ ಸ್ಥಳೀಯರು ತಮ್ಮ ಕೊರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ಕ್ಯಾಬಿನೆಟ್ ಸಚಿವ ಹಾಗೂ ಸರ್ಕಾರದ ಆಯುಕ್ತ ಸುಬೋಧ್ ಉನಿಯಾಲ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ: ಚಾರ್ ಧಾಮ್ ಯಾತ್ರೆ ರದ್ದು
ಜೂನ್ 15ರಿಂದ ಜೂನ್ 22ರವರೆಗೆ ಉತ್ತರಾಖಂಡದಲ್ಲಿ ಕೆಲವು ಸಡಿಲಿಕೆಗಳೊಂದಿಗೆ ಕೊರೊನಾ ಕರ್ಫ್ಯೂ ವಿಸ್ತರಿಸಲಾಗಿದೆ. ಮದುವೆಗೆ ಹಾಗೂ ಅಂತ್ಯಸಂಸ್ಕಾರಕ್ಕೆ ಸೇರಬೇಕಾದ ಜನರ ಸಂಖ್ಯೆಯನ್ನು 20 ರಿಂದ 50ಕ್ಕೆ ಏರಿಸಲಾಗಿದೆ.
ಈಚೆಗಷ್ಟೆ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, "ಚಾರ್ ಧಾಮ್ ಯಾತ್ರೆಯನ್ನು ಹಂತ ಹಂತವಾಗಿ ತೆರೆಯಲಾಗುತ್ತದೆ. ಮೊದಲು ಸ್ಥಳೀಯರಿಗೆ ಅವಕಾಶ ನೀಡಿ ನಂತರ ಹೊರಗಿನವರಿಗೆ ಅವಕಾಶ ಕಲ್ಪಿಸಲಾಗುತ್ತದೆ," ಎಂದು ಹೇಳಿದ್ದರು.
ಕೊರೊನಾ ಕಾರಣವಾಗಿ ಮೇ 14ರಿಂದ ನಡೆಯಬೇಕಿದ್ದ ಯಾತ್ರೆಗೆ ಏಪ್ರಿಲ್ 29ರಂದು ತಡೆ ನೀಡಲಾಗಿತ್ತು. ಆನ್ಲೈನ್ ಮೂಲಕವೇ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿ ದೇವಾಲಯಗಳ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.