ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸುತ್ತ 'ನಕ್ಷೆ' ವಿವಾದ
ಡೆಹ್ರಾಡೂನ್, ಜುಲೈ 04: ಉತ್ತರಾಖಂಡದಲ್ಲಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲೇ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸುತ್ತ ವಿವಾದ ಸುತ್ತಿಕೊಂಡಿದೆ. ಆರು ವರ್ಷಗಳ ಹಿಂದಿನ ಅಖಂಡ ಭಾರತದ ಪೋಸ್ಟ್ ಇದೀಗ ಸುದ್ದಿ ಆಗುತ್ತಿದೆ. ಈ ಹಿಂದೆ ಇದೇ ಬಿಜೆಪಿ ನಾಯಕ ಪುಷ್ಕರ್ ಸಿಂಗ್ ಧಾಮಿ ಪೋಸ್ಟ್ ಮಾಡಿದ್ದ ಅಖಂಡ ಭಾರತದ ನಕ್ಷೆ ವಿವಾದಕ್ಕೆ ಕಾರಣವಾಗಿದೆ.
ಅಖಂಡ ಭಾರತ ಎಂದು ಹೇಳಲಾಗಿದ್ದ ನಕ್ಷೆಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಪ್ರದೇಶಗಳು ಸೇರಿವೆ. ಆದರೆ ಈ ನಕ್ಷೆಯಲ್ಲಿ ಭಾರತಕ್ಕೆ ಸಂಬಂಧಿಸಿದ ಕೆಲವು ಲಡಾಖ್ ಹಾಗೂ ಪಾಕ್ ಆಕ್ರಮಿತ ಪ್ರದೇಶದ ಕೆಲವು ಭಾಗಗಳು ಗೋಚರಿಸದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ
ಭಾರತೀಯ ನಕ್ಷೆಯನ್ನು ಪೋಸ್ಟ್ ಮಾಡುವ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಇತ್ತೀಚಿಗಷ್ಟೇ ದೇಶದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿದ್ದಕ್ಕೆ ಟ್ವಿಟ್ಟರ್ ಸಂಸ್ಥೆಯ ವಿರುದ್ಧ ಎರಡು ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ಟ್ವಿಟ್ಟರ್ ಸಂಸ್ಥೆಯು ಲೇಹ್ ಪ್ರದೇಶ ಚೀನಾದ ಗಡಿಯಲ್ಲಿ ಇರುವಂತೆ ಚಿತ್ರಿಸಿದ್ದು, ವಿವಾದಕ್ಕೆ ಸಿಲುಕಿತ್ತು.
ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ತಪ್ಪು ನಕ್ಷೆ ಪೋಸ್ಟ್:
ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತದ ನಕ್ಷೆಯನ್ನು "ತಪ್ಪಾಗಿ ಚಿತ್ರಿಸಿರುವ" ಬಗ್ಗೆ ಕೇಂದ್ರ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿತ್ತು. ತದನಂತರದಲ್ಲಿ ವಿಶ್ವದ ಉನ್ನತ ಆರೋಗ್ಯ ಸಂಸ್ಥೆಯು ತನ್ನ ವೆಬ್ಸೈಟ್ನಲ್ಲಿ ತಪ್ಪಿನ ಬಗ್ಗೆ ಸಂದೇಶವನ್ನು ಹಾಕಿತ್ತು.
ಕ್ಷಮೆಯಾಚಿಸಿದ ಬಿಬಿಸಿ ನ್ಯೂಸ್:
ಜನವರಿ ತಿಂಗಳಿನಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್(ಬಿಬಿಸಿ) ಸಂಸ್ಥೆಯು ತನ್ನ ತಪ್ಪಿಗೆ ಕ್ಷಮಾಪಣೆ ಕೋರಿತ್ತು. ಇದರ ಜೊತೆಗೆ ತನ್ನ ತಪ್ಪನ್ನು ಸರಿಪಡಿಸಿಕೊಂಡಿತ್ತು.