ಉತ್ತರಾಖಂಡ: ನಾಪತ್ತೆಯಾಗಿದ್ದ ರಿಸೆಪ್ಷನಿಸ್ಟ್ ಶವ ರೆಸಾರ್ಟ್ ಬಳಿಯ ಕಾಲುವೆಯಲ್ಲಿ ಪತ್ತೆ
ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ಖಾಸಗಿ ರೆಸಾರ್ಟ್ ಆವರಣದಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ರಿಸೆಪ್ಷನಿಸ್ಟ್ ಶವ ಪತ್ತೆಯಾಗಿದೆ. ಕೊಲೆ ಪ್ರಕರಣದಲ್ಲಿ ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಶುಕ್ರವಾರ ಬಂಧಿಸಲಾಗಿತ್ತು. ವೈಯಕ್ತಿಕ ವಿವಾದದ ನಂತರ ಆಕೆಯನ್ನು ರೆಸಾರ್ಟ್ ಬಳಿಯ ನೀರಿನ ಕಾಲುವೆಗೆ ತಳ್ಳಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪೊಲೀಸರಿಗೆ ಚಿಲ್ಲಾ ಪವರ್ ಹೌಸ್ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ರಾಜ್ಯ ಆಡಳಿತ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಯೊಂದಿಗೆ ಶವವನ್ನು ಪತ್ತೆ ಮಾಡಿದೆ.
ಏನಿದು ಪ್ರಕರಣ?
ಸೆಪ್ಟೆಂಬರ್ 18 ರಂದು ರಿಸೆಪ್ಷನಿಸ್ಟ್ ಕಾಣೆಯಾಗಿದ್ದಳು. ಉತ್ತರಾಖಂಡ್ನ ಪೌರಿ ಗಡ್ವಾಲ್ನಲ್ಲಿರುವ ತನ್ನ ಖಾಸಗಿ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಹುಡುಗಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಅವರನ್ನು ಬಂಧಿಸಲಾಗಿದೆ. ಕಾಣೆಯಾಗಿದ್ದ ಸಂತ್ರಸ್ತೆಯ ಶವ ಇಂದು ಪತ್ತೆಯಾಗಿದೆ. ಪುಲ್ಕಿತ್ ಆರ್ಯ ಅವರು ತಮ್ಮ ಇಬ್ಬರು ಸಿಬ್ಬಂದಿಗಳೊಂದಿಗೆ ಸೇರಿ ಅವಳನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪುಲ್ಕಿತ್ ಆರ್ಯ ಮತ್ತು ಬಾಲಕಿಯ ಕುಟುಂಬದವರು ಸ್ಥಳೀಯ ಕಂದಾಯ ಅಧಿಕಾರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಂತರ, ಉತ್ತರಾಖಂಡ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡರು ಮತ್ತು ಸೆಪ್ಟೆಂಬರ್ 22 ರಂದು ಎಫ್ಐಆರ್ ದಾಖಲಿಸಲಾಯಿತು. 24 ಗಂಟೆಗಳ ಒಳಗೆ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಮತ್ತು ಮ್ಯಾನೇಜರ್ ಸೌರಭ್ ಭಾಸ್ಕರ್ ಎಂದು ಗುರುತಿಸಲಾಗಿದೆ.
ರಿಸೆಪ್ಷನಿಸ್ಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ಉತ್ತರಾಖಂಡದ ಋಷಿಕೇಶದಲ್ಲಿರುವ ವನತಾರಾ ರೆಸಾರ್ಟ್ ಅನ್ನು ಧ್ವಂಸಗೊಳಿಸಲಾಗಿದೆ. ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆ ಹತ್ಯೆ ವಿರುದ್ಧ ಪ್ರತಿಭಟನೆಯನ್ನು ಹೆಚ್ಚಿಸಿದ ನಂತರ ಉತ್ತರಾಖಂಡ್ ಸಿಎಂ ಪುಷ್ಕರ್ ಧಾಮಿ ರೆಸಾರ್ಟ್ ಧ್ವಂಸಕ್ಕೆ ಆದೇಶ ನೀಡಿದ್ದಾರೆ.