ಉತ್ತರಾಖಂಡ ಮಳೆ: ಮೃತರ ಸಂಖ್ಯೆ 34 ಕ್ಕೆ ಏರಿಕೆ, ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಸಿಎಂ
ಡೆಹ್ರಾಡೂನ್, ಅಕ್ಟೋಬರ್ 19: ಉತ್ತರಾಖಂಡದಲ್ಲಿ ವರುಣನ ಆರ್ಭಟದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದಾಗಿ ಅಪಾರವಾದ ಹಾನಿಯಾಗಿದೆ, ಮಳೆಯ ಆರ್ಭಟದಿಂದಾಗಿ ಹಲವಾರು ಜನರು ಜೀವವನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ಮಳೆಯಿಂದ ಆದ ಅನಾಹುತಗಳಿಂದ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆಯು 34ಕ್ಕೆ ಏರಿಕೆ ಆಗಿದೆ. 5 ಜನರು ನಾಪತ್ತೆ ಆಗಿದ್ದಾರೆ.
ಈ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾವನ್ನಪ್ಪಿದವರ ಕುಟುಂಬಕ್ಕೆ ಹಾಗೂ ಮನೆಯನ್ನು ಕಳೆದು ಕೊಂಡವರಿಗೆ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. "ಸಂತ್ರಸ್ಥರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ಮನೆಯನ್ನು ಕಳೆದುಕೊಂಡವರಿಗೆ 1.9 ಲಕ್ಷ ಪರಿಹಾರವನ್ನು ನೀಡಲಾಗುವುದು. ಜಾನುವಾರುಗಳನ್ನು ಕಳೆದುಕೊಂಡವರಿಗೆ ಸಾಧ್ಯವಾದಷ್ಟು ಪರಿಹಾರ ನೀಡಲಾಗುವುದು," ಎಂದು ಹೇಳಿದ್ದಾರೆ.
ಉತ್ತರಾಖಂಡ ಮಳೆ: ಜನಜೀವನ ಅಸ್ತವ್ಯಸ್ತ, ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಉತ್ತರಾಖಂಡದಲ್ಲಿ ಕಳೆದ ಮೂರು ದಿನಗಳಲ್ಲಿ ಸತತವಾಗಿ ಭಾರೀ ಮಳೆಯಾದ ಕಾರಣದಿಂದಾಗಿ ನೈನಿತಾಲ್ನ ರಸ್ತೆ ಸಂಪರ್ಕವೇ ಇಲ್ಲದಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ಡಿಆರ್ಎಫ್ನ 15 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಉದ್ಧಮ್ ಸಿಂಗ್ ನಗರದಲ್ಲೇ 6 ಎನ್ಡಿಆರ್ಎಫ್ ತಂಡಗಳು ಕಾರ್ಯನಿರ್ವಹಣೆ ಮಾಡುತ್ತಿದೆ. ಉತ್ತರಾಕ್ಷಿ ಹಾಗೂ ಚಾಮೋಲಿಯಲ್ಲಿ ತಲಾ 2 ಎನ್ಡಿಆರ್ಎಫ್ ತಂಡ ಹಾಗೂ ಡೆಹ್ರಾಡೂನ್, ಪಿರೋರ್ಘರ್, ಹರಿದ್ವಾರದಲ್ಲಿ ತಲಾ 1 ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ.
"ಈಗಾಗಲೇ ನೆರೆ ಪೀಡಿತ ಪ್ರದೇಶವಾದ ಉದ್ಧಮ್ ಸಿಂಗ್ ನಗರ ಹಾಗೂ ಬೇರೆ ಪ್ರದೇಶದಿಂದ ಸಿಲುಕಿದ್ದ 300 ಮಂದಿಯನ್ನು ಎನ್ಡಿಆರ್ಎಫ್ ತಂಡವು ರಕ್ಷಣೆ ಮಾಡಿದೆ," ಎಂದು ಎನ್ಡಿಆರ್ಎಫ್ ವಕ್ತಾರ ತಿಳಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಮುಖ್ಯಮಂತ್ರಿಗಳು ರುದ್ರ ಪ್ರಯಾಗ ತಲುಪಿದ್ದು ರಾಜ್ಯದಲ್ಲಿ ನೆರೆಯಿಂದ ಎಷ್ಟು ನಷ್ಟ ಉಂಟಾಗಿದೆ? ಎಂದು ಪರಿಶೀಲನೆ ನಡೆಸಿದರು. ಸಚಿವ ಧನ್ ಸಿಂಗ್ ರಾವತ್ ಮತ್ತು ರಾಜ್ಯದ ಡಿಜಿಪಿ ಅಶೋಕ್ ಕುಮಾರ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ವಿಪರೀತ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮತ್ತು ದುರಂತದಿಂದ ಉಂಟಾದ ಹಾನಿಯ ಅವಲೋಕನಕ್ಕಾಗಿ ರುದ್ರ ಪ್ರಯಾಗಕ್ಕೆ ತೆರಳಿದೆ. ವಿಪತ್ತಿನಿಂದ ಹಾನಿಗೊಳಗಾದ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
Salute these Bravehearts ❤️🇮🇳🙌#Nainital #Uttrakhand pic.twitter.com/ZdO5Fxvp3p
— Srinivas BV (@srinivasiyc) October 19, 2021
ಈಗ ಉತ್ತರಾಖಂಡದ ಪ್ರವಾಹಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಮುಖಂಡ ಬಿ. ವಿ. ಶ್ರೀನಿವಾಸ್, ಸೇನೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಎನ್ಐ ಹಂಚಿಕೊಂಡಿರುವ ಇನ್ನೊಂದು ವಿಡಿಯೋದಲ್ಲಿ ಸೇತುವೆಯು ಕುಸಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಬೈಕ್ ಚಾಲಕನಿಗೆ ಹಿಂದಿರುಗಿ ತೆರಳುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ನಡುವೆ ನದಿಯಲ್ಲಿರುವ ದ್ವೀಪದಲ್ಲಿ ಆನೆ ಸಿಲುಕಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಸಂದೀಪ್ ಕುಮಾರ್, "ನದಿಯಲ್ಲಿರುವ ದ್ವೀಪದಲ್ಲಿ ಆನೆ ಸಿಲುಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ತಂಡವನ್ನು ಸ್ಥಳಕ್ಕೆ ಕಳುಹಿಸಿ, ಆನೆಯನ್ನು ರಕ್ಷಣೆ ಮಾಡಲಾಗಿದೆ. ಆನೆಯನ್ನು ಕಾಡಿಗೆ ಕಳುಹಿಸಲಾಗಿದೆ. ಆನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ" ಎಂದು ತಿಳಿಸಿದ್ದಾರೆ.
ಉದ್ಯಾನವನದ ಮೂಲಕ ರಾಮಗಂಗಾ ನದಿಯು ಹರಿದಿದ್ದು, ಕೆಸರು ಮಿಶ್ರಿತ ನೀರಿನಿಂದಾಗಿ ಉದ್ಯಾನವನ ಈಗ ಕೆಸರಿನಿಂದ ಕೂಡಿದೆ. ಎಎನ್ಐ ಪ್ರಕಾರ, ರಾಮನಗರ ಮತ್ತು ರಾಣಿಖೇತ್ ನಡುವೆ ಇರುವ ಮರದಲ್ಲಿ ನೂರು ಜನರು ಸಿಲುಕಿಕೊಂಡಿದ್ದು, ಅವರ ರಕ್ಷಣೆಯನ್ನು ಮಾಡಲಾಗಿದೆ.