ಕೋವಿಡ್ 19 ಭೀತಿ ನಡುವೆ ಚಾರ್ ಧಾಮ್ ಯಾತ್ರೆ, ಹೈಕೋರ್ಟ್ ಕಳವಳ
ಹರಿದ್ವಾರ, ಜೂನ್ 27: ಚಮೋಲಿ, ರುದ್ರಪ್ರಯಾಗ ಹಾಗೂ ಉತ್ತರಕಾಶಿಯಲ್ಲಿ ಯಾತ್ರೆಗೆ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟಿರುವ ಉತ್ತರಾಖಂಡ್ ಸರ್ಕಾರದ ನಿರ್ಧಾರದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
''ಉತ್ತರಾಖಂಡ ಸರ್ಕಾರವು ಜುಲೈ 1ರಿಂದ ನಡೆಸಲು ಉದ್ದೇಶಿಸಿರುವ ಚಾರ್ಧಾಮ್ ಯಾತ್ರೆಯನ್ನು ಮರುಪರಿಶೀಲಿಸುವಂತೆ ಉತ್ತರಾಖಂಡ ಹೈಕೋರ್ಟ್ ಸೂಚಿಸಿದೆ. ಕೋವಿಡ್ ಮೂರನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರ ಮರುಪರಿಶೀಲಿಸಬೇಕು,'' ಎಂದು ಹೈಕೋರ್ಟ್ ತಿಳಿಸಿದೆ.
ಕೊರೊನಾ ನಿರ್ಬಂಧದ ನಡುವೆ ಚಾರ್ ಧಾಮ್ ಯಾತ್ರೆಗೆ ಅವಕಾಶ
ಇದೇ ವರ್ಷ ಏಪ್ರಿಲ್ನಲ್ಲಿ ನಡೆದ ಕುಂಭಮೇಳದಿಂದಾಗಿ ಕೋವಿಡ್ ಸಾಂಕ್ರಾಮಿಕತೆ ವ್ಯಾಪಿಸಿ, ಅದರಿಂದ ಮೇ ತಿಂಗಳಿನಲ್ಲಿ ಸಾವು ನೋವು ಸಂಭವಿಸಿದ್ದನ್ನು ಪೀಠವು ವಿಚಾರಣೆಯ ಉಲ್ಲೇಖಿಸಲಾಗಿದ್ದನ್ನು ಪರಿಗಣಿಸಿದೆ.
''ಏಪ್ರಿಲ್ನಲ್ಲಿ ನಡೆದ ಕುಂಭಮೇಳ ಹಾಗೂ ಮೇನಲ್ಲಿ ಸಂಭವಿಸಿದ ಸಾವುನೋವುಗಳ ನಡುವೆ ಸ್ಪಷ್ಟ ಸಂಬಂಧವಿದೆ,'' ಎಂದು ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಹಾಗೂ ನ್ಯಾ. ಅಲೋಕ್ ವರ್ಮಾ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಜೊತೆಗೆ ಕೋವಿಡ್ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ರದ್ದಾಗಿರುವುದನ್ನು ಕೋರ್ಟ್ ಉಲ್ಲೇಖಿಸಿದೆ.
ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕುಂಭ ಮೇಳವು ಉತ್ತರಾಖಂಡ ಮಾತ್ರವಲ್ಲದೇ ದೇಶಾದ್ಯಂತ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿತ್ತು ಎಂದು ವರದಿಗಳು ಬಂದಿತ್ತು. ಈ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
Recommended Video
ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಈ ಮುಂಚೆ ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಆದರೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಜುಲೈ 1 ಹಾಗೂ ಜುಲೈ 11ರಂದು ಎರಡು ಹಂತದಲ್ಲಿ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳಬಹುದಾಗಿದೆ. ಸ್ಥಳೀಯರು ತಮ್ಮ ಕೊರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ಇತ್ತೀಚೆಗೆ ಆದೇಶ ಹೊರಡಿಸಿದೆ.