ಉತ್ತರಾಖಂಡ್ ಸಿಎಂ ಆಯ್ಕೆ ಕುರಿತಂತೆ ಅಮಿತ್ ಶಾ ಮಹತ್ವದ ಮೀಟಿಂಗ್
ಡೆಹ್ರಾಡೂನ್, ಮಾರ್ಚ್ 20: ದೇವಭೂಮಿ ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮತ್ತೊಮ್ಮೆ ಸ್ಥಾಪಿಸಲು ಸಜ್ಜಾಗಿದೆ. ಆದರೆ, ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲು ಕಂಡಿದ್ದು, ಹೊಸ ಸಿಎಂ ಆಯ್ಕೆ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಖಂಡದ ಹಂಗಾಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ನವದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ಸಭೆ ನಡೆಸುತ್ತಿದ್ದಾರೆ. ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಉತ್ತರಾಖಂಡ್ ಸಿಎಂ ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯನ್ನೇ ಮನೆಗೆ ಕಳಿಸಿದ ಭುವನ್ ಚಂದ್ರ ಕಪ್ರಿ ಬಗ್ಗೆ ತಿಳಿಯಿರಿ
ಉತ್ತರಾಖಂಡದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮದನ್ ಕೌಶಿಕ್, ರಮೇಶ್ ಪೋಖ್ರಿಯಾಲ್ 'ನಿಶಾಂಕ್', ಬಿಎಲ್ ಸಂತೋಷ್ ಮತ್ತು ಸತ್ಪಾಲ್ ಮಹಾರಾಜ್ ಸೇರಿದಂತೆ ಪಕ್ಷದ ನಾಯಕರು ಸಭೆಯಲ್ಲಿ ಹಾಜರಿದ್ದಾರೆ.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದು, ಮಾರ್ಚ್ 10 ರಂದು ಫಲಿತಾಂಶ ಹೊರ ಬಂದಿದೆ. ಉತ್ತರಾಖಂಡ ಚುನಾವಣೆಯಲ್ಲಿ ಅಂತಿಮ ಮತದಾನದ ಶೇಕಡಾ 62.51 ರಷ್ಟಾಗಿದ್ದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಶೇ.65.56ರಷ್ಟು ಮತದಾನವಾಗಿತ್ತು.
2017ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಉತ್ತರಾಖಂಡದ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. 2022ರಲ್ಲಿ ಉತ್ತರಾಖಂಡದ 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಪಕ್ಷ ಸರ್ಕಾರ ರಚಿಸುವುದಕ್ಕೆ ಮ್ಯಾಜಿಕ್ ನಂಬರ್ 36 ಆಗಿದೆ. ಆದರೆ ಬಿಜೆಪಿಯು 47 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಅಧಿಕಾರವನ್ನು ಪಕ್ಕಾ ಮಾಡಿಕೊಂಡಿದೆ. 19 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿದ ಎರಡನೇ ಪಕ್ಷವಾಗಿ ಹೊರ ಹೊಮ್ಮಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 2, ಸ್ವತಂತ್ರ್ಯ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ಚುನಾವಣಾ ಸಮೀಕ್ಷೆಗಳಲ್ಲಿ ಉತ್ತಮ ಸ್ಕೋರ್ ಮಾಡಿದ್ದ ಹರೀಶ್ ರಾವತ್ ಸರಾಸರಿ ಸಮೀಕ್ಷೆಗಳಲ್ಲಿ ವಿರುದ್ಧ ಅಭಿಮತ ಪಡೆದುಕೊಂಡಿದ್ದರು. ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಅವರ ಕಾರ್ಯಾವಧಿಯ ಬಗ್ಗೆ ಸಾರ್ವಜನಿಕರೂ ಈಗಲೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, 2017ರ ಚುನಾವಣೆಯಲ್ಲಿ ಉಧಮ್ ಸಿಂಗ್ ನಗರ್ ಜಿಲ್ಲೆಯ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಕಪ್ರಿಯನ್ನು ಧಾಮಿ ಕೇವಲ 2700 ಮತಗಳ ಅಂತರದಿಂದ ಸೋಲಿಸಿದ್ದರು. ಇದಕ್ಕೆ ಪ್ರತಿಕಾರವಾಗಿ 2022ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಧಾಮಿ ಅವರನ್ನು ಕಪ್ರಿ 7000 ಮತಗಳ ಅಂತರದಿಂದ ಸೋಲಿಸಿದ್ದಾರೆ.