ಚಾರ್ಧಾಮ್ ಯಾತ್ರೆ: 50 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಕಡ್ಡಾಯ
ಡೆಹರಾಡೂನ್, ಮೇ 29: ಉತ್ತರಾಖಂಡ ಸರಕಾರವು ಚಾರ್ಧಾಮ್ ಯಾತ್ರೆ ಕೈಗೊಳ್ಳುವ 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆಯನ್ನು ಕಡ್ಡಾಯಗೊಳಿಸಿದೆ.
ಈ ವರ್ಷದ ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೆ 101 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರಕಾರ ಈ ಕ್ರಮ ಕೈಗೊಂಡಿದೆ. ಕೇದಾರನಾಥದಲ್ಲಿ ಸೋಮವಾರ ಇಬ್ಬರು ಯಾತ್ರಾರ್ಥಿಗಳು ನಿಧನರಾಗಿದ್ದಾರೆ.
ಕೇದಾರನಾಥ ಯಾತ್ರೆ; ಮೂವರು ಯಾತ್ರಾರ್ಥಿಗಳ ಸಾವು
ಕೋವಿಡ್-19 ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಖಂಡದ ಚಾರ್ಧಾಮ್ ಯಾತ್ರೆ 2022ರ ಮೇ 3ರಂದು ಪುನಃ ಆರಂಭವಾಗಿದೆ. ಚಾರ್ಧಾಮ್ ಯಾತ್ರೆಯು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಒಳಗೊಂಡಿದೆ.
ಚಾರ್ಧಾಮ್ ಯಾತ್ರೆ 2022: ಇದುವರೆಗೂ 41 ಯಾತ್ರಾರ್ಥಿಗಳ ಸಾವು
101 ಯಾತ್ರಾರ್ಥಿಗಳ ಸಾವು
ಉತ್ತರಾಖಂಡದ ಆರೋಗ್ಯ ಇಲಾಖೆಯ ಪ್ರಕಾರ, ಈ ವರ್ಷದ ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೆ 101 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ ಕೇದಾರನಾಥ ಧಾಮದಲ್ಲಿ 49, ಬದರಿನಾಥದಲ್ಲಿ 20, ಗಂಗೋತ್ರಿಯಲ್ಲಿ 7 ಮತ್ತು ಯಮುನೋತ್ರಿಯಲ್ಲಿ 25 ಯಾತ್ರಾರ್ಥಿಗಳು ನಿಧನರಾಗಿದ್ದಾರೆ. 2019ರ ಚಾರ್ಧಾಮ್ ಯಾತ್ರೆಯಲ್ಲಿ 90 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಅದೇ ರೀತಿ 2018 ಚಾರ್ಧಾಮ್ ಯಾತ್ರೆಯ ಸಮಯದಲ್ಲಿ 102 ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು.
ವೈದ್ಯಕೀಯ ಪರೀಕ್ಷೆ ಕಡ್ಡಾಯ
"ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಮೊದಲು 50 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಭಕ್ತರಿಗೆ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ,'' ಎಂದು ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕರಾದ ಶೈಲಜಾ ಭಟ್ ತಿಳಿಸಿದ್ದಾರೆ.
"ಪ್ರಯಾಣಕ್ಕೆ ಅನರ್ಹರೆಂದು ಕಂಡುಬಂದ ಯಾತ್ರಾರ್ಥಿಗಳನ್ನು ಹಿಂತಿರುಗುವಂತೆ ವಿನಂತಿಸಲಾಗುವುದು. ಈ ಸಲಹೆಯನ್ನು ಅನುಸರಿಸದ ಯಾತ್ರಾರ್ಥಿಗಳಿಗೆ ಒಪ್ಪಿಗೆ ಪತ್ರವನ್ನು ಪಡೆದುಕೊಂಡ ನಂತರವೇ ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಗುತ್ತದೆ,'' ಎಂದು ರುದ್ರಪ್ರಯಾಗದ ಮುಖ್ಯ ವೈದ್ಯಾಧಿಕಾರಿ ಬಿ.ಕೆ.ಶುಕ್ಲಾ ಹೇಳಿದ್ದಾರೆ.
ಹಲವು ಸ್ಥಳಗಳಲ್ಲಿ ಆರೋಗ್ಯ ತಪಾಸಣೆ
"50 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳ ವೈದ್ಯಕೀಯ ಪರೀಕ್ಷೆ ಆರಂಭಿಸಲಾಗಿದೆ. ಬಾರ್ಕೋಟ್, ಜನ್ ಕಿ ಚಟ್ಟಿ ಮತ್ತು ಯಮುನೋತ್ರಿಯಲ್ಲಿ ಈ ತಪಾಸಣೆ ನಡೆಯುತ್ತಿದೆ. ಜತೆಗೆ ಹೀನಾ ಮತ್ತು ಗಂಗೋತ್ರಿಯಲ್ಲೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ,'' ಎಂದು ಉತ್ತರಕಾಶಿ ಮುಖ್ಯ ವೈದ್ಯಾಧಿಕಾರಿ ಕೆ. ಸಿ. ಚೌಹಾಣ್ ತಿಳಿಸಿದ್ದಾರೆ.
ಕೆಟ್ಟ ಹವಾಮಾನದಿಂದ ಸಾವು
"ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಕೆಟ್ಟ ಹವಾಮಾನದಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಅನೇಕರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಬಯಲು ಸೀಮೆಯಿಂದ ಬರುವ ಯಾತ್ರಾರ್ಥಿಗಳು ಹಿಮಾಲಯದ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎತ್ತರದ ಪ್ರದೇಶ ಮತ್ತು ಚಳಿಯಿಂದಾಗಿ ಭಕ್ತರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ರಯಾಣಿಕರು ಬೆಚ್ಚನೆಯ ಬಟ್ಟೆಯನ್ನೂ ತರುತ್ತಿಲ್ಲ. ಇದರಿಂದಾಗಿ ಅವರು ಹೈಪೋಥರ್ಮಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ,'' ಎಂದು ಕೇದಾರನಾಥದಲ್ಲಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಸಿಕ್ಸ್ ಸಿಗ್ಮಾ ಹೆಲ್ತ್ಕೇರ್ನ ಮುಖ್ಯಸ್ಥ ಪ್ರದೀಪ್ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.
ಪ್ರತಿ ದಿನ ನೂರಾರು ಯಾತ್ರಾರ್ಥಿಗಳಿಗೆ ಅವಕಾಶ
ಉತ್ತರಖಂಡ ಸರಕಾರದ ಪ್ರಕಾರ ಒಂದು ದಿನಕ್ಕೆ ಗಂಗೋತ್ರಿಯಲ್ಲಿ 8,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಬದರಿನಾಥದಲ್ಲಿ 16,000 ಭಕ್ತರು, ಕೇದರನಾಥದಲ್ಲಿ 13,000 ಭಕ್ತರು ಹಾಗೂ ಯಮುನೋತ್ರಿಯಲ್ಲಿ ಪ್ರತಿ ದಿನ 5,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳು ಹಿಮಾಲಯದ ಅತ್ಯಂತ ಪೂಜ್ಯ ಹಿಂದೂ ತೀರ್ಥಯಾತ್ರೆ ಕ್ಷೇತ್ರಗಳಾಗಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಚ್ಚಿದ್ದ ಧಾರ್ಮಿಕ, ಯಾತ್ರಾ ಸ್ಥಳಗಳು ಈ ವರ್ಷ ಪೂರ್ಣ ಪ್ರಮಾಣದಲ್ಲಿ ತೆರಯಲಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ.