ಕೊರೊನಾ ಕಾರಣ ಈ ಬಾರಿಯೂ ಕನ್ವರ್ ಯಾತ್ರೆ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ
ಡೆಹ್ರಾಡೂನ್, ಜುಲೈ 13: ಸಂಭಾವ್ಯ ಕೊರೊನಾ ಮೂರನೇ ಅಲೆ ಹಾಗೂ ಡೆಲ್ಟಾ ಪ್ಲಸ್ ಕೊರೊನಾ ಪ್ರಕರಣಗಳ ಹರಡುವಿಕೆ ತಡೆಗೆ ಈ ಬಾರಿ ಕನ್ವರ್ ಯಾತ್ರೆ ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ತೀರ್ಮಾನಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಸಂಜೆ ಸಭೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ 19 ಭೀತಿ ನಡುವೆ ಚಾರ್ ಧಾಮ್ ಯಾತ್ರೆ, ಹೈಕೋರ್ಟ್ ಕಳವಳ
"ನೆರೆ ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಕೊರೊನಾ ಸೋಂಕಿನಿಂದ ತತ್ತರಿಸಿರುವ ಹಾಗೂ ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ಆತಂಕ ಎದುರಾಗಿರುವ ಈ ಸಮಯದಲ್ಲಿ ಯಾತ್ರೆ ರದ್ದು ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಉತ್ತರಾಖಂಡದಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದ್ದು, ಇಂಥ ಪರಿಸ್ಥಿತಿಯಲ್ಲಿ ಯಾತ್ರೆ ನಡೆಸುವುದು ಸೂಕ್ತವಲ್ಲ. ಜನರ ಪ್ರಾಣವೇ ನಮ್ಮ ಆದ್ಯತೆಯಾಗಿದೆ. ಜನರ ಜೀವದ ಜೊತೆ ಆಟವಾಡಲು ಸಾಧ್ಯವಿಲ್ಲ" ಎಂದು ಹೇಳಿ ಕನ್ವರ್ ಯಾತ್ರೆ ರದ್ದು ನಿರ್ಧಾರವನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
ಕನ್ವರ್ ಯಾತ್ರೆ ನಮ್ಮ ಸಂಸ್ಕೃತಿಯ ಭಾಗ. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಈ ಯಾತ್ರೆಗೆ ಅನುಮತಿ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಈಚೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದಿತ್ತು. ಯಾತ್ರೆಗೆ ಅವಕಾಶ ಮಾಡಿಕೊಟ್ಟರೆ ಕೊರೊನಾ ಮೂರನೇ ಅಲೆಗೆ ಆಮಂತ್ರಣ ನೀಡಿದಂತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
ಈ ಎಲ್ಲಾ ಕಾರಣಗಳಿಂದ ಈ ಬಾರಿ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೊರೊನಾ ಕಾರಣವಾಗಿ ಕಳೆದ ವರ್ಷವೂ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.