ಉತ್ತರಾಖಂಡ್ ಕಥೆ: ಹಿಮನದಿ ಸ್ಫೋಟ ಎಂದರೇನು, ಹೇಗೆ ಸಂಭವಿಸುತ್ತೆ?
ಡೆಹ್ರಾಡೂನ್, ಫೆಬ್ರವರಿ.08: ಉತ್ತರಾಖಂಡ್ ಚಮೋಲಿ ಜಿಲ್ಲೆಯ ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚಮೋಲಿ ಜಿಲ್ಲೆಯ ದೌಲಿ ಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಐದು ಸೇತುವೆಗಳು ಕೊಚ್ಚಿ ಹೋಗಿದ್ದು, ಎನ್ ಟಿಪಿಸಿ ಪವರ್ ಪ್ರಾಜೆಕ್ಟ್ ಬಳಿ ಮನೆಗಳಿಗೆ ಹಾನಿಯಾಗಿದೆ. ರಿಷಿ ಗಂಗಾದ ಪವರ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ.
ಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟ
ರಿಷಿ ಗಂಗಾ ಪವರ್ ಪ್ರಾಜೆಕ್ಟ್ ಬಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿದ್ದ ಸಾವಿರಾರು ಕಾರ್ಮಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಮೋಲಿ ಜಿಲ್ಲೆಯ ದೌಲಿಗಂಗಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎನ್ ಡಿಆರ್ಎಫ್, ಎಸ್ ಡಿಆರ್ಎಫ್, ಐಟಿಬಿಪಿ ಪಡೆ
ಉತ್ತರಾಖಂಡ್ ನಲ್ಲಿ 5 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, 2 ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಹೆಚ್ಚುವರಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ತಂಡ 200 ಸಿಬ್ಬಂದಿಯನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ಸೇನಾ ಪಡೆಯ 6 ತಂಡ ಮತ್ತು ನೌಕಾಪಡೆಯ ಆರು ತಂಡವನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.
ಸಹಾಯ ಬೇಕಿದ್ದಲ್ಲಿ 1070 ಸಂಖ್ಯೆಗೆ ಕರೆ ಮಾಡಿ
ಉತ್ತರಾಖಂಡ್ ಹಿಮನದಿ ಸ್ಫೋಟದ ಹಿಂದಿನ ಕಾರಣದ ಬಗ್ಗೆ ತಜ್ಞರು ಪರಿಶೋಧನೆ ನಡೆಸಲಿದ್ದಾರೆ. ಕಾರ್ಮಿಕರ ರಕ್ಷಣೆ ಮಾಡುವುದಷ್ಟೇ ಸದ್ಯದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ. ಜಲಪ್ರಳಯದ ಬಗ್ಗೆ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡದಂತೆ ಮನವಿ ಮಾಡಿಕೊಂಡಿರುವ ಸಿಎಂ, ರಕ್ಷಣಾ ಕಾರ್ಯಾಚರಣೆ ಮತ್ತು ಸಾರ್ವಜನಿಕರ ನೆರವಿಗಾಗಿ ಸಹಾಯವಾಣಿ ಆರಂಭಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರು ಸರ್ಕಾರದ ಸಹಾಯವಾಣಿ 1070 ಮತ್ತು 9557444486 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ಜಲಪ್ರವಾಹದ ಪ್ರಭಾವ ಹೇಗಿತ್ತು?
ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿ ಹಿಮನದಿ ಸ್ಫೋಟದಿಂದಾಗಿ ರಿಷಿಗಂಗಾ ಪವರ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಅಲಕ್ ನಂದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಮನದಿ ಪ್ರವಾಹದ ಅರ್ಥವೇನು?
ಹಿಮ ಪರ್ವತಗಳಲ್ಲಿ ಸ್ಫೋಟ ಸಂಭವಿಸಿದ ಸಂದರ್ಭಗಳಲ್ಲಿ ಹಿಮನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹಿಮನದಿಗಳು ಜಲಪ್ರಳಯವನ್ನು ಸೃಷ್ಟಿಸುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಹಿಮದ ಗಡ್ಡೆಗಳು ಕರಗಿ ನೀರಾದಾಗ ಹಿಮನದಿಯಲ್ಲಿನ ನೀರಿನ ಹರಿವು ಹೆಚ್ಚಾಗುತ್ತದೆ. ಅದರಿಂದಲೂ ಜಲಪ್ರವಾಹ ಸೃಷ್ಟಿಯಾಗುತ್ತದೆ. ಇದನ್ನೇ ಹಿಮನದಿ ಪ್ರವಾಹ ಎಂದು ಕರೆಯಲಾಗುತ್ತದೆ.
ಹಿಮನದಿಗಳಲ್ಲಿ ಪ್ರವಾಹ ಸೃಷ್ಟಿ ಹೇಗಾಗುತ್ತದೆ?
ಹಿಮ ಅಥವಾ ಬಂಡೆಗಳ ಹಿಮಪಾತ, ಮತ್ತು ಹಿಮದ ಕೆಳಗೆ ಭೂಕಂಪನ, ಹಿಮಗಡ್ಡೆಗಳಲ್ಲಿನ ಸವೆತ, ನೀರಿನ ಒತ್ತಡವನ್ನು ನಿರ್ಮಿಸುವುದು ಹೀಗೆ ಮುಂತಾದ ಅನೇಕ ಕಾರಣಗಳಿಂದಾಗಿ ಹಿಮನದಿಯಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಹಿಮಪಾತದಿಂದ ಹೆಚ್ಚಿನ ಪ್ರಮಾಣದ ಮಂಜುಗಡ್ಡೆಯು ಕುಸಿದ ಸಂದರ್ಭಗಳಲ್ಲಿಯೂ ಹಿಮನದಿ ಪ್ರವಾಹ ಉಂಟಾಗುತ್ತದೆ. ಹಿಮನದಿ ಸರೋವರಗಳು ಪ್ರಮಾಣದಲ್ಲಿ ಬದಲಾಗಬಹುದು, ಲಕ್ಷದಿಂದ ನೂರಾರು ದಶಲಕ್ಷ ಘನ ಮೀಟರ್ ಹಿಮವನ್ನು ಹಿಡಿದಿಟ್ಟುಕೊಂಡಿರುವ ನದಿಗಳು ನಿಮಿಷ, ಗಂಟೆ ಹಾಗೂ ಕೆಲವು ಸಂದರ್ಭಗಳಲ್ಲಿ ದಿನಗಳವರೆಗೂ ನೀರನ್ನು ಬಿಡುಗಡೆ ಮಾಡುವ ಅಪಾಯ ಹೆಚ್ಚಾಗಿರುತ್ತದೆ.
ತಜ್ಞರ ಪ್ರಕಾರ, ಪ್ರವಾಹಕ್ಕೆ ಕಾರಣವಾಗುವ ಹಿಮಪಾತದ ಸರೋವರ ಪ್ರಕೋಪಕ್ಕೆ ಭಾರೀ ಮಳೆ / ಹಿಮ ಕರಗುವಿಕೆ, ಭೂಕಂಪ, ಕ್ಯಾಸ್ಕೇಡಿಂಗ್ ಪ್ರಕ್ರಿಯೆ, ದೀರ್ಘಕಾಲೀನ ಅಣೆಕಟ್ಟುಗಳ ಅವನತಿ ಮತ್ತು ಸರೋವರದೊಳಗೆ ವೇಗವಾಗಿ ಇಳಿಜಾರಿನ ಚಲನೆಯೂ ಕೂಡಾ ಮುಖ್ಯ ಕಾರಣವಾಗಿರುತ್ತದೆ.