ಉತ್ತರಾಖಂಡ ಪ್ರವಾಹ: 16 ದಿನ ಕಳೆದರೂ 136 ಜನರ ಸುಳಿವೇ ಇಲ್ಲ!
ಡೆಹ್ರಾಡೂನ್, ಫೆಬ್ರವರಿ.15: ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿ ಕಳೆದ ಫೆಬ್ರವರಿ.07ರಂದು ಸಂಭವಿಸಿದ ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಲ್ಲಿ 206 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರಾಖಂಡ್ ನಲ್ಲಿ ಸಂಭವಿಸಿದ ಜಲ ಪ್ರವಾಹದಲ್ಲಿ ಕಣ್ಮರೆಯಾದ 206 ಜನರ ಬಗ್ಗೆ ಸೋಮವಾರ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ 70 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, 29 ಜನರಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿವೆ. ಉಳಿದಂತೆ 136 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.
ಉತ್ತರಾಖಂಡ್ ಪ್ರವಾಹ: ಮಾಲೀಕನಿಗಾಗಿ ಸುರಂಗದ ಬಳಿ ಕಾದು ಕುಳಿತ ನಾಯಿ
ಕಳೆದ 24 ಗಂಟೆಗಳಲ್ಲಿ ಶ್ರೀನಗರದ ಚೌರಾಸ್ ಮತ್ತು ಕೀರ್ತಿ ನಗರ್ ಪ್ರದೇಶದಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಈವರೆಗೂ 206 ಮಂದಿ ನಾಪತ್ತೆಯಾಗಿದ್ದು, 70 ಜನರ ಮೃತದೇಹ ಮತ್ತು 29 ಮಂದಿಯ ದೇಹದ ಬಿಡಿಭಾಗಗಳು ಪತ್ತೆಯಾಗಿವೆ ಎಂದು ಮಾಹಿತಿ ಸಿಕ್ಕಿದೆ.
ಉತ್ತರಾಖಂಡ್ ನಲ್ಲಿ ಮುಂದುವರಿದ ರಕ್ಷಣಾ ಕಾರ್ಯ:
ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಉತ್ತರಾಖಂಡ್ ಹಲವೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ರೇನಿ ಪಲ್ಲಿ, ಪಾಂಗ್, ಲಟಾ, ಸುರೈತೋಟಾ, ಸುಕಿ, ಭಲ್ಗೋನ್, ತೋಲ್ಮಾ, ಫಾಗ್ರಸು, ಲೊಂಗ್ ಸೇಗ್ದಿ, ಗಹಾರ್, ಭಂಗ್ಯೂಲ್, ಜುವಾಗ್ವಾಡ್, ಜುಗ್ಜು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಪಡೆಯ ಸಿಬ್ಬಂದಿ ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.