ರೋಚಕ ಸುದ್ದಿ: ಉತ್ತರಾಖಂಡ್ ಹಿಮಪಾತದ ಹಿಂದೆ 46 ವರ್ಷಗಳ ಹಿಂದಿನ ಕಥೆ!?
ಡೆಹ್ರಾಡೂನ್, ಫೆಬ್ರವರಿ.10: ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ಸುತ್ತಮುತ್ತಲಿನ ನದಿಗಳಲ್ಲಿ ಪ್ರವಾಹ ಸೃಷ್ಟಿಗೆ ಹಿಮನದಿಯ ಸ್ಫೋಟ ಕಾರಣವಲ್ಲ ಎಂದು ತಜ್ಞರ ತಂಡ ಈಗಾಗಲೇ ಸ್ಪಷ್ಟಪಡಿಸಿದೆ.
ಹಿಮಪಾತ ಮತ್ತು ಹಿಮನದಿ ಪ್ರವಾಹದಿಂದ ಸಿಲುಕಿರುವ ಕಾರ್ಮಿಕರು ಮತ್ತು ಗ್ರಾಮಸ್ಥರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇದುವರೆಗೂ 32 ಮಂದಿ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ 197 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ. ಹಿಮಪಾತದಿಂದಾಗಿ ಅಲಕ್ ನಂದ್ ನದಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಎನ್ ಟಿಪಿಸಿ 480 ಮೆಗಾ ವ್ಯಾಟ್ ತಪೋವನ-ವಿಷ್ಣುಗಢ್ ಹೈಡ್ರೋ ಪವರ್ ಪ್ರಾಜೆಕ್ಟ್ ಮತ್ತು 13.2 ಮೆಗಾ ವ್ಯಾಟ್ ನ ರಿಷಿಗಂಗಾ ಹೈಡಲ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿನ ಹಲವು ಮನೆಗಳು ಕೊಚ್ಚಿ ಹೋಗಿರುವುದು ವರದಿಯಾಗಿದೆ.
ಉತ್ತರಾಖಂಡ್ ಕಥೆ: ಹಿಮನದಿ ಸ್ಫೋಟ ಎಂದರೇನು, ಹೇಗೆ ಸಂಭವಿಸುತ್ತೆ?
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಪಡೆಯ 600ಕ್ಕೂ ಹೆಚ್ಚು ಸಿಬ್ಬಂದಿಯು ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಉತ್ತರಾಖಂಡ್ ನಲ್ಲಿ ಹಿಮಪರ್ವತಗಳ ಸ್ಫೋಟದಿಂದ ಹಿಮನದಿ ಉಕ್ಕಿ ಹರಿಯುತ್ತಿಲ್ಲ. ಬದಲಿಗೆ ಹಿಮಪಾತದಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರ ಹೊರತಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಕ್ಕೆ ಬೇರೆಯದ್ದೇ ಕಾರಣವಿದೆ ಎಂದು ಶಂಕಿಸಲಾಗಿದೆ. ಇಂದಿನ ಈ ಸ್ಥಿತಿಗೆ 46 ವರ್ಷಗಳ ಹಿಂದಿನ ಅದೊಂದು ತಪ್ಪು ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಆ ತಪ್ಪಾದರೂ ಏನು. ಹಿಮಪಾತದ ಬಗ್ಗೆ ಸುತ್ತಮುತ್ತಲಿನ ಜನರು ಹೇಳುವುದೇನು. ನಿಜವಾಗಿ ಹಿಮಪಾತದ ಹಿಂದಿನ ರಹಸ್ಯವೇನು ಎನ್ನುವುದರ ಕುರತು ಒಂದು ವಿಶೇಷ ವರದಿ ಇಲ್ಲಿದೆ.
ಹಿಮಪಾತದ ಹಿಂದೆ ರೇಡಿಯೋ ಆಕ್ಟಿವ್ ಡಿವೈಸ್(ವಿಕಿರಣ ಸಾಧನ)
ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ಸುತ್ತಮುತ್ತಲಿನಲ್ಲಿ ಹಿಮಪಾತಕ್ಕೆ ರೇಡಿಯೋ ಆಕ್ಟಿವ್ ಡಿವೈಸ್ ನಿಂದ ಬಿಡುಗಡೆಯಾದ ಬಿಸಿ ತಾಪವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಅತಿಯಾದ ಪ್ರವಾಹ ಪರಿಸ್ಥಿತಿ ಎದುರಾದ ಪ್ರದೇಶದಲ್ಲೇ ಈ ರೈನಿ ಗ್ರಾಮವಿದೆ.
1965ರಲ್ಲಿ ರೇಡಿಯೋ ಆಕ್ಟಿವ್ ಡಿವೈಸ್ ಕಣ್ಮರೆಯಾದ ಕಥೆ
ಭಾರತದ ಕೇಂದ್ರ ತನಿಖಾ ತಂಡ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ನಂದಾ ದೇವಿ ಪರ್ವತದ ಶಿಖರದಲ್ಲಿ ಪರಮಾಣು-ಚಾಲಿತ ಕಣ್ಗಾವಲು ಉಪಕರಣಗಳನ್ನು ನಿಯೋಜನೆ ಮಾಡಿತ್ತು. ಚೀನಾದ ಕಂಚೆಂಜುಂಗಾ ಹೊರತುಪಡಿಸಿದರೆ ಇದು ಜಗತ್ತಿನ ಅತಿ ಎತ್ತರದ ಕಣ್ಗಾವಲು ಸಾಧನ ಇದಾಗಿದ್ದು, 1965ರಲ್ಲಿ ರೇಡಿಯೋ ಆಕ್ಟಿವ್ ಡಿವೈಸ್ ಕಣ್ಮರೆಯಾಗಿತ್ತು.
ಕಣ್ಮರೆಯಾದ ವಿಕಿರಣ ಸಾಧನಕ್ಕೆ 100 ವರ್ಷ ಆಯಸ್ಸು
ಈ ಹಿಂದೆ ರೇಡಿಯೋ ಆಕ್ಟಿವ್ ಡಿವೈಸ್ ನಿಯೋಜನೆಗೆ ತೆರಳಿದ ಪರ್ವತಾರೋಹಣ ತಂಡವು ಹಿಮಪಾತದಲ್ಲಿ ಸಿಲುಕಿದ ಹಿನ್ನೆಲೆ ಅಂದು ವಾಪಸ್ಸಾಗಿತ್ತು. ಒಂದು ವರ್ಷದ ನಂತರದಲ್ಲಿ ಅದೇ ಪ್ರದೇಶಕ್ಕೆ ತೆರಳಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ವಿಕಿರಣ ಸಾಧನ ಅಲ್ಲಿ ಸಿಗಲಿಲ್ಲ. ರೇಡಿಯೋ ಆಕ್ಟಿವ್ ಡಿವೈಸ್ ಹುಡುಕಾಟ ನಡೆಸಿದರೂ ಅದರ ಬಗ್ಗೆ ಸುಳಿವು ಸಿಗಲಿಲ್ಲ. ಸುಮಾರು 100 ವರ್ಷದವರೆಗೆ ಜೀವಿತಾವಧಿ ಹೊಂದಿರುವ ಈ ಸಾಧನವು ನಾಪತ್ತೆಯಾಗಿದ್ದರೂ, ಅದೇ ಸುತ್ತಮುತ್ತಲಿನ ಪ್ರದೇಶದಲ್ಲೇ ಹುದುಗಿ ಹೋಗಿದೆ ಎಂದು ನಂಬಲಾಗುತ್ತಿದೆ.
ರಿಷಿಗಂಗಾ ನದಿಗೆ ಹಿಮ ಉರುಳಿದ ವೇಳೆ ಗೊಬ್ಬರದ ವಾಸನೆ
ಕಳೆದ ಫೆಬ್ರವರಿ.07ರಂದು ಉತ್ತರಾಖಂಡ್ ಚಮೋಲಿ ಜಿಲ್ಲೆ ರೈನಿ ಗ್ರಾಮದ ಬಳಿ ಪರ್ವತದಿಂದ ಹಿಮವು ಉರುಳಿ ರಿಷಿಗಂಗಾ ನದಿಗೆ ಬಿದ್ದಿತು. ಈ ವೇಳೆ ಎಲ್ಲೆಡೆ ಗೊಬ್ಬರದ ರೀತಿಯ ತೀವ್ರವಾದ ವಾಸನೆ ಹರಡಿತ್ತು. ಗಾಳಿಯಲ್ಲಿ ಹರಡಿದ ತೀವ್ರ ವಾಸನೆಯಿಂದಾಗಿ ನಾವು ಉಸಿರಾಡುವುದು ಕೂಡ ಕಷ್ಟಸಾಧ್ಯವಾಗಿತ್ತು. ಹಿಮಪಾತ ಅಥವಾ ಹಿಮ ಕುಸಿತವಷ್ಟೇ ಆಗಿದ್ದಲ್ಲಿ ಅಷ್ಟೊಂದು ಮಟ್ಟಿಗೆ ತೀವ್ರವಾದ ವಾಸನೆ ಏಕೆ ಹರಡುತ್ತಿತ್ತು. ಸುದೀರ್ಘ ಅವಧಿಯವರೆಗೂ ಇದೇ ಪ್ರದೇಶದಲ್ಲಿರುವ ರೇಡಿಯೋ ಆಕ್ಟಿವ್ ಡಿವೈಸ್ ಈ ರೀತಿಯ ವಾಸನೆ ಹರಡುವುದಕ್ಕೆ ಮುಖ್ಯ ಕಾರಣವಾಗಿದೆ. ಇತ್ತೀಚಿಗೆ ನಡೆದ ಹಿಮಪಾತದ ಹಿಂದೆ ಅದೇ ರೇಡಿಯೋ ಆಕ್ಟಿವ್ ಡಿವೈಸ್ ಮೂಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ವಿಕಿರಣ ಸಾಧನದ ಬಗ್ಗೆ ಗ್ರಾಮಸ್ಥರಲ್ಲಿ ಹೆಚ್ಚಿದ ಕಳವಳ
ನಂದಾ ದೇವಿ ಪ್ರದೇಶದ ಪಶ್ಚಿಮ ಭಾಗದಲ್ಲಿ ಇರುವ ಶಿಬಿರದ ಬಳಿ ರೇಡಿಯೋ ಆಕ್ಟಿವ್ ಡಿವೈಸ್ ಇರುವ ಬಗ್ಗೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ರಿಷಿಗಂಗಾ ನದಿ ಗಾರ್ಜ್ ಬಳಿಯ ಸ್ಥಳದಲ್ಲೇ ಡಿವೈಸ್ ಉಳಿದುಕೊಂಡಿದ್ದು, ರಿಷಿ ಗಂಗಾ ನದಿ ಹೊರಹೊಮ್ಮುವ ಪ್ರದೇಶದಲ್ಲಿ ಹೆಚ್ಚು ಅಪಾಯವನ್ನು ಸೃಷ್ಟಿಸುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರೇಡಿಯೋ ಆಕ್ಟಿವ್ ಡಿವೈಸ್ ನಿಂದ ಕರಗುತ್ತಿದೆಯಾ ಹಿಮ?
ಕಳೆದ 1965ರಲ್ಲಿ ಪರ್ವತಾರೋಹಿಗಳ ತಂಡವು ಹವಾಮಾನ ವೈಪರಿತ್ಯದಿಂದಾಗಿ ರೇಡಿಯೋ ಆಕ್ಟಿವ್ ಡಿವೈಸ್ ಅನ್ನು ಪರ್ವತದ ಮೇಲಿನ ಒಂದು ಸುರಕ್ಷಿತ ಪ್ರದೇಶದಲ್ಲಿಯೇ ಇರಿಸಿ ವಾಪಸ್ಸಾಗಿತ್ತು. ನಂತರ ಸಂಭವಿಸಿದ ಹಿಮಪಾತ ಮತ್ತು ಮಂಜಿನ ಮಳೆಯಿಂದ ವಿಕಿರಣ ಸಾಧನವು ಮಂಜುಗಡ್ಡೆಯ ಮಧ್ಯೆ ಎಲ್ಲೋ ಹುದುಗಿ ಹೋಗಿದೆ. ಪರ್ವತದ ಅಡಿಯಲ್ಲಿ ಸಿಲುಕಿರುವ ಅದೊಂದು ರೇಡಿಯೋ ಆಕ್ಟಿವ್ ಡಿವೈಸ್ ಬಿಡುಗಡೆ ಮಾಡುವ ಬಿಸಿ ತಾಪದಿಂದಾಗಿ ಹಿಮವು ಕರಗುತ್ತದೆ. ಅದರಿಂದಾಗಿ ಹಿಮಪಾತ ಸಂಭವಿಸುವ ಅಪಾಯವೂ ಹೆಚ್ಚಿದೆ. ಮುಂಬರುವ ದಿನಗಳಲ್ಲಿ ಇದರಿಂದ ಮತ್ತಷ್ಟು ಅಪಾಯ ಹೆಚ್ಚಾಗುವ ಸಾಧ್ಯತೆಯಿದ್ದು, ಆದಷ್ಟು ಬೇಗ ರೇಡಿಯೋ ಆಕ್ಟಿವ್ ಡಿವೈಸ್ ನ್ನು ಪತ್ತೆ ಮಾಡುವುದಕ್ಕೆ ಕಾರ್ಯಾಚರಣೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಗ್ರಾಮ್ ಸಿಂಗ್ ರಾವತ್ ಹೇಳಿದ್ದಾರೆ.
ರೇಡಿಯೋ ಆಕ್ಟಿವ್ ಡಿವೈಸ್ ಬಗ್ಗೆ 2018ರಲ್ಲೇ ಪ್ರಸ್ತಾಪ
ಉತ್ತರಾಖಂಡ್ ನಂದಾ ದೇವಿ ಮೂಲ ಪ್ರದೇಶದಲ್ಲಿ ಕಣ್ಮರೆ ಆಗಿರುವ ರೇಡಿಯೋ ಆಕ್ಟಿವ್ ಡಿವೈಸ್ ನ್ನು ಪತ್ತೆ ಮಾಡುವಂತೆ 2018ರಲ್ಲೇ ಅಂದಿನ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ವಿಷಯ ಪ್ರಸ್ತಾಪಿಸಿದ್ದರು. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದ್ದರು. ಆದರೆ, ಈ ನಿಟ್ಟಿನಲ್ಲಿ ಯಾವುದೇ ರೀತಿ ಕ್ರಮವನ್ನು ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ.