ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯನ್ನೇ ಮನೆಗೆ ಕಳಿಸಿದ ಭುವನ್ ಚಂದ್ರ ಕಪ್ರಿ ಬಗ್ಗೆ ತಿಳಿಯಿರಿ
ಡೆಹ್ರಾಡೂನ್, ಮಾರ್ಚ್ 11: ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದರೂ, ಮುಖ್ಯಮಂತ್ರಿಯನ್ನೇ ಸೋಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ಎಲ್ಲರ ಲಕ್ಷ್ಯ ಸೆಳೆದಿದ್ದಾರೆ.
ಗುರುವಾರ ಹೊರಬಿದ್ದ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಕಾಂಗ್ರೆಸ್ಸಿನ ಭುವನ್ ಚಂದ್ರ ಕಪ್ರಿ ಸೋಲಿಸಿದ್ದಾರೆ.
Assembly Elections 2022 Results Live: ಸಿಎಂ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ರಾಜೀನಾಮೆ
ಕಳೆದ 2017ರ ಚುನಾವಣೆಯಲ್ಲಿ ಉಧಮ್ ಸಿಂಗ್ ನಗರ್ ಜಿಲ್ಲೆಯ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಕಪ್ರಿಯನ್ನು ಧಾಮಿ ಕೇವಲ 2700 ಮತಗಳ ಅಂತರದಿಂದ ಸೋಲಿಸಿದ್ದರು. ಇದಕ್ಕೆ ಪ್ರತಿಕಾರವಾಗಿ 2022ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಧಾಮಿ ಅವರನ್ನು ಕಪ್ರಿ 7000 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪ್ರಾಮಾಣಿಕ ವ್ಯಕ್ತಿತ್ವವೇ ಗೆಲುವಿನ ಸೂತ್ರ!:
40 ವರ್ಷದ ಭುವನ್ ಚಂದ್ರ ಕಪ್ರಿ ಉತ್ತರಾಖಂಡ ಕಾಂಗ್ರೆಸ್ಸಿನಲ್ಲಿ ಕಳೆದ ಹಲವು ವರ್ಷಗಳಿಂದ ದುಡಿಯುತ್ತಿದ್ದು, ರಾಜ್ಯದ ನಂಬಿಕಸ್ಥ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಾಮಾಣಿಕರ ರಾಜಕಾರಣಿ ಎನಿಸಿಕೊಂಡಿರುವ ಕಪ್ರಿ, ತಮ್ಮ ಸರಳತೆ ಮತ್ತು ಕಳಂಕರಹಿತ ಹಿನ್ನಲೆಯಿಂದಲೇ ಜನರ ಮನಸು ಗೆದ್ದಿದ್ದಾರೆ.
ಕಪ್ರಿ ಆಸ್ತಿ ಕೇವಲ 50 ಲಕ್ಷ ರೂ.
ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಭುವನ್ ಚಂದ್ರ ಕಪ್ರಿ ಅವರ ಒಟ್ಟಾರೆ ಆಸ್ತಿ ಮೌಲ್ಯವೇ 50 ಲಕ್ಷ ರೂಪಾಯಿ ಆಗಿದೆ.
ಉತ್ತರಾಖಂಡದಲ್ಲಿ ಧಾಮಿ, ಹರೀಶ್ ರಾವತ್ ಸೋಲು:
ಉತ್ತರಾಖಂಡದಲ್ಲಿ ಗುರುವಾರ ಹೊರಬಿದ್ದ ಅಂತಿಮ ಫಲಿತಾಂಶದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಸೋತು ಮುಖಭಂಗ ಅನುಭವಿಸಿದ್ದಾರೆ. ರಾಜ್ಯದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಈ ಇಬ್ಬರು ನಾಯಕರನ್ನೇ ಮತದಾರರು ಮನೆಗೆ ಕಳುಹಿಸಿದ್ದಾರೆ. ಅಸಲಿಗೆ ಕಾಂಗ್ರೆಸ್ ಪಕ್ಷವು ಎಂದಿಗೂ ಹರೀಶ್ ರಾವತ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿರಲಿಲ್ಲ. ಆದರೆ ಉತ್ತರಾಖಂಡದ ಮುಖ್ಯಮಂತ್ರಿ ಆಗಿ ಐದು ವರ್ಷಗಳ ಕಾಲ ರಾಜ್ಯ ಅಭಿವೃದ್ಧಿ ನಿಟ್ಟಿನಲ್ಲಿ ಡೈನಮಿಕ್ ಆಗಿ ಕೆಲಸ ಮಾಡಿದ ಪುಷ್ಕರ್ ಸಿಂಗ್ ಧಾಮಿಯೇ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ ಧಾಮಿಯನ್ನೂ ಸಹ ಮತದಾರರು ತಿರಸ್ಕರಿಸಿದ್ದಾರೆ.
ಉತ್ತರಾಖಂಡ ವಿಧಾನಸಭೆ ಚುನಾವಣೆ ಫಲಿತಾಂಶ:
ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಉತ್ತರಾಖಂಡದ 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಪಕ್ಷ ಸರ್ಕಾರ ರಚಿಸುವುದಕ್ಕೆ ಮ್ಯಾಜಿಕ್ ನಂಬರ್ 36 ಆಗಿದೆ. ಆದರೆ ಬಿಜೆಪಿಯು 47 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಅಧಿಕಾರವನ್ನು ಪಕ್ಕಾ ಮಾಡಿಕೊಂಡಿದೆ. 19 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿದ ಎರಡನೇ ಪಕ್ಷವಾಗಿ ಹೊರ ಹೊಮ್ಮಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 2, ಸ್ವತಂತ್ರ್ಯ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.