ಉತ್ತರಾಖಂಡ: 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ, 10 ಹಾಲಿ ಶಾಸಕರಿಗೆ ಶಾಕ್!
ಡೆಹ್ರಾಡೂನ್, ಜನವರಿ 20: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿದ್ದಾರೆ. 14 ಬ್ರಾಹ್ಮಣ ಅಭ್ಯರ್ಥಿಗಳು, 22 ರಜಪೂತ ಅಭ್ಯರ್ಥಿಗಳು, 13 ಎಸ್ಸಿ ಅಭ್ಯರ್ಥಿಗಳು ಮತ್ತು ಒಬ್ಬ ಅಭ್ಯರ್ಥಿ ಎಸ್ಟಿ ಸಮುದಾಯದವರಾಗಿದ್ದಾರೆ.
ಮೊದಲ ಪಟ್ಟಿಯ 59 ಅಭ್ಯರ್ಥಿಗಳ ಪೈಕಿ 18 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, 31 ಮಂದಿ ಪದವೀಧರರಾಗಿದ್ದಾರೆ. ಬಿಜೆಪಿ ಒಬ್ಬ ಮಾಜಿ ಸೈನಿಕ, ಒಬ್ಬ ವೈದ್ಯ ಮತ್ತು ಏಳು ರೈತರಿಗೆ ಟಿಕೆಟ್ ನೀಡಿದೆ. ನಾಲ್ವರು ಆಧ್ಯಾತ್ಮಿಕ ನಾಯಕರಿಗೂ ಬಿಜೆಪಿ ಟಿಕೆಟ್ ನೀಡಲಾಗಿದೆ. ಇಂದು ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 40 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, 10 ಹಾಲಿ ಶಾಸಕರನ್ನು ಪಕ್ಷ ಕೈಬಿಟ್ಟಿದೆ.
ಬಿಜೆಪಿ ಇಂದು ಬಿಡುಗಡೆ ಮಾಡಿರುವ 59 ಅಭ್ಯರ್ಥಿಗಳ ಪಟ್ಟಿಯಿಂದ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಅವರಿಗೆ ಟಿಕೆಟ್ ನೀಡಲಾಗಿಲ್ಲ. ರಿತು ಯಮಕೇಶ್ವರ ಕ್ಷೇತ್ರದ ಶಾಸಕಿಯಾಗಿದ್ದರು.
ಇನ್ನು ಟಿಕೆಟ್ ಸಿಗದವರಲ್ಲಿ ಖಾನ್ಪುರ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್, ತರಲಿ ಶಾಸಕ ಮಗನ್ ಲಾಲ್ ಶಾ, ಕರ್ಣಪ್ರಯಾಗ್ ಶಾಸಕ ಸುರೇಂದ್ರ ಸಿಂಗ್ ನೇಗಿ, ಯಮಕೇಶ್ವರ ಶಾಸಕಿ ರಿತು ಖಂಡೂರಿ ಮತ್ತು ಪೌರಿ ಶಾಸಕ ಮುಖೇಶ್ ಸಿಂಗ್ ಕೋಲಿ ಸೇರಿದ್ದಾರೆ.
ಇದಲ್ಲದೆ, ಗಂಗೊಳ್ಳಿಹತ್ ಶಾಸಕ ಮೀನಾ ಗಂಗೋಳ, ಕಾಪ್ಕೋಟ್ ಶಾಸಕ ಬಲ್ವಂತ್ ಸಿಂಗ್ ಭೋರಿಯಾಲ್, ದ್ವಾರಹತ್ ಶಾಸಕ ಮಹೇಶ್ ಸಿಂಗ್ ನೇಗಿ, ಅಲ್ಮೋರಾ ಶಾಸಕ ರಘುನಾಥ್ ಸಿಂಗ್ ಚೌಹಾಣ್ ಮತ್ತು ಕಾಶಿಪುರ ಶಾಸಕ ಹರ್ಭಜನ್ ಸಿಂಗ್ ಚೀಮಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಅವರು ಹರ್ದ್ವಾರದಿಂದ ಸ್ಪರ್ಧಿಸಲಿದ್ದಾರೆ. ಸುರೇಶ್ ಚೌಹಾಣ್ ಗಂಗೋತ್ರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನರೇಂದ್ರನಗರದಿಂದ ಪಕ್ಷದ ನಾಯಕ ಸುಬೋಧ್ ಉನಿಯಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಸವಿತಾ ಕಪೂರ್ ಡೆಹ್ರಾಡೂನ್ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಅಲ್ಮೋರಾ ಕ್ಷೇತ್ರದಿಂದ ಕೈಲಾಶ್ ಶರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರೇಮಚಂದ್ ಅಗರವಾಲ್ ರಿಷಿಕೇಶದಿಂದ ಸ್ಪರ್ಧಿಸಲಿದ್ದಾರೆ. ರೂರ್ಕಿ ಕ್ಷೇತ್ರದ ಟಿಕೆಟ್ ಪ್ರದೀಪ್ ಬಾತ್ರಾ ಅವರಿಗೆ ನೀಡಲಾಗಿದೆ. ಸೌರವ್ ಬಹುಗುಣ ಸಿತಾರ್ ಗಂಜ್ನಿಂದ ಸ್ಪರ್ಧಿಸಲಿದ್ದಾರೆ. ಅರವಿಂದ್ ಪಾಂಡೆ ಗದರ್ಪುರದಿಂದ ಸ್ಪರ್ಧಿಸಲಿದ್ದಾರೆ. ಧನ್ ಸಿಂಗ್ ಧಾಮಿ ಧಾರ್ಚುಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಫೆ.14ರಂದು
ಮತದಾನ
ಉತ್ತರಾಖಂಡದಲ್ಲಿ
ಜನವರಿ
21ರಂದು
ಚುನಾವಣಾ
ಅಧಿಸೂಚನೆ
ಹೊರಬೀಳಲಿದ್ದು,
ನಾಮಪತ್ರ
ಸಲ್ಲಿಸಲು
ಜನವರಿ
21ರಿಂದ
ಜ.28ರವರೆಗೆ
ಅವಕಾಶವಿರುತ್ತದೆ.
ಜನವರಿ
29ರಂದು
ನಾಮಪತ್ರ
ಪರಿಶೀಲನೆ
ನಡೆಯಲಿದ್ದು,
ನಾಮಪತ್ರ
ಹಿಂಪಡೆಯಲು
ಜನವರಿ
31
ಕೊನೆಯ
ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.