ಉತ್ತರಾಖಂಡ ಮಳೆ: ಜನಜೀವನ ಅಸ್ತವ್ಯಸ್ತ, ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಡೆಹ್ರಾಡೂನ್, ಅಕ್ಟೋಬರ್ 19: ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಉತ್ತರಾಖಂಡದಲ್ಲಿ ಸತತ ಮೂರನೇ ದಿನ ಭಾರೀ ಮಳೆಯಾಗಿದ್ದು, ಈವರೆಗೆ ಸುಮಾರು 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯು ಹೇಳಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ.
ಈ ನಡುವೆ ಹಲವಾರು ಮಂದಿ ಇನ್ನೂ ಕೂಡಾ ಅವಶೇಷಗಳಡಿಯಲ್ಲಿ ಹಾಗೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಇದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡಲಾಗಿದೆ," ಎಂದು ಈಗಾಗಲೇ ತಿಳಿಸಿದ್ದಾರೆ. ಹಾಗೆಯೇ ಇಂದು ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.
ಭಾರತದಲ್ಲಿ ವರುಣನ ಕೋಪಕ್ಕೆ ನಲುಗಿದ ಪ್ರಮುಖ ರಾಜ್ಯಗಳ ಸ್ಥಿತಿ ಹೇಗಿದೆ?
ಮುಖ್ಯಮಂತ್ರಿ ಬಳಿಕ ರುದ್ರ ಪ್ರಯಾಗ ತಲುಪಿದ್ದು ರಾಜ್ಯದಲ್ಲಿ ನೆರೆಯಿಂದ ಎಷ್ಟು ನಷ್ಟ ಉಂಟಾಗಿದೆ ಎಂದು ಪರಿಶೀಲನೆ ನಡೆಸಿದರು. ಸಚಿವ ಧನ್ ಸಿಂಗ್ ರಾವತ್ ಮತ್ತು ರಾಜ್ಯದ ಡಿಜಿಪಿ ಅಶೋಕ್ ಕುಮಾರ್ ಅವರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆಗಿದ್ದರು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ವಿಪರೀತ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮತ್ತು ದುರಂತದಿಂದ ಉಂಟಾದ ಹಾನಿಯ ಅವಲೋಕನಕ್ಕಾಗಿ ರುದ್ರ ಪ್ರಯಾಣಗಕ್ಕೆ ತೆರಳಿದೆ. ವಿಪತ್ತಿನಿಂದ ಹಾನಿಗೊಳಗಾದ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.
"ರಾಜ್ಯದ ಹಲವು ಪ್ರದೇಶಗಳಲ್ಲಿ ಮನೆಗಳು ಹಾಗೂ ಸೇತುವೆಗಳಿಗೆ ಹಾನಿ ಉಂಟಾಗಿದೆ. ಈವರೆಗೆ 16 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಮೂರು ಸೇನಾ ಹೆಲಿಕಾಪ್ಟರ್ಗಳನ್ನು ನಿಯೋಜನೆ ಮಾಡಲಾಗಿದೆ," ಎಂದು ಕೂಡಾ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಹಿಂದೆ ಹೇಳಿದ್ದರು.
ಉತ್ತರಾಖಂಡದಲ್ಲಿ ವರುಣನ ಆರ್ಭಟ, 16 ಮಂದಿ ಸಾವು
ಈಗಲೂ ರಕ್ಷಣಾ ಕಾರ್ಯಾಚರಣೆಗಳು ಉತ್ತರಾಖಂಡದಲ್ಲಿ ನಡೆಯುತ್ತಿದೆ. ಹವಾಮಾನ ಇಲಾಖೆಯು ಇಂದಿನಿಂದ ಉತ್ತರಾಖಂಡದಲ್ಲಿ ಮಳೆಯು ಕೊಂಚ ಕಡಿಮೆ ಆಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿದೆ. ಕಣಿವೆ ಪ್ರದೇಶದಲ್ಲಿ ಗೊಂದಲಮಯ ವಾತಾವರಣ ಮನೆ ಮಾಡಿದೆ. ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು, ಕಟ್ಟಡಗಳು ಹಾಗೂ ಸೇತುವೆಗಳು ಜಲಾವೃತವಾಗಿದೆ. ಇನ್ನು ಕೆಲವು ಜಿಲ್ಲೆಗಳ ಸಾರಿಗೆ ಸಂಪರ್ಕವೇ ಕಡಿತವಾಗಿದೆ ಎಂದು ವರದಿಯು ಹೇಳಿದೆ.
ಇನ್ನು ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಅವಘಡದಿಂದ ಸಾವನ್ನಪ್ಪಿದವರ ಪೈಕಿ ನೇಪಾಳದ ಕಾರ್ಮಿಕರು ಕೂಡಾ ಸೇರಿದ್ದಾರೆ. ಈ ಕಾರ್ಮಿಕರು ಪೌರಿ ಜಿಲ್ಲೆಯ ಲ್ಯಾನ್ಸ್ಡೌನ್ನಲ್ಲಿ ವಾಸವಾಗಿದ್ದರು. ಮೇಲಿನ ಹೊಲದಿಂದ ನೀರಿನ ರಭಸಕ್ಕೆ ತೇಲಿ ಬಂದ ಅವಶೇಷಗಳಡಿಯಲ್ಲಿ ಇವರು ಜೀವಂತ ಸಮಾಧಿಯಾಗಿದ್ದರು. ಇನ್ನು ಸೋಮವಾರ ಹಲವಾರು ಸಾವು ವರದಿಯಾಗಿದೆ. ಚಂಪಾವತ್ ಜಿಲ್ಲೆಯಲ್ಲಿ ಮನೆಗಳು ಕುಸಿದ ನಂತರ ಹಲವಾರು ಸಾವು ಪ್ರಕರಣಗಳು ವರದಿಯಾಗಿದೆ. ನೀರಿನ ಮಟ್ಟ ಏರಿಕೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕೊಚ್ಚಿ ಹೋಗಿದೆ.
ಉತ್ತರಾಖಂಡದಲ್ಲಿ ಪ್ರವಾಸ ಸ್ಥಿತಿಯ ಬಗ್ಗೆ ತಿಳಿಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮಾತ್ರವಲ್ಲದೇ ಸೇನೆಯು ಕೂಡಾ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ರಾಜ್ಯದ ವಿಪತ್ತು ನಿರ್ವಹಣಾ ಕಾರ್ಯದರ್ಶಿಯ ಪ್ರಕಾರ ಉತ್ತರಾಖಂಡದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 200 ಮಿಲಿ ಮೀಟರ್ ಮಳೆ ಸುರಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ರಾಜ್ಯದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ಎಸ್ ಎ ಮುರುಗೇಶನ್, "ಸೋಮವಾರ ಪೌರಿ ಹಾಗೂ ಚಂಪಾವತ್ನಲ್ಲಿ ಐದು ಸಾವು ವರದಿಯಾಗಿದೆ. ಅಲ್ಮೊರಾ, ನೈನಿತಲ್, ಉಧಾಮ್ ಸಿಂಗ್ ನಗರದಲ್ಲಿ ಇಂದು ಒಟ್ಟು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ," ಎಂದು ತಿಳಿಸಿದರು.
(ಒನ್ಇಂಡಿಯಾ ಸುದ್ದಿ)