ಕೊರೊನಾ ಸೋಂಕು ಹೆಚ್ಚಳ: ಚಾರ್ ಧಾಮ್ ಯಾತ್ರೆ ರದ್ದು
ಹರಿದ್ವಾರ, ಏಪ್ರಿಲ್ 29: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ರದ್ದುಗೊಳಿಸಲಾಗಿದೆ.
ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕುಂಭ ಮೇಳವು ಉತ್ತರಾಖಂಡ ಮಾತ್ರವಲ್ಲದೇ ದೇಶಾದ್ಯಂತ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿತ್ತು. ಕುಂಭ ಮೇಳದ ಪರಿಣಾಮದಿಂದಾಗಿ ಉತ್ತರಾಖಂಡದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.1800ರಷ್ಟು ಹೆಚ್ಚಾಗಿತ್ತು. ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು.
ಕುಂಭಮೇಳ: ಉತ್ತರಾಖಂಡದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ?
ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೇದಾರನಾಥ, ಬದ್ರಿನಾಥ, ಯಮುನೋತ್ರಿ ಹಾಗೂ ಗಂಗೋತ್ರಿಗಳಿಗೆ ಸಾವಿರಾರು ಭಕ್ತರು ಯಾತ್ರೆ ನಡೆಸಲಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಆದರೆ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು, ಕುಂಭ ಮೇಳದಿಂದ ಸರ್ಕಾರ ಇನ್ನೂ ಬುದ್ಧಿ ಕಲಿತಿಲ್ಲವೇ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಯಾತ್ರೆ ರದ್ದುಗೊಳಿಸಿದೆ. ಈ ವರ್ಷ ಆ ನಾಲ್ಕು ದೇವಾಲಯಗಳಲ್ಲಿರುವ ಅರ್ಚಕರು ಮಾತ್ರ ವಿಶೇಷ ಪೂಜೆ ನಿರ್ವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.