ಸಂತ್ರಸ್ತರ ರಕ್ಷಣೆಗೆ ಹೊರಟ ಹೆಲಿಕಾಪ್ಟರ್ ಪತನ, ಮೂವರ ದುರ್ಮರಣ
ಉತ್ತರಕಾಶಿ, ಆಗಸ್ಟ್ 21: ಪ್ರವಾಹ ಸಂತ್ರಸ್ತರ ರಕ್ಷಣೆಗೆಂದು ಹೊರಟ ಹೆಲಿಕಾಪ್ಟರ್ ವೊಂದು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ಪತನಗೊಂಡು ಮೂವರು ದುರ್ಮರಣಕ್ಕೀಡಾದ ಘಟನೆ ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಮೊಲ್ಡಿಯಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇದುವರೆಗೂ 35 ಜನರು ಮೃತರಾಗಿದ್ದಾರೆ. ಇಲ್ಲಿನ ತಾನ್ಸ್ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ತಲೆದೋರಿದೆ. ಬೆಟ್ಟ ಪ್ರದೇಶವಾದ ಉತ್ತರಾಖಂಡದಲ್ಲಿ ಪ್ರವಾಹ ಮತ್ತು ಮಳೆಗೆ ಸಿಕ್ಕ ಜನರನ್ನು ರಕ್ಷಿಸಲೆಂದು ತೆರಳಿದ್ದ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದೆ.
ಮೃತರನ್ನು ಕ್ಯಾಪ್ಟನ್ ಲಾಲ್, ಕೊ-ಪೈಲಟ್ ಶೈಲೇಶ್ ಮತ್ತು ಇನ್ನೋರ್ವ ಸ್ಥಳೀಯ ರಾಜ್ಪಾಲ್ ಎಂದು ಗುರುತಿಸಲಾಗಿದೆ.
ಭಾರತದಲ್ಲಿನ ಮಳೆ, ಪ್ರವಾಹದ ಬಗ್ಗೆ ನಾಸಾ ಹೇಳಿದ್ದೇನು?
ಹೆಲಿಕಾಪ್ಟರ್ ನಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಂತ್ರಸ್ತ ಕೇಂದ್ರಗಳಿಗೆ ತೆರಳಲಾಗುತ್ತಿತ್ತು. ಮೊರಿ ಎಂಬ ಪ್ರದೇಶದಿಂದ ಉತ್ತರ ಕಾಶಿಯ ಮೊಲ್ಡಿಯಲ್ಲಿ ಹೆಲಿಕಾಪ್ಟರ್ ಇಳಿಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಉತ್ತರಾಖಂಡ ಮಾತ್ರವಲ್ಲದೆ, ಹಿಮಾಚಲಪ್ರದೇಶ, ಪಂಜಾಬ್, ಹರ್ಯಾಣಗಳಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಹಿಮಾಚಲ ಪ್ರದೇಶದದಲ್ಲಿ ಮಳೆಗೆ 43 ಜನರು ಅಸುನೀಗಿದ್ದಾರೆ.