Breaking: ಉತ್ತರಕಾಶಿ ಬಳಿ ಕಂದಕಕ್ಕೆ ಉರುಳಿದ ಬಸ್, 22 ಮಂದಿ ಮೃತ
ಉತ್ತರಕಾಶಿ(ಉತ್ತರಾಖಂಡ್), ಜೂನ್ 5: ಚಾರ್ ಧಾಮ್ ಯಾತ್ರೆಗೆ ತೆರಳುತ್ತಿದ್ದ ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದಮ್ತಾ ಬಳಿ ಯಾತ್ರಾರ್ಥಿಗಳನ್ನು ಹೊಂದಿದ್ದ ಬಸ್ ಕಮರಿಯೊಂದಕ್ಕೆ ಬಿದ್ದಿದೆ. ಈ ಬಸ್ ನಲ್ಲಿದ್ದ ಸುಮಾರು 28 ಪೈಕಿ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
ಈ ದುರ್ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದಾರೆ, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ ಚಾರ್ ಧಾಮ್ ಯಾತ್ರೆಗೆ ತೆರಳುತ್ತಿದ್ದ ಬಸ್ ಇದಾಗಿತ್ತು. ಪನ್ನಾದಿಂದ ಯಮುನೋತ್ರಿಗೆ 28 ಪ್ರಯಾಣಿಕರು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರುಹೇಲಾ ಸೇರಿದಂತೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಘಟನೆ ಬಗ್ಗೆ ಮಾತನಾಡಿರುವುದಾಗಿ ಹೇಳಿದ್ದಾರೆ. "ಸ್ಥಳೀಯ ಅಡ್ಮಿನ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಎನ್ಡಿಆರ್ಎಫ್ ಶೀಘ್ರದಲ್ಲೇ ತಲುಪಲಿದೆ" ಎಂದು ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
उत्तराखंड में श्रद्धालुओं की बस के खाई में गिरने की सूचना अत्यंत दुःखद है। इस पर मैंने मुख्यमंत्री @pushkardhami जी से बात की है। स्थानीय प्रशासन व SDRF की टीमें बचाव कार्य में लगी हैं और घायलों को उपचार के लिए नजदीकी अस्पताल ले जाया जा रहा है। NDRF भी शीघ्र वहाँ पहुँच रही है।
— Amit Shah (@AmitShah) June 5, 2022
ಸಂತ್ರಸ್ತರಿಗೆ ಮೋದಿಯಿಂದ ಪರಿಹಾರ
ಉತ್ತರಾಖಂಡದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಚಾರ್ ಧಾಮ್ ಯಾತ್ರೆ: ಕೋವಿಡ್-19 ಪರೀಕ್ಷೆ ಇಲ್ಲ, ಲಸಿಕೆ ಪ್ರಮಾಣಪತ್ರವೂ ಕಡ್ಡಾಯವಲ್ಲ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯ ಬಗ್ಗೆ ಟ್ವೀಟ್ ಮಾಡಿ, "ಉತ್ತರಾಖಂಡದ ಕಮರಿಗೆ ಬಸ್ ಬಿದ್ದು ಪನ್ನಾ ಜಿಲ್ಲೆಯ ಯಾತ್ರಾರ್ಥಿಗಳು ಮೃತಪಟ್ಟಿರುವುದು ದುರದೃಷ್ಟಕರವಾಗಿದೆ. ನಮ್ಮ ತಂಡವು ಉತ್ತರಾಖಂಡ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಗಾಯಗೊಂಡವರ ಚಿಕಿತ್ಸೆಗೆ ನೆರವಾಗಲಾಗುತ್ತಿದೆ ಮತ್ತು ಮೃತದೇಹಗಳನ್ನು ಮರಳಿ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ." ಎಂದಿದ್ದಾರೆ.
उत्तरकाशी में हुई अत्यंत दु:खद दुर्घटना के दृष्टिगत आपदा कंट्रोल रूम पहुंचकर मैंने स्वयं स्थिति पर नजर बनाए रखी है। स्थानीय प्रशासन व SDRF की टीमें बचाव कार्य में लगी हैं और NDRF की टीम भी शीघ्र वहाँ पहुँच रही है।
— Pushkar Singh Dhami (@pushkardhami) June 5, 2022
ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿ, ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ತೆರಳಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಚಾರ್ ಧಾಮ್ ಯಾತ್ರೆಯ ಭಾಗವಾಗಿರುವ ಯಮುನೋತ್ರಿ ಅಲ್ಲದೆ, ಬದರಿನಾಥ, ಕೇದಾರನಾಥ, ಗಂಗೋತ್ರಿಯ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳಲಾಗುತ್ತದೆ. ಚಾರ್ ಧಾಮ್ ಯಾತ್ರೆಗೆ ಆಗಮಿಸುವ ಅನ್ಯರಾಜ್ಯದ ಭಕ್ತಾದಿಗಳು ಗಡಿಯಲ್ಲಿ ಕೋವಿಡ್-19 ಪರೀಕ್ಷೆಗೆೆ ಒಳಗಾಗುವ ಅಗತ್ಯ ಇರುವುದಿಲ್ಲ. ಅಲ್ಲದೇ ಮೊದಲಿನಂತೆ ಕೊರೊನಾವೈರಸ್ ಲಸಿಕೆ ಪಡೆದುಕೊಂಡಿರುವ ಬಗ್ಗೆ ಯಾವುದೇ ರೀತಿ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಲ್ಲ ಎಂದು ಹೇಳಲಾಗಿದೆ.
Recommended Video
ಈ ಬಾರಿ ಚಾರ್ ಧಾಮ್ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಜೊತೆಗೆ ವಿವಿಧ ಕಾರಣಗಳಿಗೆ ಮೃತಪಟ್ಟಿರುವ ಸಂಖ್ಯೆಯೂ ಅಧಿಕವಾಗಿದೆ. ಒಟ್ಟಾರೆಯಾಗಿ ಯಮುನೋತ್ರಿ ಮಾರ್ಗವಾಗಿ 14 ಮಂದಿ ಯಾತ್ರಾರ್ಥಿಗಳು, ಗಂಗೋತ್ರಿ ಮಾರ್ಗವಾಗಿ 4 ಮಂದಿ, ಕೇದರನಾಥ ಮಾರ್ಗವಾಗಿ 15 ಮಂದಿ ಹಾಗೂ ಬದರಿನಾಥ ಮಾರ್ಗದ 8 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.