ಬಿಜೆಪಿ ಶಾಸಕಿ ಬಂದು ಹೋದ ದೇವಸ್ಥಾನ ಗಂಗಾಜಲದಿಂದ ಶುದ್ಧೀಕರಣ
ಹಮಿರ್ಪುರ್, ಜುಲೈ 31: ಬಿಜೆಪಿ ಶಾಸಕಿ ಮನೀಶಾ ಅನುರಾಗಿ ಅವರು ಭೇಟಿ ನೀಡಿದ ದೇವಸ್ಥಾನವನ್ನು ಗಂಗಾಜಲದಿಂದ ತೊಳೆದು ಶುದ್ಧಗೊಳಿಸಿದ್ದಲ್ಲದೆ, ದೇವರ ಮೂರ್ತಿಯನ್ನು ಶುದ್ಧೀಕರಿಸಲು ಅಲಹಾಬಾದ್ಗೆ ಕೊಂಡೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಾಸಕಿ ಮನೀಶಾ ಅನುರಾಗಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಜುಲೈ 12ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
ಈ ವೇಳೆ ಅವರು ಹಮಿರ್ಪುರ್ ಪಟ್ಟಣದ ದೇವಸ್ಥಾನವೊಂದಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಿದ್ದರು.
ಗೋರಖನಾಥನಿಗೆ ಹರಕೆ: ಕಾಂಗ್ರೆಸ್ ಸೋಲಲಿ, ರಾಹುಲ್ ಗೆ ಪತ್ನಿ ಸಿಗಲಿ
ಆದರೆ, ಅವರು ಬಂದು ಹೋದ ಬಳಿಕ ದೇವಸ್ಥಾನ ಅಪವಿತ್ರಗೊಂಡಿದೆ ಎಂದು ಸಂಪೂರ್ಣ ಆವರಣವನ್ನು ಗಂಗಾಜಲದಿಂದ ಶುದ್ಧಗೊಳಿಸಿತ್ತು.
ದೇವರ ಮೂರ್ತಿಯನ್ನು ಶುದ್ಧೀಕರಿಸುವ ಸಲುವಾಗಿ ಅದನ್ನು ಅಲಹಾಬಾದ್ಗೆ ಕೊಂಡೊಯ್ಯಲಾಗಿದೆ.
'ಇದುವರೆಗೂ ಯಾವುದೇ ಮಹಿಳೆ ದೇವಸ್ಥಾನವನ್ನು ಪ್ರವೇಶಿಸಿರಲಿಲ್ಲ. ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಮನೀಶಾ ಅನುರಾಗಿ ಅವರು ಆವರಣದೊಳಗೆ ಪ್ರವೇಶಿಸುವಾಗ ನಾನು ಅಲ್ಲಿ ಇರಲಿಲ್ಲ. ಇದ್ದಿದ್ದರೆ, ಅವರಿಗೆ ಒಳಗೆ ಬರಲು ಅವಕಾಶವನ್ನೇ ನೀಡುತ್ತಿರಲಿಲ್ಲ' ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
ಈ ದೇವಸ್ಥಾನವು ಮಹಾಭಾರತ ಯುಗಕ್ಕೆ ಸೇರಿದ್ದು ಎಂದು ಸ್ಥಳೀಯರು ನಂಬಿದ್ದಾರೆ. ದೇವಸ್ಥಾನದೊಳಗೆ ಪ್ರವೇಶಿಸಲು ಮಹಿಳೆಯರಿಗೆ ನಿರ್ಬಂಧವಿದೆ. ಅವರು ಹೊರಗೆ ನಿಂತು ಪ್ರಾರ್ಥನೆ ಸಲ್ಲಿಸಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.