ದೇವಸ್ಥಾನದಲ್ಲಿ ಇಫ್ತಾರ್: ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಸಂದೇಶ
ಲಖನೌ, ಜೂನ್ 11: ಕೋಮು ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ದೇವಸ್ಥಾನವೊಂದು ಕೋಮು ಸೌಹಾರ್ದಕ್ಕೆ ಸಂದೇಶವನ್ನು ಸಾರುವ ಮೂಲಕ ಗಮನ ಸೆಳೆದಿದೆ.
ಕೋಮು ಸಾಮರಸ್ಯದ ಪ್ರತೀಕವಾಗಿ ಲಖನೌದ ಮಂಕಮೇಶ್ವರ ದೇವಸ್ಥಾನವು ಭಾನುವಾರ ಸಂಜೆ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿತ್ತು.
ದೇಶದೆಲ್ಲೆಡೆ ತೆರೆದುಕೊಂಡ ಇಫ್ತಾರ್ ಕೂಟದ ಸಂಭ್ರಮ
ಈ ದೇವಸ್ಥಾನದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ಇದೇ ಮೊದಲ ಬಾರಿ.
ರಂಜಾನ್ ಒಂದು ಧಾರ್ಮಿಕ ಆಚರಣೆಯ ತಿಂಗಳು. ನಾವು ಪ್ರತಿ ಹಬ್ಬವನ್ನೂ ಅತ್ಯುತ್ಸಾಹದಿಂದ ಆಚರಿಸಬೇಕು ಎಂದು ಮಂಕಮೇಶ್ವರ ದೇವಸ್ಥಾನದ ಮಹಾಂತ ದಿವ್ಯ ಗಿರಿ ಹೇಳಿದರು.
ಉಪವಾಸ ನಿರತರಾಗಿರುವವರಿಗೆ ಸಹಾಯ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಇದರಲ್ಲಿ ಪ್ರತಿಯೊಬ್ಬರೂ ಜಾತಿ ಭೇದ ಮರೆತು ಇದರಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದು ರೋಜಾವನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ಉತ್ತಮವಾದ ನಿಲುವು. ಅವರು ಇಫ್ತಾರ್ ಕೂಟವನ್ನು ಆಯೋಜಿಸಿದ್ದ ಬಗೆ ಶ್ಲಾಘನೀಯ. ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿಯ ಚಟುವಟಿಕೆಗಳು ಹಿಂದೂ ಮತ್ತು ಮುಸ್ಲಿಮರ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸಲಿದೆ ಎಂದು ಇಮಾಮ್ ಅಬ್ದುಲ್ ಮನ್ನನ್ ಹೇಳಿದ್ದಾರೆ.