ಕಳ್ಳಬಟ್ಟಿ ಸೇವನೆಗೆ ಉತ್ತರ ಪ್ರದೇಶದಲ್ಲಿ 9 ಜನ ಬಲಿ
ಲಕ್ನೋ, ಜನವರಿ 11: ಉತ್ತರ ಪ್ರದೇಶದಲ್ಲಿ ಶಂಕಿತ ಕಳ್ಳಬಟ್ಟಿ ದುರಂತವೊಂದು ಸಂಭವಿಸಿದ್ದು 9 ಜನರು ಬಲಿಯಾಗಿದ್ದಾರೆ.
ಇಲ್ಲಿನ ಬರಬಂಕಿ ಜಿಲ್ಲೆಯಲ್ಲಿ ಸ್ಥಳೀಯ ಮೆನಯೊಂದಕ್ಕೆ ಬೇರೆ ಬೇರೆ ಊರಿನಿಂದ ಜನರು ಬಂದಿದ್ದು. ಈ ವೇಳೆ ಮಂಗಳವಾರ ರಾತ್ರಿ ಕಳ್ಳಬಟ್ಟಿ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ಕಳ್ಳಬಟ್ಟಿ ಸೇವನೆ ಬಳಿಕ ಜನರು ಅಸ್ವಸ್ಥಗೊಂಡಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಕಳ್ಳಬಟ್ಟಿ ಸೇವನೆಯನ್ನು ಜಿಲ್ಲಾಡಳಿತ ಖಚಿತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪದೇ ಪದೇ ಕಳ್ಳಬಟ್ಟಿ ದುರಂತಗಳು ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಈ ದಂಧೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉತ್ತರ ಪ್ರದೇಶದಲ್ಲಿ ಜೀವಾವಧಿಯಿಂದ ಮರಣದಂಡನೆವರೆಗೆ ಶಿಕ್ಷೆ ನೀಡಲು ಅವಕಾಶವಿದೆ.
ಒಂದೊಮ್ಮೆ ಕಳ್ಳಬಟ್ಟಿ ಸೇವನೆಯಿಂದ ಸಾವನ್ನಪ್ಪಿದರೆ 'ಉತ್ತರ ಪ್ರದೇಶ ಅಬಕಾರಿ (ತಿದ್ದುಪಡಿ) ಮಸೂದೆ 2017'ರ ಅನ್ವಯ ಕನಿಷ್ಠ 5 ಲಕ್ಷ ರೂಪಾಯಿ ಹಾಗೂ ಗರಿಷ್ಠ 10 ಲಕ್ಷ ದಂಡದ ಜತೆಗೆ ಮರಣ ದಂಡನೆ ವಿಧಿಸಲೂ ಅವಕಾಶವಿದೆ.
ದೇಶದ ಅತೀ ದೊಡ್ಡ ರಾಜ್ಯದಲ್ಲಿ ಆಗಾಗ ಕಳ್ಳಬಟ್ಟಿ ದುರಂತಗಳು ಮರುಕಳಿಸುತ್ತಲೇ ಇರುತ್ತವೆ. ಈ ಹಿಂದೆ ಕಳೆದ ಜೂನ್ ನಲ್ಲಿ ಅಝಂಘರ್ ನಲ್ಲಿ 17 ಜನರು ಕಳ್ಳಬಟ್ಟಿ ಸೇವಿಸಿ ಮೃತರಾಗಿದ್ದು 2015ರಲ್ಲಿ ಲಕ್ನೋದ ಮೊಲಿಹಾಬಾದ್ ನಲ್ಲಿ ಕಳ್ಳಬಟ್ಟಿಗೆ 28 ಜನ ಬಲಿಯಾಗಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.