ಮಸೂದೆ ವಿರುದ್ಧ ಪ್ರತಿಭಟಿಸುವ ಶಕ್ತಿಯೂ ಇಲ್ಲ ರೈತರ ಸ್ಥಿತಿ
ನವದೆಹಲಿ, ಸೆಪ್ಟೆಂಬರ್ 24: ಕೇಂದ್ರ ಸರ್ಕಾರವು ವಿರೋಧದ ನಡುವೆಯೂ ಅಂಗೀಕರಿಸಿದ ಕೃಷಿ ಸಂಬಂಧಿ ಮಸೂದೆಗಳು ರಾಜಕೀಯ ಹಾಗೂ ಕೃಷಿ ವಲಯದಲ್ಲಿ ಕಿಡಿ ಹಚ್ಚಿಸಿದೆ. ಈ ಮಸೂದೆಗಳಲ್ಲಿ ವಾಸ್ತವವಾಗಿ ಏನಿದೆ ಎನ್ನುವುದು ರೈತರಿಗೆ ಸ್ಪಷ್ಟವಾಗಿ ತಲುಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ವಿವಿಧೆಡೆ ರೈತ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.
ಕರ್ನಾಟಕದಲ್ಲಿ ರೈತ ಸಂಘಟನೆಗಳು ಬಂದ್ ಕುರಿತು ಆಲೋಚನೆ ನಡೆಸುತ್ತಿವೆ. ಹರಿಯಾಣ ಮತ್ತು ಪಂಜಾಬ್ನಲ್ಲಿ ಈಗಾಗಲೇ ರೈತರ ಅಸಮಾಧಾನ ಭುಗಿಲೆದ್ದಿದೆ. ಕೃಷಿ ಹಾಗೂ ಕೃಷಿ ಉತ್ಪನ್ನಗಳು ದೊಡ್ಡ ಮಟ್ಟದ ಖಾಸಗಿ ಕಂಪೆನಿಗಳ ಹಿಡಿತಕ್ಕೆ ಸಿಲುಕುವ ಭೀತಿ ರೈತರಲ್ಲಿ ಮೂಡಿದೆ. ಆದರೆ ಉತ್ತರ ಪ್ರದೇಶದಲ್ಲಿ ರೈತ ಸಂಘಟನೆಗಳು ಗೊಂದಲದಲ್ಲಿದ್ದು, ಕಾದು ನೋಡುವ ತಂತ್ರ ಅನುಸರಿಸುತ್ತಿವೆ.
ಬೆಂಗಳೂರಿಗೆ ಸೆ. 25ರಿಂದಲೇ ಬಂದ್ ಬಿಸಿ, ಸಂಚಾರ ಅಸ್ತವ್ಯಸ್ತ!
ಸರ್ಕಾರ ನಿಯಂತ್ರಣದ ಮಂಡಿಗಳು, ಮಧ್ಯವರ್ತಿಗಳು ಹಾಗೂ ಖಾಸಗಿ ಕಂಪೆನಿಗಳ ನಡುವೆ ಯಾವುದು ಸೂಕ್ತ ಎನ್ನುವುದು ಅನೇಕ ರೈತರನ್ನು ಕಾಡುತ್ತಿದೆ. ಸರ್ಕಾರ ನಿಯಂತ್ರಣದ ಎಪಿಎಂಸಿ ಅಸ್ತಿತ್ವದಲ್ಲಿ ಮುಂದುವರಿಯಲಿದೆ. ಜತೆಗೆ ಖರೀದಿ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ ಪದ್ಧತಿಗಳು ಕೂಡ ಇರಲಿವೆ ಎಂದು ರೈತರ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶದ ರೈತರ ಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ಸರ್ಕಾರದ ಮಂಡಿಗಳು ಮತ್ತು ಮುಕ್ತ ಮಾರುಕಟ್ಟೆಗಳೆರಡೂ ರೈತರ ಶೋಷಣೆಯಲ್ಲಿ ತೊಡಗುತ್ತಿವೆ. ಹೆಚ್ಚಿನ ರೈತರಿಗೆ ತಮ್ಮ ಬೆಳೆಯ ಮೇಲೆ ಎಂಎಸ್ಪಿ ಸಿಗುತ್ತಲೇ ಇಲ್ಲ. ಮುಂದೆ ಓದಿ.
ಖರೀದಿಯಲ್ಲಿ ಉತ್ತರ ಪ್ರದೇಶ ಹಿಂದೆ
ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ಸರ್ಕಾರಗಳ ಮಂಡಿಗಳು ಮತ್ತು ಖರೀದಿ ವ್ಯವಸ್ಥೆಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಅದಕ್ಷತೆ ಹೆಚ್ಚಿದೆ. ಏಕೆಂದರೆ ಆ ರಾಜ್ಯಗಳಲ್ಲಿ ದೊಡ್ಡ ಹಿಡುವಳಿದಾರರ ಸಂಖ್ಯೆ ಹೆಚ್ಚಿದೆ. ಅವರು ಅಷ್ಟೇ ಪ್ರಭಾವಶಾಲಿಗಳಾಗಿದ್ದಾರೆ. ಉತ್ತರ ಪ್ರದೇಶದ ಸ್ಥಿತಿ ಸಂಪೂರ್ಣ ವಿಭಿನ್ನ. ರಾಜ್ಯ ಸರ್ಕಾರ ಕೇವಲ 36 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಆದರೆ ಅದರ ಗುರಿ ಇದ್ದದ್ದು 55 ಲಕ್ಷ ಮೆಟ್ರಿಕ್ ಟನ್.
ಶೇ 15ಕ್ಕಿಂತಲೂ ಕಡಿಮೆ ಖರೀದಿ
ಒಟ್ಟಾರೆ ಬೆಳೆಯ ಶೇ 15ಕ್ಕಿಂತಲೂ ಕಡಿಮೆ ಸರ್ಕಾರ ಖರೀದಿ ಮಾಡುತ್ತಿದೆ. ಹೀಗಾಗಿ ಈ ಸನ್ನಿವೇಶದಲ್ಲಿ ರೈತರಿಗೆ ಇರುವ ಏಕೈಕ ಆಯ್ಕೆಯೆಂದರೆ ಮುಕ್ತ ಮಾರುಕಟ್ಟೆ. ದೊಡ್ಡ ಕಂಪೆನಿಗಳು ರೈತರೊಂದಿಗೆ ಚೌಕಾಸಿಗೆ ಇಳಿಯುತ್ತಿವೆ. ಸಣ್ಣ ಪುಟ್ಟ ರೈತರಿಂದ ಒಟ್ಟಾರೆಯಾಗಿ ಬೆಳೆಗಳನ್ನು ಖರೀದಿ ಮಾಡುತ್ತಿವೆ. ಇದರಿಂದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ನೆರವು ಪಡೆಯಬೇಕಾಗಿದೆ. ಅವರನ್ನು ಸ್ಥಳೀಯ ಭಾಷೆಯಲ್ಲಿ ಅಧಾತಿಯಾಸ್ ಎಂದು ಕರೆಯಲಾಗುತ್ತದೆ. ಈ ಅಧಾತಿಯಾಸ್ಗಳು ಎಂಎಸ್ಪಿಗಿಂತಲೂ ಕಡಿಮೆ ಬೆಲೆ ನೀಡುತ್ತಾರೆ. ಅವರು ನಿಗದಿ ಮಾಡಿದ ಮೊತ್ತಕ್ಕೆ ಮಾರುವುದರ ಹೊರತಾಗಿ ರೈತರಿಗೆ ಅನ್ಯ ಮಾರ್ಗವಿಲ್ಲ.
ಕೃಷಿ ಮಸೂದೆ ವಾಪಸ್ ಕಳುಹಿಸುವಂತೆ ರಾಷ್ಟ್ರಪತಿಗೆ ಮನವಿ
ಚೌಕಾಸಿ ಮಾಡುವ ಸ್ಥಿತಿಯಲ್ಲಿಲ್ಲ
ಸ್ಥಿತಿವಂತ ರೈತರ ಪರಿಸ್ಥಿತಿಯೂ ಇದರಿಂದ ಭಿನ್ನವಲ್ಲ. ಏಕೆಂದರೆ ಅವರೂ ಮಧ್ಯವರ್ತಿಗಳ ಮೂಲಕವೇ ಮಾರುಕಟ್ಟೆ ತಲುಪಬೇಕು. ಚೌಕಾಸಿ ಮಾಡುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಅವರಿಗೆ ಇಲ್ಲ. ಹಾಗಾಗಿ ಈ ಮಸೂದೆಗಳ ವಿರುದ್ಧ ದನಿ ಎತ್ತುವ ಶಕ್ತಿಯೂ ಅವರಲ್ಲಿಲ್ಲ.
ಎಂಎಸ್ಪಿಯಾದರೂ ಉಳಿಯುವುದೇ?
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯವುದೇ, ಇಲ್ಲವೇ ಎನ್ನುವುದೇ ರೈತರಿಗೆ ಗೊತ್ತಾಗುತ್ತಿಲ್ಲ. ಈಗಲೂ ಅವರಿಗೆ ಎಂಎಸ್ಪಿಯ ಮಟ್ಟದಲ್ಲಿ ದರ ಸಿಗುತ್ತಿಲ್ಲ. ಖಾಸಗಿ ಖರೀದಿದಾರರು ಕಡಿಮೆ ಪಾವತಿ ಮಾಡಿದರೂ ರೈತರು ಮುಕ್ತ ಮಾರುಕಟ್ಟೆಯಿಂದಾಚೆ ಹೊಸ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಪಕ್ಷ ಎಂಎಸ್ಪಿ ಪದ್ಧತಿ ಮುಂದುವರಿಸುವ ಮೂಲಕ ಖಾಸಗಿ ಖರೀದಿದಾರರು ತಮ್ಮ ಮನಬಂದಂತೆ ದರ ನಿಗದಿಪಡಿಸುವ ಅವಕಾಶಕ್ಕೆ ಕೊಡುವುದಿಲ್ಲ ಎಂಬ ಭರವಸೆಯನ್ನಷ್ಟೇ ಸರ್ಕಾರದ ಮೇಲೆ ಉಳಿಸಿಕೊಂಡಿದ್ದಾರೆ.