ಲಕ್ನೋ ಮಸೀದಿಗೆ ಕೇಸರಿ ಬಣ್ಣ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ
ಲಕ್ನೋ, ಜನವರಿ 05: ಉತ್ತರ ಪ್ರದೇಶದ ಲಕ್ನೋದ ಮಸೀದಿಯೊಂದರ ಹೊರಾಂಗಣ ಗೋಡೆಗೆ ಕೇಸರಿ ಬಣ್ಣ ಬಳಿದಿರುವುದ ಕುರಿತಂತೆ ಉತ್ತರ ಪ್ರದೇಶದ ವಿರೋಧ ಪಕ್ಷಗಳು ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಮಸೀದಿಯ ಗೋಡೆಗೆ ಕೇಸರಿ ಬಣ್ಣ ಬಳಿಯುವ ಮೂಲಕ ಮುಸ್ಲಿಮರ ಧಾರ್ಮಿಕ ಭಾವನೆಯನ್ನು ನೋಯಿಸಲಾಗುತ್ತಿದೆ. ಸರ್ಕಾರದ ಈ ಸರ್ವಾಧಿಕಾರಿ ನಡವಳಿಕೆ ಸರಿಯಲ್ಲ ಎಂದು ಹಲವರು ದೂರಿದ್ದಾರೆ.
ಜ್ಞಾನೋದಯವಾಗಬೇಕಂದ್ರೆ ಕೇಸರಿ ಬಣ್ಣವನ್ನು ಅಪ್ಪಿಕೊಳ್ಳಿ: ಮೊಹ್ಸಿನ್ ರಾಜಾ
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಸಚಿವ ಮೊಹ್ಸಿನ್ ರಾಜಾ, "ಇದರಲ್ಲಿ ವಿವಾದ ಹುಟ್ಟಿಸುವಂಥದು ಏನೂ ಇಲ್ಲ. ಕೇಸರಿ ಎಂಬುದು ಶಕ್ತಿಯ ಸಂಕೇತ ಮತ್ತು ಅದು ಎದ್ದು ಕಾಣುವ ಬಣ್ಣ. ಅದರಿಂದಾಗಿ ಕಟ್ಟಡ ಸುಂದರವಾಗಿ ಕಾಣುತ್ತದೆಂದು ಈ ಬಣ್ಣ ಬಳಿದಿದ್ದೇವೆ. ನಮ್ಮ ವಿರುದ್ಧ ಮಾತನಾಡುವುದಕ್ಕೆ ವಿರೋಧ ಪಕ್ಷಗಳಿಗೆ ಯಾವ ವಿವಾದವೂ ಸಿಕ್ಕುತ್ತಿಲ್ಲ. ಆದ್ದರಿಂದ ಈ ವಿಷಯವನ್ನು ಸುದ್ದಿ ಮಾಡಲಾಗುತ್ತಿದೆ" ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಮೇಲೆ ಉತ್ತರ ಪ್ರದೇಶದ ಹಲವೆಡೆ ಕೇಸರಿ ಬಣ್ಣ ರಾರಾಜಿಸುತ್ತಿದೆ. ಹಲವು ಕಟ್ಟಡಗಳು, ಬಸ್ಸುಗಳು, ಬುಕ್ಲೆಟ್, ಪೋಸ್ಟರ್, ಕುರ್ಚಿಗಳೂ ಕೇಸರಿಯಾಗಿವೆ!