ಟರ್ಕಿಗೆ ತೆರಳುವ ಭಾರತೀಯರಿಗೆ 'ಬಹಳ ಎಚ್ಚರಿಕೆಯಿಂದ ಇರುವಂತೆ' ಸೂಚನೆ
ನವದೆಹಲಿ, ಅಕ್ಟೋಬರ್ 23: ಟರ್ಕಿ ದೇಶಕ್ಕೆ ಭೇಟಿ ನೀಡುವ ಭಾರತದ ನಾಗರಿಕರಿಗೆ 'ಬಹಳ ಎಚ್ಚರಿಕೆ ವಹಿಸುವಂತೆ' ಕೇಂದ್ರ ಸರ್ಕಾರ ಸೂಚಿಸಿದೆ. ಅಂಕಾರದಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದ್ದು, ಟರ್ಕಿಗೆ ಪ್ರಯಾಣಿಸುವವರು ವಿಚಾರಣೆ ನಡೆಸುತ್ತಿದ್ದಾರೆ. ಭಾರತೀಯರಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಟರ್ಕಿಗೆ ಪ್ರಯಾಣಿಸುವವರು ಬಹಳ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ
ಭಾರತದ ರಾಯಭಾರ ಹಾಗೂ ಇಸ್ತಾಂಬುಲ್ ನಲ್ಲಿ ಇರುವ ದೂತಾವಾಸ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದ್ದು, ನೆರವಿನ ಅಗತ್ಯ ಇರುವವರು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮದ ವಿರುದ್ಧ ಟರ್ಕಿ ದೇಶವು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹೇಳಿಕೆ ನೀಡಿತ್ತು. ಆ ನಂತರ ಭಾರತ ಹಾಗೂ ಟರ್ಕಿ ಮಧ್ಯೆ ಸಂಬಂಧ ಹಳಸಿತ್ತು.
ಕಾಶ್ಮೀರದ ಬಗ್ಗೆ ಟರ್ಕಿ ನೀಡಿದ್ದ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಭಾರತ, ವಿಷಾದ ವ್ಯಕ್ತಪಡಿಸಿತ್ತು. "ಯಾವುದೇ ಹೇಳಿಕೆ ನೀಡುವ ಮುನ್ನ ಕಾಶ್ಮೀರದ ವಾಸ್ತವ ಸ್ಥಿತಿ ಅರಿತು ಮಾತನಾಡಬೇಕು" ಎಂದು ಕೂಡ ಭಾರತ ಹೇಳಿತ್ತು.
ಸಿರಿಯಾದ ಈಶಾನ್ಯ ಭಾಗದಲ್ಲಿ ಟರ್ಕಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ಎಫ್ ಎಟಿಎಫ್ ವಿಚಾರದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ಸೂಚಿಸಿತ್ತು.