ಕೇಂದ್ರ ವಿಸ್ತಾ ಯೋಜನೆ ಹಣವನ್ನು ಸಂಕಷ್ಟದಲ್ಲಿರುವ ಜನರಿಗೆ ಬಳಸಿ; ಪ್ರಿಯಾಂಕಾ
ನವದೆಹಲಿ, ಮೇ 4: ಪ್ರಧಾನಮಂತ್ರಿ ಹೊಸ ನಿವಾಸ ನಿರ್ಮಾಣದ ಕೇಂದ್ರ ವಿಸ್ತಾ ಯೋಜನೆಯನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ದೇಶದ ಜನರು ಆಮ್ಲಜನಕ ಹಾಗೂ ಕೊರೊನಾ ಲಸಿಕೆ ಕೊರತೆಯಿಂದ ನರಳುತ್ತಿದ್ದಾರೆ. ಇಂಥ ಸಮಯದಲ್ಲಿ ದೇಶದ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿರುವ ಎಲ್ಲಾ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಜೀವ ಉಳಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಡಿಸೆಂಬರ್ 22ರ ಒಳಗೆ ಸೆಂಟ್ರಲ್ ವಿಸ್ತಾ ಯೋಜನೆಯಡಿ ಪ್ರಧಾನಿಯವರು ನೂತನ ಗೃಹ ನಿರ್ಮಾಣ ಕೆಲಸ ಪೂರ್ಣಗೊಳಿಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಧಾನಿಗೆ ಹೊಸ ನಿವಾಸ ನಿರ್ಮಾಣ ಬೇಕೇ?
ಈ ಕುರಿತು ಟ್ವೀಟ್ ಮಾಡಿರುವ ಅವರು, "ಹದಿಮೂರು ಕೋಟಿ ರೂಪಾಯಿ ಖರ್ಚಿನಲ್ಲಿ ಪ್ರಧಾನಿ ನೂತನ ಗೃಹ ನಿರ್ಮಿಸುವ ಬದಲು ಕೊರೊನಾ ಲಸಿಕೆ ಹಾಗೂ ಆಮ್ಲಜನಕಕ್ಕೆ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ಜನರ ಜೀವ ಉಳಿಸುವತ್ತ ಚಿಂತಿಸಬೇಕು" ಎಂದು ಹೇಳಿದ್ದಾರೆ.
ಇಂಥ ಖರ್ಚುಗಳು ಸರ್ಕಾರದ ಆದ್ಯತೆ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಕೇಂದ್ರ ವಿಸ್ತಾ ಯೋಜನೆಗೆ ಅಡಿಯಲ್ಲಿ ಪ್ರಧಾನಮಂತ್ರಿ ನಿವಾಸ ನಿರ್ಮಾಣಕ್ಕೆ ಅನುಮತಿ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.