ಕೊರೊನಾ ವೈರಸ್ನಿಂದ ಭಾರತಕ್ಕೆ ಭಾರಿ ಅಪಾಯದ ಎಚ್ಚರಿಕೆ
ನವದೆಹಲಿ, ಫೆಬ್ರವರಿ 28: ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಮತ್ತಷ್ಟು ತೀವ್ರವಾಗಿದೆ. ಕೊರೊನಾ ವೈರಸ್ ಮೂಲ ಕೇಂದ್ರವಾದ ಚೀನಾದಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರಕರಣ ಮತ್ತು ಸಾವು ವರದಿಯಾಗುತ್ತಿದ್ದರೂ, ಅದು ವ್ಯಾಪಿಸುತ್ತಿರುವ ವೇಗ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಚೀನಾದಿಂದ ಆಚೆಗೆ ಇರಾನ್, ದಕ್ಷಿಣ ಕೊರಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಪ್ರಕರಣಗಳು ಕಂಡುಬರುತ್ತಿರುವುದು ಆತಂಕ ಮೂಡಿಸಿದೆ.
ಚೀನಾ ನೆರೆಯಲ್ಲಿಯೇ ಭಾರತದಲ್ಲಿ ಇದುವರೆಗೂ ಮೂರು ಪ್ರಕರಣಗಳು ಮಾತ್ರ ಕಂಡುಬಂದಿದ್ದು, ಮೂವರೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೋಂಕು ಪೀಡಿತ ವುಹಾನ್ ನಗರದಿಂದ ಮತ್ತು ಜಪಾನ್ ಹಡಗಿನಲ್ಲಿ ಸಿಲುಕಿದ್ದ ಮತ್ತಷ್ಟು ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಇದುವರೆಗೂ ಕೊರೊನಾ ವೈರಸ್ನ ಯಾವುದೇ ತೀವ್ರತರ ಅಪಾಯವನ್ನು ಎದುರಿಸಿಲ್ಲ. ಆದರೆ ಜಾಗತಿಕಮಟ್ಟದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದು ಹಾಗೂ ಸರ್ಕಾರಗಳು ಅದನ್ನು ಎದುರಿಸಲು ಹೊಂದಿರುವ ಸಾಮರ್ಥ್ಯಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕದ ಗುಪ್ತಚರ ಸಂಸ್ಥೆಗಳು, ಈ ಮಾರಕ ವೈರಸ್ನ ಭೀಕರತೆಯನ್ನು ಎದುರಿಸಲು ಭಾರತ ಸಶಕ್ತವಾಗಿಲ್ಲ ಎಂಬ ಕಳವಳ ವ್ಯಕ್ತಪಡಿಸಿವೆ.
ಭಾರತಕ್ಕೆ ಸಾಮರ್ಥ್ಯ ಇಲ್ಲ
ಭಾರತದಲ್ಲಿ ಇರುವ ವೈದ್ಯಕೀಯ ಸೌಲಭ್ಯಗಳು ಮತ್ತು ಸಾಧನಗಳನ್ನು ಗಮನಿಸಿದಾಗ ಕೊರೊನಾ ವೈರಸ್ ಒಂದು ವೇಳೆ ವ್ಯಾಪಕವಾಗಿ ಹರಡಿದರೆ, ದೇಶದಲ್ಲಿನ ಜನಸಂಖ್ಯಾ ಸಾಂದ್ರತೆಯಲ್ಲಿ ಅದನ್ನು ನಿಭಾಯಿಸುವುದು ಅಸಾಧ್ಯ ಎನ್ನುವ ಮಟ್ಟಕ್ಕೆ ಆತಂಕಕಾರಿ ಪರಿಸ್ಥಿತಿ ಇದೆ. ಇಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಕೊರೊನಾ ಸಾಂಕ್ರಾಮಿಕವಾಗಿ ಕಾಣಿಸಿಕೊಂಡರೆ ಅದನ್ನು ತಡೆಯುವಷ್ಟು ವೈದ್ಯಕೀಯ ಸಾಮರ್ಥ್ಯ ಹಾಗೂ ಸಿದ್ಧತೆ ಇಲ್ಲ ಎಂದು ಮೂಲಗಳು ಹೇಳಿವೆ.
ವೀಸಾ ತಾತ್ಕಾಲಿಕ ರದ್ದು
ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರಜೆಗಳು ಭಾರತಕ್ಕೆ ಬರುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಎರಡೂ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿದ್ದು, ಚೀನಾದಂತೆಯೇ ವ್ಯಾಪಕವಾಗುವ ಭೀತಿ ಮೂಡಿಸಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಪ್ರಜೆಗಳ ವೀಸಾವನ್ನು ತಾತ್ಕಾಲಿಕವಾಗಿ ಭಾರತ ರದ್ದುಗೊಳಿಸಿದೆ.
ಕೊರೊನಾ ವೈರಸ್: ಚೀನಾ, ಜಪಾನ್ನಿಂದ ಭಾರತೀಯರು ವಾಪಸ್
ಭಾರತದಲ್ಲಿ ಸೋಂಕಿನ ಪ್ರಭಾವ ಕಡಿಮೆ
ಕೊರೊನಾ ವೈರಸ್ ಅತ್ಯಂತ ವ್ಯಾಪಕವಾಗಿ ಹರಡಿರುವುದು ಏಷ್ಯಾ ಖಂಡದಲ್ಲಿಯೇ ಆಗಿದ್ದರೂ, ಏಷ್ಯಾದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕೊರೊನಾಕ್ಕೆ ತುತ್ತಾಗಿರುವುದು ಭಾರತದಲ್ಲಿಯೇ. ಏಕೆಂದರೆ ಭಾರತವು ಚೀನಾದೊಂದಿಗೆ ನೇರ ಹಾಗೂ ಸಮೀಪದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳನ್ನು ಹೊಂದಿಲ್ಲ. ಈ ಕಾರಣದಿಂದ ಚೀನಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಚೀನಾಕ್ಕೆ ನಿರಂತರವಾಗಿ ಓಡಾಡುವವರ ಸಂಖ್ಯೆ ಕಡಿಮೆ ಇದೆ. ಇದು ಭಾರತದ ಆರ್ಥಿಕತೆಯ ಮೇಲೆಯೂ ಅಷ್ಟೊಂದು ತೀವ್ರತರ ಹೊಡೆತ ನೀಡಲು ಸಾಧ್ಯವಾಗಿಲ್ಲ ಎಂದು ಆರ್ಥಿಕ ತಜ್ಞ ರಾಬರ್ಟ್ ಸುಬ್ಬರಾಮನ್ ಹೇಳಿದ್ದಾರೆ.
ಭಾರತದ ಜಿಡಿಪಿಗೆ ಮಾರಕ
ಆದರೆ ಭಾರತದ ಆರ್ಥಿಕ ಪ್ರಗತಿಗೆ ಕೊರೊನಾ ಮಾರಕವಾಗಲಿದೆ ಎಂದು ಬ್ಲೂಮ್ಬರ್ಗ್ ಹೇಳಿದೆ. ಸತತ ಕುಸಿತ ಕಂಡಿದ್ದ ಭಾರತದ ಜಿಡಿಪಿಯು ಕಳೆದ ಏಳು ತ್ರೈಮಾಸಿಕ ಅವಧಿಗಳಲ್ಲಿ ಮೊದಲ ಬಾರಿಗೆ ಶೇ 4.7ಕ್ಕೆ ಬೆಳೆಯುವ ಮೂಲಕ ಕೊಂಚ ಚೇತರಿಕೆ ಕಂಡಿತ್ತು. ಈಗ ಕೊರೊನಾ ವೈರಸ್ ಕಾರಣದಿಂದ ಜಾಗತಿಕ ಆರ್ಥಿಕ ವಹಿವಾಟುಗಳಿಗೆ ಹಿನ್ನಡೆಯಾಗಿದೆ. 2020ರ ಮೊದಲ ಅರ್ಧದಲ್ಲಿ ಜಾಗತಿಕ ಆರ್ಥಿಕ ಅಭಿವೃದ್ಧಿ ಶೇ 2.5ರಷ್ಟು ಹಿನ್ನಡೆ ಅನುಭವಿಸಲಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಇರಾನ್ ಉಪಾಧ್ಯಕ್ಷರಿಗೂ ಕೊರೊನಾ: ಒಟ್ಟು 26 ಮಂದಿ ಸಾವು
ಮಂಗೋಲಿಯಾ ಅಧ್ಯಕ್ಷರ ತಪಾಸಣೆ
ಚೀನಾಕ್ಕೆ ಭೇಟಿ ನೀಡಿ ವಾಪಸ್ ಬಂದಿದ್ದ ಮಂಗೋಲಿಯಾದ ಅಧ್ಯಕ್ಷ ಬಟ್ಟುಲ್ಗಾ ಖಲ್ತಮಾ ಹಾಗೂ ಇತರೆ ಅಧಿಕಾರಿಗಳನ್ನು 14 ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಶುಕ್ರವಾರ 256 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2022ಕ್ಕೇರಿದೆ. ಇರಾನ್ನಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಅಲ್ಲಿನ ಉಪಾಧ್ಯಕ್ಷ ಮತ್ತು ಉಪ ಆರೋಗ್ಯ ಸಚಿವರಿಗೇ ಕೊರೊನಾ ಸೋಂಕು ತಗುಲಿದೆ.