ಅಫ್ಘಾನಿಸ್ತಾನದ ಬಗ್ಗೆ ಅಮೆರಿಕ, ಭಾರತದ್ದು ಒಂದೇ ಆಲೋಚನಾ ಧಾಟಿ; ಅಮೆರಿಕ
ನವದೆಹಲಿ, ಅಕ್ಟೋಬರ್ 7: ಭಾರತ ಸೇರಿದಂತೆ ದಕ್ಷಿಣ ಏಷ್ಯಾಗೆ ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಹರಡುವ ಸಾಧ್ಯತೆಯ ಕುರಿತ ಭಾರತದ ಕಾಳಜಿಯನ್ನು ವಾಷಿಂಗ್ಟನ್ ಶ್ಲಾಘಿಸುತ್ತದೆ ಎಂದು ಅಮೆರಿಕ ಉಪ ಕಾರ್ಯದರ್ಶಿ ವೆಂಡಿ ಶರ್ಮನ್ ಬುಧವಾರ ಹೇಳಿದ್ದಾರೆ.
ನವದೆಹಲಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಜೈಶಂಕರ್ ಅವರನ್ನು ಬುಧವಾರ ಭೇಟಿ ಮಾಡಿದ ನಂತರ ಶರ್ಮನ್ ಈ ಹೇಳಿಕೆ ನೀಡಿದ್ದಾರೆ.
ಅಫ್ಘಾನ್ ಬೆಳವಣಿಗೆಗಳು ಬಹಳ ಮಹತ್ವದ ಪರಿಣಾಮ ಬೀರಲಿವೆ; ಜೈಶಂಕರ್
'ಅಫ್ಘಾನಿಸ್ತಾನದ ವಿಷಯಕ್ಕೆ ಬಂದಾಗ ಅಮೆರಿಕ ಹಾಗೂ ಭಾರತದ ಆಲೋಚನಾ ಧಾಟಿ ಒಂದೇ ರೀತಿಯಲ್ಲಿದೆ' ಎಂದು ಶರ್ಮನ್ ಹೇಳಿದರು.
'ಭಾರತ, ಅಮೆರಿಕ ಎರಡೂ ಕಡೆಯಿಂದ ನಿರಂತರವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳಲಾಗುತ್ತದೆ. ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದೆ. ತಾಲಿಬಾನ್ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡಬೇಕು ಹಾಗೂ ಭಯೋತ್ಪಾದನೆಗೆ ತಾಣವಾಗಬಾರದು ಎಂಬ ಉದ್ದೇಶವನ್ನು ಎರಡೂ ದೇಶಗಳು ಹೊಂದಿವೆ' ಎಂದು ಹೇಳಿದ್ದಾರೆ.
ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಹಕಾರದ ಮಹತ್ವವನ್ನು ಒತ್ತಿಹೇಳಿದ ಶರ್ಮನ್, ಉಭಯ ದೇಶದ ಅಧಿಕಾರಿಗಳು ಅಕ್ಟೋಬರ್ 26-28ರ ನಡುವೆ ಈ ವಿಷಯದ ಕುರಿತು ಸಂವಾದಕ್ಕಾಗಿ ಮತ್ತೆ ಭೇಟಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲಿಬಾನ್ ಪರ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ!
ಅಫ್ಘಾನಿಸ್ತಾನದಲ್ಲಿ ಭಾರತದ ಭದ್ರತಾ ಹಿತಾಸಕ್ತಿ ಅಮೆರಿಕ ಆದ್ಯತೆಗಳ ಮುಂಚೂಣಿ ವಿಷಯವಾಗಿದೆ. ಈ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶೆರ್ಮನ್ ಹೇಳಿದರು. ಈ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಗಾ ಇಡುವುದು ನಮ್ಮ ಗುರಿಯಾಗಿದೆ ಎಂದರು.
ಕಳೆದ ವಾರ ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆ (US-India Strategic Partnership Forum -USISPF) ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದು, 2020ರಲ್ಲಿ ಅಮೆರಿಕ ತಾಲಿಬಾನ್ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಕುರಿತು ಉಲ್ಲೇಖಿಸಿದ್ದರು. ಈ ಕುರಿತು ಭಾರತವನ್ನು ದೂರವಿಡಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
'ಅಫ್ಘಾನಿಸ್ತಾನ ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಹೊಂದಿದೆಯೇ ಹಾಗೂ ತಾಲಿಬಾನ್, ಅಫ್ಘಾನ್ ನೆಲವನ್ನು ಇತರೆ ದೇಶ ಅಥವಾ ವಿಶ್ವದ ವಿರುದ್ಧ ಭಯೋತ್ಪಾದನೆಗೆ ಬಳಸಿಕೊಳ್ಳಬಹುದೇ ಎಂಬಿತ್ಯಾದಿ ವಿಷಯಗಳು ಭಾರತದ ಪ್ರಮುಖ ಕಾಳಜಿಯಾಗಿದೆ' ಎಂದು ಅವರು ಹೇಳಿದ್ದರು. 'ಅಫ್ಘಾನಿಸ್ತಾನದಲ್ಲಿ ಏನಾಯಿತೋ, ಏನೇನು ಬೆಳವಣಿಗೆ ನಡೆಯುತ್ತಿದೆಯೋ ಅದು ನಮ್ಮ ದೇಶಗಳ ಮೇಲೂ ಮಹತ್ವದ ಪರಿಣಾಮಗಳನ್ನು ಉಂಟು ಮಾಡಲಿದೆ' ಎಂದಿದ್ದರು.
ಅಮೆರಿಕ-ಅಫ್ಘನ್ನ ದೋಹಾ ಒಪ್ಪಂದದ ಕುರಿತು ಮಾತನಾಡಿದ್ದ ಅವರು, 'ನನ್ನ ಪ್ರಕಾರ ದೋಹಾದಲ್ಲಿ ಏನೇ ಒಪ್ಪಂದವಾಗಿದ್ದರೂ ಅದಕ್ಕೆ ವಿಶಾಲ ಅರ್ಥವಿದೆ. ಅದನ್ನು ಮೀರಿ ನಾವು ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಅಫ್ಘನ್ನಲ್ಲಿ ನೋಡಲು ಸಾಧ್ಯವಿದೆಯೇ? ಮಹಿಳೆಯರ, ಮಕ್ಕಳ, ಅಂಗವಿಕಲರ ಹಕ್ಕುಗಳನ್ನು ಗೌರವದಿಂದ ನೋಡಲು ಸಾಧ್ಯವಿದೆಯೇ?' ಎಂದು ಪ್ರಶ್ನಿಸಿದ್ದರು.
'ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳಲ್ಲಿ ಭಾರತ ಹಾಗೂ ಅಮೆರಿಕ ಒಂದೇ ನೆಲೆಯಲ್ಲಿ ಯೋಚಿಸುತ್ತಿವೆ. ಎರಡೂ ದೇಶಗಳ ಸ್ಥಿತಿ ಏಕಪ್ರಕಾರವಾಗಿದೆ. ಉದಾಹರಣೆಗೆ, ಅಫ್ಘಾನ್ ಅನ್ನು ತಾಲಿಬಾನ್ ಭಯೋತ್ಪಾದನೆಗೆ ಬಳಸಿಕೊಳ್ಳುವ ಸಾಧ್ಯತೆ ಸಂಬಂಧ ಎರಡೂ ದೇಶಗಳಲ್ಲಿ ಆತಂಕವಿದೆ' ಎಂದು ವಿವರಿಸಿದ್ದರು.
ಅಫ್ಘಾನಿಸ್ತಾನದಿಂದ ಅಮೆರಿಕ ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಅಫ್ಘನ್ ಆಡಳಿತಕ್ಕೆ ದೊಡ್ಡ ಸವಾಲು ಎದುರಾಗಿದೆ. ಅಲ್ಲಿಂದ ತಾಂತ್ರಿಕ ಹಾಗೂ ಆರ್ಥಿಕ ತಜ್ಞರ ವಲಸೆಯಾಗಿದೆ. ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಿ ಸ್ಥಿರತೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಹಾಗೂ ತಾಲಿಬಾನ್ ಪರಸ್ಪರ ವ್ಯವಹಾರ ಮಾರ್ಗವನ್ನು ಕಂಡುಕೊಳ್ಳುವುದು ಅವಶ್ಯಕವಾಗಿದೆ. ಕ್ವಾಡ್ ಸಭೆಯಲ್ಲಿ ಕೂಡ ಅಫ್ಘಾನಿಸ್ತಾನ ಬಿಕ್ಕಟ್ಟಿನ ವಿಷಯ ಚರ್ಚೆಯ ಕೇಂದ್ರಬಿಂದುವಾಗಿತ್ತು.