ಪೊಲೀಸ್ ಠಾಣೆಯಲ್ಲೇ ರೇಪ್; ನೇಣು ಹಾಕಿ ಹತ್ಯೆ
ಮೊರಾದಾಬಾದ್ (ಉ.ಪ್ರ), ಜೂನ್ 12: ಉತ್ತರ ಪ್ರದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ, ಹತ್ಯೆ ಪ್ರಕರಣಗಳು ಮರುಕಳಿಸುತ್ತಿವೆ. ಮುಲಾಯಂ ಕುಟುಂಬದ ಆಳ್ವಿಕೆಯಲ್ಲಿರುವ ಉತ್ತರ ಪ್ರದೇಶದಲ್ಲಿ ಯಾವುದೇ ಅಡೆತಡೆಯಿಲ್ಲದಂತೆ ಹೀನ ಕೃತ್ಯಗಳು ನಡೆದಿವೆ.
ಬದೌನ್ ನಲ್ಲಿ ಇಬ್ಬರು ದಲಿತ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದುಃಸ್ವಪ್ನವಾಗಿ ಕಾಡುತ್ತಿರುವಾಗಲೇ ಮತ್ತೆರಡು ಪ್ರಕರಣಗಳು ನಡೆದಿವೆ. ರಾಜ್ಯದ ಮೊರಾದಾಬಾದ್ ಜಿಲ್ಲೆಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪತಿಯ ರಕ್ಷಣೆಗಾಗಿ ಠಾಣೆಗೆ ಬಂದ ಪತ್ನಿಯನ್ನೇ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯಿಂದ 160 ಕಿಮೀ ದೂರದಲ್ಲಿರುವ ಹಮೀರ್ ಪುರದಲ್ಲಿ ನಡೆದಿದೆ.
ಸೋದರ
ಮಾವನಿಂದಲೇ
ಕುಕೃತ್ಯ:
ಮೂರು ಜನ ದುಷ್ಕರ್ಮಿಗಳ ತಂಡ ಈ ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದರು. ಅತ್ಯಾಚಾರ ನಡೆದ ಬಳಿಕ ಕಾಮುಕರು ನಿರ್ಜನ ಪ್ರದೇಶವೊಂದರಲ್ಲಿ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಹಮೀರ್ ಪುರ ಜಿಲ್ಲಾ ವರದಿ: ಹಮೀರ್ ಪುರ ಜಿಲ್ಲೆಯ ಠಾಣೆಯೊಂದರಲ್ಲಿ ಬಂಧಿಸಿದ್ದ ಪತಿಯನ್ನು ಬಿಡುಗಡೆ ಮಾಡಬೇಕೆಂದು ಠಾಣೆಗೆ ಬಂದಿದ್ದ ಮಹಿಳೆಯ ಮೇಲೆ ಕಾಮುಕ ಎಸ್ಐ ಅತ್ಯಾಚಾರ ಎಸಗಿದ್ದಾನೆ. ಈತನಿಗೆ ನಾಲ್ವರು ಪೇದೆಗಳೂ ಸಾಥ್ ನೀಡಿದ್ದಾರೆ ಎಂದು ದೂರಲಾಗಿದೆ. (ಮತ್ತೊಂದು ರೇಪ್, ಯುವತಿಯ ತಾಯಿ ಮೇಲೆ ಹಲ್ಲೆ )
'ನಾನು ಠಾಣೆಗೆ ಬಂದ ಬಳಿಕ ನನ್ನನ್ನು ಸಬ್ ಇನ್ಸ್ ಪೆಕ್ಟರ್ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸೋಮವಾರ ಬೆಳಗ್ಗೆ 11 ಗಂಟೆಯಲ್ಲಿ ಪೊಲೀಸರನ್ನು ಹೊರಗೆ ಕಳಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ವಿರುದ್ಧ ದೂರು ದಾಖಲಿಸಲಾಗಿದ್ದು, ಬುಧವಾರ ಬಂಧಿಸಲಾಗಿದೆ. ಪೇದೆಗಳು ಪರಾರಿಯಾಗಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. (ಬರೇಲಿ ಯುವತಿಯ ರೇಪ್, ಆ್ಯಸಿಡ್ ಕುಡಿಸಿ ಹತ್ಯೆ)