ಗರಿಗೆದರಿದ ಸಾಧು ಚಿನ್ನದ ಕನಸು: ಉತ್ಖನನ ಆರಂಭ
ದುಂಡಿಯಾ ಖೇಡಾ, ಅ.17- ವಾರದ ಹಿಂದೆ ಸಾಧುವೊಬ್ಬರು ಹೇಳಿದರೆಂದು ಒಂದು ಸಾವಿರ ಟನ್ ಚಿನ್ನ ಅಗೆದು ತೆಗೆಯಲು ಮುಂದಾಗಿರುವ ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಅದೇ ಸಾಧು ಮತ್ತೊಂದು ಷಾಕ್ ನೀಡಿದ್ದಾರೆ.
'ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ದುಂಡಿಯಾ ಖೇಡಾ ಗ್ರಾಮದಲ್ಲಿ 19ನೇ ಶತಮಾನಕ್ಕೆ ಸೇರಿದ ಬರೋಬ್ಬರಿ 1,000 ಟನ್ ಚಿನ್ನದ ನಿಧಿ ಭೂಮಿಯಲ್ಲಿ ಹುದುಗಿದೆ ಎಂದು ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಸಾಧು ಶೋಭನ ಸರಕಾರ್ ಅವರು ಇದೀಗ ಗಂಗಾ ನದಿಯ ತಟದಲ್ಲಿಯೂ 2,500 ಟನ್ ಚಿನ್ನದ ನಿಧಿ ಇದೆ. ಅಷ್ಟೇ ಅಲ್ಲ. ಇಂತಹ ಜಾಗಗಳು ನಮ್ಮ ದೇಶದಲ್ಲಿ ಇನ್ನೂ ಹಲವಾರು ಕಡೆ ಇವೆ. ಅದನ್ನೆಲ್ಲಾ ಬಗೆದು ತೆಗೆದರೆ ಭಾರತೀಯರ ಬದುಕು ಬಂಗಾರವಾದೀತು ಎಂದೂ ಆಸೆ ಹುಟ್ಟಿಸಿದ್ದಾರೆ.
ತಿರುವನಂತಪುರದ ಅನಂತ ದೇಗುಲದ ನಿಧಿಯನ್ನು ಕಂಡಾರೆ ಕಂಡು ಆನಂದತುಂದಲಿತರಾದ ಭಾರತೀಯರು ಇದೀಗ ಸಾಧು ಜತೆ ಸೇರಿ ಬರೋಬ್ಬರಿ 7.50 ಲಕ್ಷ ಕೋಟಿ ರೂ. ಚಿನ್ನದಂತಹ ಕನಸು ಕಾಣತೊಡಗಿದ್ದಾರೆ. ಈ ಮಧ್ಯೆ, ಉನ್ನಾವೊದಲ್ಲಿ ಭೂಮಿ ಕೊರೆಯಲು ಸಜ್ಜಾಗಿರುವ Archaeological Survey of Indiaಗೆ ಚಿನ್ನದ ಹೊಳಹು ಕಂಡಿದೆಯಂತೆ! ಹಾಗಾಗಿ ಉತ್ಖನನ ಕಾರ್ಯ ಭರದಿಂದ ಸಾಗಿದೆ.
ಶೋಭನ್ ಸರ್ಕಾರ್ ಅವರು ಕಂಡಿರುವ ಹೊಸ ಕನಸಿನ ಪ್ರಕಾರ ಕಾನ್ಪುರದಿಂದ 80 ಕಿಮೀ ದೂರದಲ್ಲಿರುವ ಫತೇಪುರ ಸಮೀಪದ ಅದಂಪುರದಲ್ಲಿ ಹಲವು ದೇಗುಲಗಳಿವೆ. ಈ ಪೈಕಿ ಗಂಗಾ ನದಿಯ ತಟದಲ್ಲಿರುವ ಒಂದು ದೇಗುಲದ ಬಳಿ 2,500 ಟನ್ಗಳಷ್ಟು ಚಿನ್ನ ಇದೆಯಂತೆ. ಈ ನಿಧಿಯ ವಿಷೇಷವೆಂದರೆ ಇದು ಹೆಚ್ಚಿನ ಆಳದಲ್ಲಿ ಇಲ್ಲವಂತೆ. ಉನ್ನಾವೊದಲ್ಲಿ ಸುಮಾರು 20 ಮೀಟರ್ ಆಳದಲ್ಲಿ ಚಿನ್ನದ ನಿಧಿ ಇದ್ದರೆ, ಇಲ್ಲಿ ಕೆಲವೇ ಮೀಟರ್ಗಳ ಅಂತರದಲ್ಲಿ ಚಿನ್ನ ಸಿಗಲಿದೆ ಎಂಬ ಮಾಹಿತಿ ಶೋಭನ್ ಸರ್ಕಾರ್ ಗೆ ಸಿಕ್ಕಿದೆಯಂತೆ.
ಹೀಗಾಗಿ ಅವರು ತಮ್ಮ ದೂತ ಸ್ವಾಮಿ ಓಂ ಎಂಬುವವರನ್ನು ಜಿಲ್ಲಾಧಿಕಾರಿ ಅಭಯ್ ಕುಮಾರ್ ಅವರ ಬಳಿಗೆ ಕಳುಹಿಸಿದ್ದು, ಅವರಿಗೆ ಮಾಹಿತಿಯನ್ನೂ ರವಾನಿಸಿದ್ದಾರೆ.