ಸಾಧುಗೆ ಚಿನ್ನದ ಕನಸು: ಕೇಂದ್ರದಿಂದ ಕೋಟೆ ಉತ್ಖನನ
'ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ದುಂಡಿಯಾ ಖೇಡಾ ಗ್ರಾಮದ ಶೋಭನ ಸರಕಾರ್ ಎಂಬ ಸಾಧುವೊಬ್ಬರು 19ನೇ ಶತಮಾನಕ್ಕೆ ಸೇರಿದ ಬರೋಬ್ಬರಿ 1,000 ಟನ್ ಚಿನ್ನದ ನಿಧಿ ಭೂಮಿಯಲ್ಲಿ ಹುದುಗಿದೆ. ಈ ಬಗ್ಗೆ ನನಗೆ ಕನಸು ಬಿದ್ದಿದೆ' ಎಂದು ತಮ್ಮ ಕನಸನ್ನು ನನಸು ಮಾಡುವಂತೆ ಸ್ಥಳೀಯ ಆಡಳಿತದಿಂದ ಹಿಡಿದು ರಾಜ್ಯ ಸರಕಾರದ ಮಾರ್ಗವಾಗಿ ಕೇಂದ್ರ ಸರಕಾರಕ್ಕೂ ಮನವಿ ಮಾಡಿಕೊಂಡಿದ್ದರು.
ಅದು ಕೇಂದ್ರ ಸರಕಾರದ ಹಿರಿಯ ಸಚಿವರೊಬ್ಬರ ಕಿವಿಗೆ ಬಿದ್ದಿದ್ದೇ ತಡ. ಅವರು ಮುಂದಿನ ಕಾರ್ಯಾಚರಣೆ ಕೈಗೊಳ್ಳುವಂತೆ Archaeological Survey of Indiaಗೆ ಸೂಚಿಸಿದೆ.
ಅಂದಹಾಗೆ ಈ ನಿಧಿ ಯಾರಿಗೆ ಸೇರಿದ್ದು? ಏನಿದರ ಕಥೆ ಎಂದು ವಿಚಾರಿಸಿದರೆ ಬ್ರಿಟೀಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 1857ರಲ್ಲಿ ಹುತಾತ್ಮರಾದ ರಾಜಾ ರಾವ್ ರಾಮಬಕ್ಸ್ ಸಿಂಗ್ ಕಣ್ಣಿನ ಮುಂದೆ ಬರುತ್ತಾರೆ. ರಾಮಬಕ್ಸ್ ಸಿಂಗ್ ಅವರಿಗೆ ಸೇರಿದ ಕೋಟೆ ಪ್ರದೇಶವು ದುಂಡಿಯಾ ಖೇಡಾ ಗ್ರಾಮದಲ್ಲಿದೆ. ಈ ಸ್ಥಳದಲ್ಲಿ ಉತ್ಖನನ ಮಾಡಿದರೆ ಅಷ್ಟೂ ಚಿನ್ನ ಸಿಗುತ್ತದೆ ಎಂದು ಸ್ಥಳೀಯವಾಗಿ ಪ್ರಭಾವಿಯಾಗಿರುವ ಸಾಧು ಶೋಭನ ಸರಕಾರ್ ಕನಸು ಕಂಡಿದ್ದಾರೆ.
ಮೊದ ಮೊದಲು ಇದೊಂದು ದೊಡ್ಡ ಜೋಕ್ ಎಂದು ಭಾವಿಸಿದ ಜನ ಗಂಭಿರವಾಗಿ ಪರಿಗಣಿಸಲಿಲ್ಲ. ಆದರೆ ಇತ್ತೀಚೆಗೆ ಕೇಂದ್ರ ಸರಕಾರವು ಆಗರ್ಭ ಶ್ರೀಮಂತ ದೇವಾಲಯಗಳ ಮೇಲೆ ಕಣ್ಣು ಹಾಕಿ, ಅಲ್ಲಿರುವ ಚಿನ್ನವನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂಬ ಚಿಂತನೆ ನಡೆಸಿದ್ದೇ ತಡ ಸಾಧು ಶೋಭನ ಸರಕಾರ್ ಅವರು ತಮ್ಮ ಕನಸನ್ನು ನೇರವಾಗಿ ಕೇಂದ್ರದ ಜತೆ ಹಂಚಿಕೊಂಡಿದ್ದಾರೆ.
ಇದು ಕೇಂದ್ರ ಸಚಿವ ಚರಣದಾಸ್ ಮೊಹಂತ ಅವರ ಕುತೂಹಲ ಕೆರಳಿಸಿದೆ. ಅವರು ತಕ್ಷಣ ಸಾಧು ಶೋಭನ ಸರಕಾರ್ ಅವರನ್ನು ಭೇಟಿ ಮಾಡಿ, ಅವರು ತೋರಿಸಿದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಚಿವ ಚರಣದಾಸ್ ಮೊಹಂತಗೆ ಸಾಧು ಮಾತಿನ ಮೇಲೆ ನಂಬಿಕೆ ಬಂದು ತಕ್ಷಣ ಉತ್ಖನನ ಕೈಗೆತ್ತಿಕೊಳ್ಳಿ ಎಂದು ASIಗೆ ಆದೇಶಿಸಿದ್ದಾರೆ.
ಕೃಷಿ ಮತ್ತು ಆಹಾರ ಸಂಸ್ಕರಣೆ ಇಲಾಖೆಯ ರಾಜ್ಯ ಸಚಿವರಾದ ಛತ್ತೀಸಗಢದ ಸಚಿವ ಚರಣದಾಸ್ ಮೊಹಂತ ಅವರು ಸೆ. 22 ಮತ್ತು ಅ. 7 ರಂದು ಹುತಾತ್ಮರಾದ ರಾಜಾ ರಾವ್ ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಂದಹಾಗೆ, ಅಕ್ಟೋಬರ್ 17ರಿಂದ ಉತ್ಖನನ ಕಾರ್ಯ ಆರಂಭಕ್ಕೆ ಮಹೂರ್ತ ನಿಗದಿಪಡಿಸಲಾಗಿದೆ.