'ಪ್ರಸಾದ' ಹೆಂಗಿತ್ತು?- ಕಪಿಲ್ ಸಿಬಲ್ಗೆ ಬಿಜೆಪಿ ಮುಖಂಡ ಕುಟುಕಿದ್ದು ಯಾಕೆ?
ನವದೆಹಲಿ, ಮೇ 25: ರಾಜಕೀಯ ನಿಂತ ನೀರಲ್ಲ. ರಾಜಕೀಯದಲ್ಲಿ ಅಧಿಕಾರವಾಗಲೀ, ಸಿದ್ಧಾಂತವಾಗಲೀ, ಮೈತ್ರಿಯಾಗಲೀ, ವೈರತ್ವವಾಗಲೀ ಯಾವುದೂ ಶಾಶ್ವತ ಅಲ್ಲ ಎಂಬುದು ಕಾಲಕಾಲಕ್ಕೆ ಸಾಬೀತು ಮಾಡುವ ಬೆಳವಣಿಗೆಗಳು ಆಗುತ್ತಿರುತ್ತವೆ. ಕಾಂಗ್ರೆಸ್ನ ಕಟ್ಟಾಳುವಾಗಿದ್ದ ಕಪಿಲ್ ಸಿಬಲ್ ಈಗ ಪಕ್ಷಕ್ಕೆ ತಿಲಾಂಜಲಿ ಹೇಳಿ ಸಮಾಜವಾದಿ ಪಕ್ಷದ ಬೆಂಬಲದಲ್ಲಿ ರಾಜ್ಯಸಭೆ ಪ್ರವೇಶಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಜಿತಿನ್ ಪ್ರಸಾದ ಕುತೂಹಲಕಾರಿ ಎನಿಸುವ ಟ್ವೀಟ್ ಮಾಡಿದ್ದಾರೆ. "ಪ್ರಸಾದ ಹೇಗಿದೆ ಮಿಸ್ಟರ್ ಸಿಬಲ್" ಎಂದು ಮುಗುಳ್ನಗೆಯ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ.
'ಜನ ಗಣ ಮನ'ಕ್ಕಿರುವ ಮಾನ್ಯತೆ ವಂದೇ ಮಾತರಂಗೂ ಸಿಗಲಿ: ಪಿಐಎಲ್ ಸಲ್ಲಿಕೆ
ಕಪಿಲ್ ಸಿಬಲ್ ಸರಿಯಾಗಿ ಒಂದು ವರ್ಷದ ಹಿಂದೆ ಜಿತಿನ್ ಪ್ರಸಾದರನ್ನು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಲು ಜಿತಿನ್ಗೆ ಇದು ಸರಿಯಾದ ಸಂದರ್ಭವಾಗಿತ್ತು.
How’s the “Prasad” Mr. Sibal ! 😊#Rajyasabha@KapilSibal https://t.co/lb9cCJgWSB
— Jitin Prasada जितिन प्रसाद (@JitinPrasada) May 25, 2022
ಕಾಂಗ್ರೆಸ್ನಲ್ಲಿದ್ದ ಜಿತಿನ್ ಪ್ರಸಾದ ಕಳೆದ ವರ್ಷದ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದರು. ಆಗ 48 ವರ್ಷದ ಜಿತಿನ್ ಪ್ರಸಾದ ಉ.ಪ್ರ.ದಲ್ಲಿ ಕಾಂಗ್ರೆಸ್ ಪಾಲಿಗೆ ಬ್ರಾಹ್ಮಣ ಮುಖವಾಗಿದ್ದವರು. ರಾಹುಲ್ ಗಾಂಧಿಯ ಆಪ್ತರೂ ಆಗಿದ್ದವರು. ವಿಧಾನಸಭೆಗೆ ಮುನ್ನ ಅವರು ಬಿಜೆಪಿ ಸೇರಿದ್ದು, ಮೊದಲೇ ದುರ್ಬಲವಾಗಿದ್ದ ಕಾಂಗ್ರೆಸ್ನ ಉತ್ಸಾಹವನ್ನು ಇನ್ನಷ್ಟು ಕುಗ್ಗಿಸಿತ್ತು. ಆಗ ಜಿತಿನ್ ಬಿಜೆಪಿ ಸೇರ್ಪಡೆಯನ್ನು ಕಪಿಲ್ ಸಿಬಲ್ ಲೇವಡಿ ಮಾಡಿದ್ದರು.
"ಜಿತಿನ್ ಪ್ರಸಾದ ಬಿಜೆಪಿ ಸೇರಿದ್ದಾರೆ. ಅವರು ಬಿಜೆಪಿಯಿಂದ 'ಪ್ರಸಾದ' ಪಡೆಯುತ್ತಾರಾ ಅಥವಾ ಯುಪಿ ಚುನಾವಣೆಯಲ್ಲಿ ಬಿಜೆಪಿ ಗಾಳಕ್ಕೆ ಬಿದ್ದ 'ಮಿಕ' ಮಾತ್ರವಾ? ಇಂಥ ವ್ಯವಹಾರದಲ್ಲಿ ಸಿದ್ಧಾಂತ ಮುಖ್ಯ ಅಲ್ಲದಿದ್ದರೆ ಪಕ್ಷಾಂತರ ಬಹಳ ಸುಲಭ" ಎಂದು ಕಪಿಲ್ ಸಿಬಲ್ ಕಳೆದ ವರ್ಷದ ಟ್ವೀಟ್ನಲ್ಲಿ ವ್ಯಂಗ್ಯ ಮಾಡಿದ್ದರು.
Jitin Prasada
— Kapil Sibal (@KapilSibal) June 10, 2021
Joins BJP
The question is will he get “ prasada “ from BJP or is he just a ‘catch’ for UP elections ?
In such deals if ‘ideology’ doesn’t matter changeover is easy
ಆಗ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷದ ಬಂಡಾಯಗಾರರ ಸಾಲಿನಲ್ಲಿ ಗುರುತಾಗಿದ್ದರು. ಜಿತಿನ್ ಪ್ರಸಾದ ಬಿಜೆಪಿಗೆ ಹೋದ ಬಳಿಕ ಚುನಾವಣೆಯಲ್ಲಿ ಗೆದ್ದು ಈಗ ಯೋಗಿ ಆದಿತ್ಯನಾಥ ನೇತೃತ್ವದ ಸರಕಾರದಲ್ಲಿ ಮಂತ್ರಿಯೂ ಆಗಿದ್ದಾರೆ.
ಇತ್ತ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನಗೊಂಡು ಇದೀಗ ಪಕ್ಷ ತೊರೆದಿದ್ದಾರೆ. ಮೇ 16ರಂದೇ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಸಿಬಲ್ ಇದೀಗ ಸಮಾಜವಾದಿ ಪಕ್ಷದ ಬೆಂಬಲ ಪಡೆದು ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
"ನಾನು ಹಿಂದೆ ಕಾಂಗ್ರೆಸ್ ನಾಯಕನಾಗಿದ್ದೆ, ಈಗಿಲ್ಲ. ಮೇ 16ರಂದೇ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ. ಅಖಿಲೇಶ್ ಯಾದವ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. 2024ರ ಚುನಾವಣೆಗೆ ಹಲವು ಜನರು ಒಗ್ಗಟ್ಟಾಗಿ ಬರುತ್ತಿದ್ದಾರೆ. ಕೇಂದ್ರ ಸರಕಾರದ ಕೊರತೆಗಳನ್ನು ನಾವು ಒರೆಗೆ ಹಚ್ಚುತ್ತೇವೆ" ಎಂದು ಸಿಬಲ್ ಹೇಳಿದ್ದಾರೆ.
ಕಳೆದ ವರ್ಷ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೇರಿ ಹಲವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಈ ವರ್ಷ ಬಹಳಷ್ಟು ರಾಜಕೀಯ ನಾಯಕರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಹಾರ್ದಿಕ್ ಪಟೇಲ್, ಮಾಜಿ ಕೇಂದ್ರ ಸಚಿವ ಅಶ್ವನಿಕುಮಾರ್, ಮತ್ತೊಬ್ಬ ಸಚಿವ ಆರ್ಪಿಎನ್ ಸಿಂಗ್, ಪಂಜಾಬ್ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಸುನೀಲ್ ಜಾಖರ್ ಮೊದಲಾದವರು ಕಾಂಗ್ರೆಸ್ ತೊರೆದು ಬೇರೆಡೆಗೆ ವಲಸೆ ಹೋಗಿದ್ದಾರೆ.
(ಒನ್ಇಂಡಿಯಾ ಸುದ್ದಿ)