ಸಾಕಿದ ಗಿಳಿಗೆ ಸಾಂಪ್ರದಾಯಿಕ ಅಂತ್ಯಸಂಸ್ಕಾರ
ಅಮ್ರೋಹ, ಮಾರ್ಚ್ 12: ತಾನು ಸಾಕಿದ್ದ ಗಿಳಿ, ಮೃತವಾದಾಗ ಸಾಂಪ್ರದಾಯಿಕ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿ, ಅದಕ್ಕೆ ಮೋಕ್ಷ ಭಾಗ್ಯ ಕರುಣಿಸಿದ ವ್ಯಕ್ತಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹನ ಹಸನ್ಪುರ ಎಂಬಲ್ಲಿಯ ಪಂಕಜ್ ಕುಮಾರ್ ಮಿತ್ತಲ್ ಎಂಬ ಶಿಕ್ಷಕರು ಐದು ವರ್ಷದ ಹಿಂದೆ ಒಂದು ಗಿಳಿಯನ್ನು ದತ್ತುಪಡೆದಿದ್ದರು. ಕಾಲು ಗಾಯವಾಗಿ ಹಾರಲು ಬಾರದ ಆ ಗಿಳಿಯನ್ನು ಮನೆಗೆ ತಂದಾಗಿನಿಂದಲೂ ತಮ್ಮ ಮಗನಿಗಿಂತ ಹೆಚ್ಚು ಪ್ರೀತಿಯಿಂದ ಅದನ್ನು ನೋಡಿಕೊಳ್ಳುತ್ತಿದ್ದರು. ಮಾ.5 ರಂದು ಗಿಳಿ ಮೃತವಾಗಿತ್ತು.
ನಂತರ ಗಂಗಾ ತಟಕ್ಕೆ ತೆರಳಿ, ಹಿಂದು ಸಂಪ್ರದಾಯದಂತೆ ಅದರ ಶವ ಸಂಸ್ಕಾರ ಮಾಡಿದ್ದಾರೆ. ಮನೆಯವರೆಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಈ ಗಿಳಿಯ ಅಗಲಿಕೆಯಿಂದ ನೊಂದುಕೊಂಡ ಕುಟುಂಬಸ್ಥರು, ಅಂತ್ಯಸಂಸ್ಕಾರ ಮಾತ್ರವಲ್ಲದೆ, ಗಿಳಿಯ ಶ್ರದ್ಧಾಂಜಲಿ ಸಭೆಯನ್ನೂ ಏರ್ಪಡಿಸಿದ್ದಾರಂತೆ!
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
'ನಾನು ಈ ಗಿಳಿಯನ್ನು ನನ್ನ ಮಗನಿಗಿಂತ ಹೆಚ್ಚು ಪ್ರೀತಿಸುತ್ತಿದ್ದೆ. ಅದರ ಅಗಲಿಕೆಯಿಂದ ನಮ್ಮೆಲ್ಲರಿಗೂ ನೋವಾಗಿದೆ. ಅದನ್ನು ನಮ್ಮ ಕುಟುಂಬದ ಒಬ್ಬ ಸದಸ್ಯ ಎಂದು ನೋಡುತ್ತಿದ್ದರಿಂದ, ಅದರ ಅಂತ್ಯ ಸಂಸ್ಕಾರವನ್ನು ವಿಧಿಬದ್ಧವಾಗಿ ಮಾಡಿದ್ದೇವೆ' ಎಂದು ಮಿತ್ತಲ್ ಹೇಳಿದ್ದಾರೆ.