ಯುಪಿ ಪೊಲೀಸರಿಗೆ ಕೋಳಿ ಹಿಡಿಯುವ ಕಾಯಕ!
ಲಖ್ನೌ, ಜೂ. 29: ಉತ್ತರ ಪ್ರದೇಶ ಪೊಲೀಸರಿಗೆ ಕಳ್ಳರನ್ನು ಹಿಡಿಯುವುದಕ್ಕಿಂತ, ಕಳುವಾದ ಪ್ರಾಣಿಗಳನ್ನು ಹುಡಿಕುವುದರಲ್ಲೇ ಡ್ಯೂಟಿ ಮುಗಿದು ಹೋಗುತ್ತಿದೆ. ಹಿಂದೊಮ್ಮೆ ಸಚಿವ ಅಜಂ ಖಾನ್ ಅವರ ಕಳುವಾದ ಎಮ್ಮೆಗಳನ್ನು ಪತ್ತೆಹಚ್ಚಿ ಮೆಚ್ಚುಗೆ ಗಳಿಸಿಕೊಂಡಿದ್ದ ಪೊಲೀಸರಿಗೀಗ ಕೋಳಿ ಹಿಡಿಯುವ ಕಾಯಕ!
ಕಳುವಾದ ಕೋಳಿಗಳನ್ನು ತಕ್ಷಣ ಪತ್ತೆ ಹಚ್ಚುವಂತೆ ಖುದ್ದು ರಾಜ್ಯಪಾಲರೇ ಆದೇಶ ನೀಡಿದ್ದಾರೆ. ರಾಜ್ಯಪಾಲ ರಾಮ್ ನಾಯಕ್ ನೀಡಿರುವ ಆದೇಶ ಪೊಲೀಸರು ಟೋಪಿ ತೆಗೆದು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕೇವಲ ಕೋಳಿ ಪತ್ತೆ ಹಚ್ಚಿದರೆ ಸಾಲದು ಕೋಳಿ ಕಳ್ಳರನ್ನು ಹಿಡಿಯಬೇಕು ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಿಳಿಸಿದ್ದಾರೆ.[ಪೊಲೀಸರ ನಿದ್ದೆಗೆಡಿಸಿದ ಎಮ್ಮೆಗೆ ಡಿಎನ್ ಎ ಟೆಸ್ಟ್!]
ರಾಂಪುರ ನಿವಾಸಿಯಾದ ಫರ್ ಉಲ್ಲಾ ಖಾನ್ ಎಂಬುವರ ಮನೆಯಿಂದ ಕಳೆದ ಮಾರ್ಚ್ನಲ್ಲಿ ನೂರಾರು ಕೋಳಿಗಳನ್ನುಅಪಹರಿಸಲಾಗಿತ್ತು. ಖಾನ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೊಂದು ಕೋಳಿ ದೂರು ಎಂದು ಪೊಲೀಸರು ಚಿಕನ್ ತಿಂದು ಗಡದ್ದಾಗಿ ಮಲಗಿದ್ದರು. ಪೊಲೀಸರ ನಿದ್ರೆಗೆ ಬೇಸತ್ತ ಖಾನ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅದರ ಪರಿಣಾಮವೇ ಗವರ್ನರ್ ಕೋಳಿ ಹುಡುಕಾಟ ಆದೇಶ.[ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]
24 ಗಂಟೆಗಳಲ್ಲಿ ಸಚಿವರ ಎಮ್ಮೆ ಹುಡುಕಿದ ಪೊಲೀಸರಿಗೆ ಕೋಳಿ ಹುಡುಕುವುದು ಯಾವ ಲೆಕ್ಕ ಎಂದು ಜನ ಭಾವಿಸಬಹುದು. ಆದರೆ ಕೋಳಿಗಳು ಕಳೆದು ಎರಡು ತಿಂಗಳೇ ಆಗಿದೆ. ಅವು ಯಾರ ಹೊಟ್ಟೆ ಸೇರಿದೆಯೋ ಎಂದು ಪೊಲೀಸರು ಗುಸುಗುಸು ಮಾತಾಡುಕೊಂಡಿದ್ದು ರಾಜ್ಯಪಾಲರ ಕಿವಿಗೆ ಬಿದ್ದಿಲ್ಲ!