ಕಾಶಿ ಗಂಗಾ ತಟದಲ್ಲಿ ಶವಸಂಸ್ಕಾರ: ಉತ್ತರಪ್ರದೇಶ ಸರಕಾರದ ಹೊಸ ಆದೇಶ
ಲಕ್ನೋ, ಜೂ 2: ಗಂಗಾನದಿಯಲ್ಲಿ ಶವಸಂಸ್ಕಾರ ನಡೆಸಿದರೆ, ಮೃತರಿಗೆ ಸದ್ಗತಿ ಲಭಿಸಿ ನೇರ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವುದು ಹಿಂದೂಗಳ ನಂಬಿಕೆ. ಹಾಗಾಗಿ, ಗಂಗಾನದಿಯ ವಿವಿಧ ಘಾಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.
ಈಗ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ, ಗಂಗಾನದಿಯ ತಟದಲ್ಲಿ ಶವಸಂಸ್ಕಾರ ನಡೆಸಲು ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ವಾರಣಾಸಿಯ ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕಾ ಘಾಟ್ ಗಳಲ್ಲಿ ಹೊಸ ನಿಯಮ ಜಾರಿಗೊಳಿಸಲಾಗಿದೆ.
2020 ರ ಹೊತ್ತಿಗೂ ಗಂಗೆಗಿಲ್ಲವೇ ಸ್ವಚ್ಛತೆಯ ಭಾಗ್ಯ?!
ದೇಶದ ವಿವಿಧ ರಾಜ್ಯಗಳಿಂದ ಈ ಎರಡು ಘಾಟುಗಳಲ್ಲಿ ಶವಸಂಸ್ಕಾರ ನಡೆಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ, ಮೃತರ ಗುರುತು ಪತ್ತೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ. ಇದು, ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಹೀಗಾಗಿ, ಶವಸಂಸ್ಕಾರ ನಡೆಸಲು ಬರುವ ಮೃತನ ಸಂಬಂಧಿಕರು, ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್ ನೀಡುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಹೊಸ ನಿಯಮವನ್ನು ಸಾರ್ವಜನಿಕರಿಗೆ ಜಾಹೀರಾತಿನ ಮೂಲಕ ತಿಳಿಸುವ ಕೆಲಸವನ್ನು ಜಿಲ್ಲಾಡಳಿತ ಈಗಾಗಲೇ ಮಾಡಿದೆ.
ಹುಷಾರ್ ಗಂಗಾ ನದಿಯಲ್ಲಿ ತೊಟ್ಟು ಕಸ ಹಾಕಿದ್ರೆ ಬೀಳುತ್ತೆ ಭಾರೀ ದಂಡ!
ಇದರ ಜೊತೆಗೆ, ಶವಸಾಗಣೆಗೆ ಮೃತನ ಸಂಬಂಧಿಕರು ಮೋಟರ್ ಬೋಟ್ ಸೌಲಭ್ಯ ಪಡೆಯಬೇಕಾದರೆ, ಗುರುತಿನ ಚೀಟಿಯೊಂದಿಗೆ ಬರುವುದನ್ನೂ ಕಡ್ಡಾಯಗೊಳಿಸಲಾಗಿದೆ. ಪ್ರಮುಖವಾಗಿ, ಉತ್ತರಪ್ರದೇಶದ ವಿವಿಧ ಭಾಗಗಳಿಂದ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದ ಈ ಎರಡು ಘಾಟುಗಳ ಅಭಿವೃದ್ದಿ ಮತ್ತು ಇಲ್ಲಿಗೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕೆ ವಿಶೇಷ ಗಮನ ನೀಡುವಂತೆ ಪ್ರಧಾನಿ ಸೂಚಿಸಿದ್ದರು. ಶವಸಾಗಣೆಗೆ ಬಳಸುವ ಮೋಟರ್ ಬೋಟ್ ಸೇವೆಯನ್ನು ಹಲವು ಸಾಮಾಜಿಕ ಸಂಘಟನೆಗಳ ಮೂಲಕ ಬಹುತೇಕ ಉಚಿತವಾಗಿ ನೀಡಲಾಗುತ್ತಿದೆ.