ಉತ್ತರ ಪ್ರದೇಶ ಚುನಾವಣೆ: ಅಪ್ಪ-ಮಗನಿಗೆ 'ಸೈಕಲ್' ಗುರುತೇ ಬೇಕು ಏಕೆ?
ಲಕ್ನೋ, ಜನವರಿ 16: ಸಮಾಜವಾದಿ ಪಕ್ಷದ ಚುನಾವಣಾ ಗುರುತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಮಹತ್ವದ ತೀರ್ಪು ಹೊರ ಬೀಳುವ ನಿರೀಕ್ಷೆ ಇದೆ. ಸಮಾಜವಾದಿ ಪಕ್ಷದ ಸೈಕಲ್ ಗುರುತಿಗಾಗಿ ಅಪ್ಪ ಮುಲಾಯಂ ಸಿಂಗ್ ಯಾದವ್ ಮತ್ತು ಮಗ ಅಖಿಲೇಶ್ ಯಾದವ್ ಬಡಿದಾಡುತ್ತಿದ್ದಾರೆ. ಈ ಪ್ರಕರಣ ಕಳೆದ ವಾರ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿತ್ತು. ಈ ಸಂಬಂಧ ತನ್ನ ತೀರ್ಮಾನವನ್ನು ಆಯೋಗ ಈ ಶುಕ್ರವಾರಕ್ಕೆ ಕಾಯ್ದಿರಿಸಿತ್ತು.
ಕಳೆದ ಐದು ವರ್ಷಗಳಲ್ಲಿ ಸಮಾಜವಾದಿ ಪಕ್ಷದ ಚಟುವಟಿಕೆಗಳು ಸೈಕಲ್ ಸುತ್ತ ಮುತ್ತಲೇ ಗಿರಕಿ ಹೊಡೆದಿವೆ. ಅಖಿಲೇಶ್ ಯಾದವ್ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಬಾರಿ ಸೈಕಲ್ ಯಾತ್ರೆಗಳನ್ನು ನಡೆಸಿದ್ದಾರೆ. ಇದರ ಜತೆಗೆ ರಾಜ್ಯ ಕಾರ್ಮಿಕ ಇಲಾಖೆ ಕಳೆದ 5 ವರ್ಷಗಳಲ್ಲಿ ಲಕ್ಷಗಟ್ಟಲೆ ಸೈಕಲ್ ಗಳನ್ನು ಸಾರ್ವಜನಿಕರಿಗೆ ವಿತರಿಸಿದೆ. 3,000 ಕಿಲೋಮೀಟರುಗಳ ವಿಶೇಷ ಸೈಕಲ್ ಟ್ರಾಕುಗಳನ್ನೂ ಕಳೆದ ಐದು ವರ್ಷಗಳಲ್ಲಿ ನಿರ್ಮಿಸಲಾಗಿದೆ.
ಈ ಎಲ್ಲಾ ಕಾರಣಗಳಿಂದ ಉಭಯ ಬಣದವರಿಗೂ ಸೈಕಲ್ ಗುರುತು ಪ್ರತಿಷ್ಠೆಯಾಗಿದೆ. ಸದ್ಯ ಎರಡೂ ಬಣದವರೂ ತೀರ್ಪನ್ನು ಎದುರು ನೋಡುತ್ತಿದ್ದು, ಪರ್ಯಾಯ ಚುನಾವಣಾ ಗುರುತಿನ ಬಗ್ಗೆಯೂ ಆಲೋಚಿಸಿದ್ದಾರೆ. ಒಂದೊಮ್ಮೆ ಚುನಾವಣಾ ಆಯೋಗ ಸೈಕಲ್ ಗುರುತನ್ನು ಇಬ್ಬರಿಗೂ ನೀಡದೆ ಎತ್ತಿಡುವ ಸಾಧ್ಯತೆಯೂ ಇದೆ. ಹೀಗಾದಾಗ ಎರಡೂ ಪಕ್ಷಗಳನ್ನು ರಾಜ್ಯ ಪಕ್ಷಗಳು ಎಂದು ಪರಿಗಣಿಸಲಾಗುತ್ತದೆ. ಆಗ ಎರಡೂ ಪಕ್ಷಗಳು ಹೊಸ ಗುರುತನ್ನು ಹೊಂದಬೇಕಾಗುತ್ತದೆ.
ಒಂದೊಮ್ಮೆ ಸೈಕಲ್ ಗುರುತು ಸಿಗದೇ ಹೋದಲ್ಲಿ ಅಖಿಲೇಶ್ ಬಣ ಬೈಕಿನ ಗುರುತು ಪಡೆಯಲು ಮುಂದಾಗಿದೆ. ಇನ್ನು ಮುಲಾಯಂ ಸಿಂಗ್ ಬಣ ಚುನಾವಣಾ ಗುರುತು ಕಳೆದುಕೊಂಡರೆ ಹೊಸ ಚಿನ್ಹೆ ಯಾವುದು ಎಂದು ಇನ್ನೂ ಚಿಂತನೆ ನಡೆಸಿಲ್ಲ. ಮುಲಾಯಂ ಸಿಂಗ್ ಭಾನುವಾರದಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಸೈಕಲ್ ಗುರುತು ಕೈತಪ್ಪಿ ಹೋದರೆ ನಿರಾಶರಾಗಬೇಡಿ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮಾತ್ರವಲ್ಲ ನಿಮ್ಮ ನಿಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಆರಂಭಿಸಿ, ಪಕ್ಷ ಸಂಘಟಿಸಿ ಎಂದು ಸೂಚನೆ ನೀಡಿದ್ದಾರೆ. ಅಖಿಲೇಶ್ ಯಾದವ್ ಕಾಂಗ್ರೆಸ್ ಜತೆ ಕೈ ಜೋಡಿಸುವ ಲಕ್ಷಣಗಳಿದ್ದು, ಮುಲಾಯಂ ಮಾತ್ರ ಕಾಂಗ್ರೆಸ್ ಜತೆ ಕೈ ಜೋಡಿಸುವುದೆಂದರೆ ಅದರ ಜೊತೆಗೆ ಗುರುತಿಸಿಕೊಂಡಂತಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಹೊಂದಲು ಮುಲಾಯಂ ಸಿಂಗ್ ಗೆ ಮನಸ್ಸಿಲ್ಲ.(ಒನ್ಇಂಡಿಯಾ ಸುದ್ದಿ)