ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟ ಯೋಗಿ ಪಾಲಾಗಿದ್ದೇಗೆ?
ಬಿಜೆಪಿ ಪಕ್ಷದೊಳಗೆ ಮತ್ತು ಆರ್.ಎಸ್.ಎಸ್ ನಲ್ಲಿ ನಡೆದ ಕೆಲವು ಬೆಳವಣಿಗೆಗಳು ಸಿನ್ಹಾರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿಟ್ಟಿತು. ಅದೇ ವೇಳೆಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಉದಯಿಸಿ ಬಂದರು.
ಬೆಂಗಳೂರು, ಮಾರ್ಚ್ 20: ಶನಿವಾರದ ಹೊತ್ತಿಗೆ ಹೆಚ್ಚಿನ ಎಲ್ಲಾ ಮಾಧ್ಯಮಗಳು ಮನೋಜ್ ಸಿನ್ಹಾ ಮುಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಎನ್ನುವ ತೀರ್ಮಾನಕ್ಕೆ ಬಂದಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬೆಳವಣಿಗೆಗಳು ಸಿನ್ಹಾ ಕೈಯಿಂದ ಯೋಗಿ ಕೈಗೆ ಅಧಿಕಾರ ಬರುವಂತೆ ಮಾಡಿತು.
ಹಾಗೆ ನೋಡಿದರೆ ಮನೋಜ್ ಸಿನ್ಹಾ ಯೋಗಿ ಆದಿತ್ಯನಾಥ್ ಗೆ ಪ್ರಭಲ ಸ್ಪರ್ಧೆ ಒಡ್ಡಿದ್ದರು. ಪಕ್ಷದೊಳಗೆ ಮತ್ತು ಆರ್.ಎಸ್.ಎಸ್ ಒಳಗೆ ನಡೆದ ಕೆಲವು ಬೆಳವಣಿಗೆಗಳು ಸಿನ್ಹಾರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿಟ್ಟಿತು. ಅದೇ ವೇಳೆಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಉದಯಿಸಿ ಬಂದರು.[ನಂಜನಗೂಡು ಉಪಚುನಾವಣೆ: ಬಿಜೆಪಿ ನಾಯಕರ ಮನೆಯಲ್ಲಿ ಕಾಂಗ್ರೆಸ್ ಸಚಿವರು!]
ಶನಿವಾರವೇ ಸಿನ್ಹಾ ಸ್ಪರ್ಧೆಯಿಂದ ಹೊರಗೆ
ಬಿಜೆಪಿ ಮೂಲಗಳ ಪ್ರಕಾರ ಶನಿವಾರದ ಹೊತ್ತಿಗೆ ಸಿನ್ಹಾ ಮುಖ್ಯಮಂತ್ರಿ ಪದವಿಯ ರೇಸಿನಲ್ಲೇ ಇರಲಿಲ್ಲ. ಬುಧವಾರದ ಹೊತ್ತಿಗೆ ಅವರನ್ನು ಸ್ಪರ್ಧೆಯಿಂದ ಹೊರಗಿಡಲಾಗಿತ್ತು. ಹಲವು ಕೇಂದ್ರ ಸಚಿವರೇ ಇದರ ಸೂಚನೆಗಳನ್ನು ಬಹಿರಂಗವಾಗಿ ನೀಡಿದ್ದರು. ಆದರೆ ಯಾರಿಗೂ ಗೊತ್ತಾಗಿರಲಿಲ್ಲ ಅಷ್ಟೆ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]
ಹಿಂದುತ್ವ-ಅಭಿವೃದ್ಧಿ ಎರಡೂ ಸಾಧ್ಯವಿಲ್ಲ
ಬಿಜೆಪಿ ಮತ್ತು ಆರ್.ಎಸ್.ಎಸ್ ಆಯ್ಕೆ ಅಭಿವೃದ್ಧಿ ಮತ್ತು ಹಿಂದುತ್ವವಾಗಿತ್ತು. ಮನೋಜ್ ಸಿನ್ಹಾರಿಂದ ಅಭಿವೃದ್ಧಿ ಮತ್ತು ಹಿಂದುತ್ವ ಎರಡನ್ನೂ ನೀಡಲು ಸಾಧ್ಯವಿಲ್ಲ ಎಂಬುದು ಆರ್.ಎಸ್.ಎಸ್ ಗೆ ಅರ್ಥವಾಗಿತ್ತು. ಆಡಳಿತಾತ್ಮಕವಾಗಿ ಸಿನ್ಹಾ ಚಾಣಕ್ಷತೆಯ ಬಗ್ಗೆ ಯಾರಿಗೂ ಪ್ರಶ್ನೆಗಳಿರಲಿಲ್ಲ. ಆದರೆ ಹಿಂದುತ್ವ ಅಜೆಂಡಾವನ್ನು ಗಟ್ಟಿಯಾಗಿ ಸಮಾಜದಲ್ಲಿ ಬೇರು ಬಿಡಲು ಅವರಿಂದ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂತು.[ಅವಿವಾಹಿತ ಸಿಎಂಗಳು: ಯೋಗಿ ಆದಿತ್ಯನಾಥ್ ಹೊಸ ಸೇರ್ಪಡೆ!]
ಜಾತಿ ವಾದಿ
ಇವೆಲ್ಲ ಅಲ್ಲದೆ ಸಿನ್ಹಾ ನೇಮಕಕ್ಕೆ ಆರ್.ಎಸ್.ಎಸ್ ಮತ್ತು ಬಿಜೆಪಿ ನಡುವಿನ ಸಂಯೋಜಕ ಕೃಷ್ಣ ಗೋಪಾಲ್ ಕೂಡಾ ವಿರೋಧಿಸಿದ್ದರು. ಸಿನ್ಹಾ ಭೂಮಿಲಾರ್ ಜಾತಿಗೆ ಸೇರಿದ ವ್ಯಕ್ತಿ. ಅವರು ತಮ್ಮ ಜಾತಿ ಬಿಡಲು ಸಿದ್ಧವಿಲ್ಲ. ಉತ್ತರ ಪ್ರದೇಶದಂತ ರಾಜ್ಯಕ್ಕೆ ಜಾತಿ ರಾಜಕಾರಣಿ ಒಗ್ಗುವುದಿಲ್ಲ ಎಂಬ ತೀರ್ಮಾನಕ್ಕೂ ಆರ್.ಎಸ್.ಎಸ್ ಬಂತು.
ಆದಿತ್ಯನಾಥ್ ಅಡ್ಡಗಾಲು
ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ನೇಮಕವಾಗುವುದನ್ನು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಹಾಗೂ ಸ್ವತಃ ಆದಿತ್ಯನಾಥ್ ವಿರೋಧಿಸಿದ್ದರು. ಉಭಯ ನಾಯಕರಿಗೂ ಸಿನ್ಹಾ ಇಷ್ಟವಿರಲಿಲ್ಲ.
ಯೋಗಿಗೆ ಒಲಿದ ಅದೃಷ್ಟ
ಇದೇ ವೇಳೆಗೆ ಮುಖ್ಯಮಂತ್ರಿ ಹುದ್ದೆಗಾಗಿ ಯೋಗಿ ಆದಿತ್ಯನಾಥ್ ಬಲೆ ಬೀಸಿದರು. ಆರ್.ಎಸ್.ಎಸ್ ಕೂಡಾ ಅವರ ಬೆಂಬಲಕ್ಕೆ ನಿಂತುಕೊಂಡಿತು. ಸಂಘಕ್ಕೆ ಯೋಗಿ ಆದಿತ್ಯನಾಥ್ ಅಭಿವೃದ್ಧಿ ಹಾಗೂ ಹಿಂದುತ್ವವನ್ನು ಏಕಕಾಲಕ್ಕೆ ನೀಡಬಲ್ಲರು ಎಂಬ ವಿಶ್ವಾಸವಿತ್ತು. ಅದರಂತೆ ಮುಖ್ಯಮಂತ್ರಿ ಹುದ್ದೆಯಲ್ಲಿ ಆದಿತ್ಯನಾಥ್ ಆಸೀನರಾಗಿದ್ದಾರೆ.