ಬರೇಲಿಯಲ್ಲಿ ಮಹಿಳೆಯನ್ನು ಬಲಿತೆಗೆದುಕೊಂಡಿತೇ ಆಧಾರ್ ಕಡ್ಡಾಯ ನೀತಿ?
ಬರೇಲಿ(ಉತ್ತರ ಪ್ರದೇಶ), ನವೆಂಬರ್ 16: ಆಧಾರ್ ಕಾರ್ಡಿಗೆ ಬೆರಳಚ್ಚು ನೀಡಲು ಸಾಧ್ಯವಾಗದ ಪಾರ್ಶ್ವವಾಯು ಪೀಡಿತೆಯೊಬ್ಬರಿಗೆ ರೇಶನ್ ನೀಡಲು ನಿರಾಕರಿಸಿದ್ದಕ್ಕಾಗಿ ಆಕೆ ಆಹಾರವಿಲ್ಲದೆ ಅಸುನೀಗಿದ ಕರುಣಾಜನಕ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಆಧಾರ್ ನೊಂದಿಗೆ ರೇಶನ್ ಕಾರ್ಡ್ ಜೋಡಿಸದ ತಪ್ಪಿಗೆ ಮುಗ್ಧ ಬಾಲಕಿ ಬಲಿ!
ಶಕಿನಾ ಅಷ್ಫಾಕ್(50) ಎಂಬ ಮಹಿಳೆ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರಿಂದ ಅವರಿಗೆ ಆಧಾರ್ ಕಾರ್ಡಿಗೆ ಬೆರಳಚ್ಚು ನೀಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ರೇಷನ್ ಕಾರ್ಡಿನೊಂದಿಗೆ ಅವರ ಆಧಾರ್ ಕಾರ್ಡ್ ಅನ್ನು ಜೋಡಿಸಿರಲಿಲ್ಲ. ಆಕೆಯ ಕುಟುಂಬಸ್ಥರು ಪಡಿತರ ಅಂಗಡಿಗೆ ಹೋಗಿ, ಅಲ್ಲಿನ ಅಧಿಕಾರಿಗಳಿಗೆ ಪರಿಸ್ಥಿತಿ ವಿವರಿಸಿದರೂ, 'ಆಧಾರ್ ಜೋಡಣೆ ಮಾಡದೆ ಪಡಿತರ ನೀಡುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಇದರಿಂದಾಗಿ ಕಳೆದ ಐದು ದಿನದಿಂದ ಆಹಾರವೇ ಸಿಗದೆ ಶಕಿನಾ ಸಾವನ್ನಪ್ಪಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಸ್ಥಳೀಯ ಅಧಿಕಾರಿಗಳು, ಆಕೆ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಅಸುನೀಗಿದ್ದು ಹಸಿವಿನಿಂದಲ್ಲ' ಎಂದು ಸಮಜಾಯಿಷಿ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ಜಾರ್ಖಂಡ್ ನಲ್ಲಿ ಆಧಾರ್ ಜೊತೆ ಪಡಿತರ ಚೀಟಿ ಜೋಡಿಸಿಲ್ಲ ಎಂದು ದಿನಸಿ ನೀಡದ ಕಾರಣಕ್ಕೆ 11 ವರ್ಷದ ಬಾಲಕಿಯೊಬ್ಬರು ಹಸಿವಿನಿಂದ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.