ಡಾ.ಭಕ್ತಿ ಅವರ ಕಾರ್ಯಕ್ಕೆ ನಮ್ಮದೊಂದು ಸಲಾಮ್
ನವದೆಹಲಿ, ಅ.10 : 'ವೈದ್ಯೋ ನಾರಾಯಣ ಹರಿ' ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಈ ಮಾತನ್ನು ನಿಜವಾಗಿಸಿದ್ದು ಡಾ.ಭಕ್ತಿ ಯಾದವ್. ಇವರು ಆರವತ್ತೆಂಟು ವರ್ಷಗಳಿಂದ ಉಚಿತವಾಗಿ ರೋಗಿಗಳ ಸೇವೆ ಮಾಡುತ್ತಿದ್ದಾರೆ. ತಮ್ಮ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ವೃದ್ಧರಿಗೆ ಉಚಿತ ಊಟ ನೀಡುವ ಮುಂಬೈ ವೈದ್ಯರೊಬ್ಬರ ಆದರ್ಶ ಕತೆಯಿದು
91 ವರ್ಷದ ಡಾ.ಭಕ್ತಿ ಯಾದವ್ ಮಧ್ಯಪ್ರದೇಶ ಇಂಧೋರ್ ನವರು. ಇಂಧೋರ್ನಲ್ಲಿ ಎಂಬಿಬಿಎಸ್ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದ್ದು. ಉಚಿತವಾಗಿ ರೋಗಿಗಳ ಸೇವೆ ಮಾಡುವ ಇವರು, ಇದುವರೆಗೂ ಸಾವಿರಾರು ಹೆರಿಗೆ ಮಾಡಿಸಿದ್ದಾರೆ.
'ಡಾಕ್ಟರ್ ದಾದಿ' ಎಂದೇ ಪ್ರಸಿದ್ಧಿ ಪಡೆದಿರುವ ಭಕ್ತಿ ಅವರು ಹುಟ್ಟಿದ್ದು 1926ರ ಏಪ್ರಿಲ್ 13ರಂದು ಉಜ್ಜೈನಿಯಲ್ಲಿ. 1948ರಲ್ಲಿ ಇಂಧೋರ್ ನ ಮಹಾತ್ಮ ಗಾಂಧಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನಿಂದ ಡಾ.ಭಕ್ತಿ ಎಂಬಿಬಿಎಸ್ ಪದವಿ ಪಡೆದರು. ತಮ್ಮ ಪದವಿಯನ್ನು ಹಣಗಳಿಸಲು ಅವರು ಎಂದೂ ಬಳಸಲೇ ಇಲ್ಲ.
ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಮಾಡಿಸಲು ನೆರವಾದ ಬೆಂಗಳೂರಿನ ವೈದ್ಯೆ!
ಡಾ.ಭಕ್ತಿ ಅವರ ಇಬ್ಬರು ಮಕ್ಕಳು ವೈದ್ಯರು. ಡಾ.ಚೇತನ್ ಮತ್ತು ಅವರ ಪತ್ನಿ ಡಾ.ಸುನೀತಾ ಯಾದವ್, ಡಾ.ರಮಣ್ ಯಾದವ್ ಈಗ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಓದು ಮುಗಿಸಿದಾಗ ಒಂದ ಸರ್ಕಾರಿ ಉದ್ಯೋಗದ ಅವಕಾಶವನ್ನು ತಳ್ಳಿ ಹಾಕಿದ ಭಕ್ತಿ ಅವರು, ನಂದಾಲಾಲ್ ಭಂಡಾರಿ ಹೆರಿಗೆ ಮನೆ ಎನ್ನುವ ಆಸ್ಪತ್ರೆ ಸೇರಿಕೊಂಡರು.
ಈ ಆಸ್ಪತ್ರೆಗೆ ಬರುತ್ತಿದ್ದವರಲ್ಲಿ ಬಟ್ಟೆ ಮಿಲ್ಗಳ ಕಾರ್ಮಿಕರೇ ಹೆಚ್ಚಾಗಿದ್ದರು. ಬಡತನದ ಸ್ವರೂಪ ಭಕ್ತಿ ಅವರಿಗೆ ಇಲ್ಲಿ ಪರಿಚಯವಾಯಿತು. ಹಲವು ದಶಕಗಳ ಕಾಲ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯರಾಗಿ ಕೆಲಸ ಮಾಡಿದ ಅವರು, ನಂತರ ವಾತ್ಸಲ್ಯ ಎಂಬ ಸ್ವಂತ ನರ್ಸಿಂಗ್ ಹೋಂ ಆರಂಭಿಸಿದರು.
ಪ್ರಸ್ತುತ 91 ವರ್ಷವಾದರೂ ಡಾ.ಭಕ್ತಿ ತಮ್ಮ ಕಾಯಕವನ್ನು ನಿಲ್ಲಿಸಿಲ್ಲ. ವಯೋಸಹಜ ಅನಾರೋಗ್ಯ ಉಂಟಾದರೂ ಬಡವರ ಸೇವೆ ಮಾಡುವ ಕಾಯಕ ಮುಂದುವರೆಸಿದ್ದಾರೆ. ಕೊನೆ ಉಸಿರು ಇರುವ ತನಕ ಸೇವೆ ಮಾಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿದ್ದಾರೆ.
ಡಾ.ಭಕ್ತಿ ಅವರ ಬಳಿ ಕೇವಲ ಮಧ್ಯಪ್ರದೇಶದ ರೋಗಿಗಳು ಬರುವುದಿಲ್ಲ. ಗುಜರಾತ್, ರಾಜಸ್ಥಾನದಿಂದಲೂ ರೋಗಿಗಳು ಇವರ ಬಳಿ ಬರುತ್ತಾರೆ. 'ಎಲ್ಲರೂ ಸಂತೋಷವಾಗಿದ್ದರೆ ನಾನು ಸಂತೋಷದಿಂದಿರುವೆ' ಎಂಬುದು ಡಾ.ಭಕ್ತಿ ಅವರ ಮನದಾಳದ ಮಾತು.
ಬಡವರ ಸೇವೆ ಮಾಡಬೇಕು ಎಂಬುದನ್ನು ಭಕ್ತಿ ಅವರು ಕಲಿತಿದ್ದು ತಂದೆ-ತಾಯಿಯಿಂದ. ಭಕ್ತಿ ಅವರ ಕಾರ್ಯಕ್ಕೆ ಅವರ ಪತಿ ಡಾ.ಚಂದ್ರಸಿಂಗ್ ಯಾದವ್ ಅವರ ಸಂಪೂರ್ಣ ಸಹಕಾರವಿತ್ತು. ಚಂದ್ರಸಿಂಗ್ ಮತ್ತು ಭಕ್ತಿ ಅವರು ಒಟ್ಟಿಗೆ ಎಂಬಿಬಿಎಸ್ ಓದಿದವರು.
ಭಕ್ತಿ ಅವರ ಕಾಯಕಕ್ಕೆ ನಮ್ಮದೊಂದು ಸಲಾಮ್...