ನೀವು ದೇಶಕ್ಕೆ ಪ್ರಧಾನಿನಾ, ಗುಜರಾತ್ಗೆ ಮಾತ್ರವಾ? ಮೋದಿ ವಿರುದ್ಧ ಕಾಂಗ್ರೆಸ್ ಗರಂ
Recommended Video
ನವದೆಹಲಿ, ಏಪ್ರಿಲ್ 17: ದೇಶದ ಅನೇಕ ಭಾಗಗಳಲ್ಲಿ ಅಕಾಲಿಕ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಅನೇಕರು ಮಳೆ, ಗಾಳಿ ಮತ್ತು ಸಿಡಿಲಿನ ಅನಾಹುತಗಳಿಂದ ಬಲಿಯಾಗಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ಗಳು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಭಾರಿ ಮಳೆ: 34 ಮಂದಿ ಬಲಿ,ಕೇಂದ್ರದ ಪರಿಹಾರ
ಅಕಾಲಿಕ ಮಳೆಯಿಂದಾಗಿ ದೇಶದ ಹಲವೆಡೆ ಅವಘಡಗಳು ಸಂಭವಿಸಿದ್ದರೂ, ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆಯಿಂದ ಗುಜರಾತ್ನಲ್ಲಿ ಉಂಟಾದ ಅನಾಹುತದ ಬಗ್ಗೆ ಮಾತ್ರ ವಿಷಾದ ವ್ಯಕ್ತಪಡಿಸಲಾಗಿತ್ತು. ಅಲ್ಲದೆ, ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಒದಗಿಸುವುದಾಗಿ ಹೇಳಲಾಗಿತ್ತು.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಇದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದು ಅನಾಹುತಗಳು ಸಂಭವಿಸಿರುವುದು ಗುಜರಾತ್ನಲ್ಲಿ ಮಾತ್ರ. ದೇಶದ ಇತರೆ ಭಾಗಗಳಲ್ಲಿಯೂ ವಿಪತ್ತು ಉಂಟಾಗಿದೆ. ಆದರೆ, ಆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿಲ್ಲ, ಕಾಂಗ್ರೆಸ್ ಸರ್ಕಾರವಿದೆ. ಹೀಗಾಗಿ ನಿಮಗೆ ಅವುಗಳಲ್ಲಿ ಉಂಟಾದ ಅನಾಹುತಗಳ ಬಗ್ಗೆ ಕಾಳಜಿ ಇಲ್ಲ. ಸಂತಾಪವೂ ಇಲ್ಲ, ಪರಿಹಾರವೂ ಇಲ್ಲ ಎಂದು ಕಿಡಿ ಕಾರಿದ್ದಾರೆ.
|
ಮೋದಿ ಸಂತಾಪ
ಗುಜರಾತ್ನ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಜನಜೀವನಕ್ಕೆ ಹಾನಿಯಾಗಿರುವುದು ದುಃಖ ತಂದಿದೆ. ಸಂತ್ರಸ್ತ ಕುಟುಂಬದವರಿಗೆ ನನ್ನ ಸಾಂತ್ವನಗಳನ್ನು ಹೇಳುತ್ತೇನೆ. ಪರಿಸ್ಥಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಂಕಷ್ಟಕ್ಕೆ ಒಳಗಾದವರಿಗೆ ಎಲ್ಲ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಮೋದಿ ಬೆಳಿಗ್ಗೆ ಟ್ವೀಟ್ ಮಾಡಿದ್ದರು.
|
ಎರಡು ಲಕ್ಷ ರೂ. ಪರಿಹಾರ
ಬಳಿಕ ಮತ್ತೊಂದು ಟ್ವೀಟ್ ಮಾಡಿದ ಅವರು, ಗುಜರಾತ್ನ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬದ ಸದಸ್ಯರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ನೀಡಲು ಅನುಮತಿ ಕೊಡಲಾಗಿದೆ ಎಂದು ಹೇಳಿದ್ದರು.
ಈ ಬಾರಿ ಸಾಮಾನ್ಯ ಮುಂಗಾರು, ರೈತರಿಗೆ ಸಂತಸ ತಂದ ಮುನ್ಸೂಚನೆ
|
ಮಧ್ಯಪ್ರದೇಶದಲ್ಲಿಯೂ ಸತ್ತಿದ್ದಾರೆ
ಮೋದಿ ಅವರ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ನೀವು ದೇಶದ ಪ್ರಧಾನಿಯೇ ಅಥವಾ ಗುಜರಾತ್ಗೆ ಮಾತ್ರವೇ? ಕಾಂಗ್ರೆಸ್ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಇದ್ದರೂ ಅಕಾಲಿಕ ಮಳೆಯಿಂದ ಬಲಿಯಾದವರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ ವ್ಯಕ್ತಪಡಿಸಬೇಕು ಎಂದು ಹೇಳಿದ್ದರು.
|
ದುಃಖ ವ್ಯಕ್ತಪಡಿಸಿದ ಪ್ರಧಾನಿ
ಕಮಲ್ ನಾಥ್, ದಿಗ್ವಿಜಯ್ ಸಿಂಗ್ ಮುಂತಾದವರು ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಪ್ರಧಾನಿ ಕಚೇರಿ, ನರೇಂದ್ರ ಮೋದಿ ಅವರು ಮಧ್ಯಪ್ರದೇಶ, ರಾಜಸ್ಥಾನ, ಮಣಿಪುರ ಮತ್ತು ದೇಶದ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆಗೆ ಜನರು ಬಲಿಯಾಗಿರುವುದಕ್ಕೆ ದುಃಖಿಸಿದ್ದಾರೆ. ಸಂತ್ರಸ್ತರಿಗೆ ಎಲ್ಲ ಸಾಧ್ಯವಾದ ನೆರವು ಒದಗಿಸಲು ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದೆ ಎಂದು ಟ್ವೀಟ್ ಮಾಡಿತ್ತು.
|
ಪರಿಹಾರದ ವಿಸ್ತರಣೆ
ಮಧ್ಯಪ್ರದೇಶ, ರಾಜಸ್ಥಾನ, ಮಣಿಪುರ ಮತ್ತು ದೇಶದ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆ ಗಾಳಿಗೆ ಬಲಿಯಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರವನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ಕಚೇರಿ ಮತ್ತೊಂದು ಟ್ವೀಟ್ ಮಾಡಿದೆ.