ಎಲ್ಲರಿಗೂ ಲಸಿಕೆ ನೀಡುತ್ತಿರುವುದೇ ಅಪಾಯಕಾರಿ; ಆರೋಗ್ಯ ತಜ್ಞರ ಎಚ್ಚರಿಕೆ
ನವದೆಹಲಿ, ಜೂನ್ 11: ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಜನವರಿಯಿಂದ ಲಸಿಕಾ ಅಭಿಯಾನ ಆರಂಭಗೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. ಆದರೆ ಈ ರೀತಿ ಲಸಿಕೆ ನೀಡುತ್ತಿರುವುದೇ ಬಹುದೊಡ್ಡ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ ಆರೋಗ್ಯ ತಜ್ಞರು.
ಪ್ರಸ್ತುತ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸಾಮೂಹಿಕ, ವಿವೇಚನೆಯಿಲ್ಲದ ಹಾಗೂ ಅಪೂರ್ಣ ಲಸಿಕಾ ಪ್ರಕ್ರಿಯೆಯು ಕೊರೊನಾ ರೂಪಾಂತರ ತಳಿಗಳಿಗೆ ಪ್ರಚೋದನೆ ನೀಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಏಮ್ಸ್ ವೈದ್ಯರು ಹಾಗೂ ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಸದಸ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಎಚ್ಚರಿಕೆ ನೀಡಿದೆ. ಜೊತೆಗೆ ಕೊರೊನಾ ಸೋಂಕು ತಗುಲಿದ್ದವರಿಗೆ ಲಸಿಕೆ ನೀಡುವ ಅಗತ್ಯವೂ ಇಲ್ಲ ಎಂದು ಸಲಹೆ ನೀಡಿದೆ. ಮುಂದೆ ಓದಿ...
ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿಚಾರದಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ ಕೇಂದ್ರ
"ಸಾಮೂಹಿಕ ಲಸಿಕೆ ನೀಡುವುದನ್ನು ನಿಲ್ಲಿಸಿ"
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್, ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ ತಜ್ಞರು ಈ ಕುರಿತು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಾಮೂಹಿಕ ಲಸಿಕೆ ನೀಡುವ ಬದಲು ದುರ್ಬಲರಿಗೆ, ಅಪಾಯದಲ್ಲಿರುವವರಿಗೆ ಲಸಿಕೆ ನೀಡುವುದು ಸದ್ಯದ ಗುರಿಯಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಸಾಮೂಹಿಕವಾಗಿ ಲಸಿಕೆ ನೀಡುವುದನ್ನು ನಿಲ್ಲಿಸಿ. ದೇಶದಲ್ಲಿ ಸಾಂಕ್ರಾಮಿಕ ರೋಗ ವ್ಯಾಪಿಸಿರುವ ಈ ಹಂತದಲ್ಲಿ ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡುವ ಬದಲು ಸಾಂಕ್ರಾಮಿಕ ರೋಗ ದತ್ತಾಂಶಗಳನ್ನು ಅವಲೋಕಿಸಿ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದು ತಿಳಿಸಿದೆ.
ಏಕಾಏಕಿ ಬರಿದಾಗಬಹುದು ಸಂಪನ್ಮೂಲಗಳು
ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ನೀಡುವುದರಿಂದ ಮಾನವ ಮತ್ತು ಇನ್ನಿತರೆ ಸಂಪನ್ಮೂಲಗಳು ಏಕಾಏಕಿ ಬರಿದಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಯುವಜನತೆ ಹಾಗೂ ಮಕ್ಕಳಿಗೆ ಲಸಿಕೆ ನೀಡುವ ತುರ್ತು ಇಲ್ಲ ಎಂಬ ಸಲಹೆ ನೀಡಿದ್ದು, ಯೋಜಿತವಲ್ಲದ ಲಸಿಕಾ ಕಾರ್ಯಕ್ರಮ ರೂಪಾಂತರ ತಳಿಗಳನ್ನು ಉತ್ತೇಜಿಸುತ್ತದೆ. ಸಾಮೂಹಿಕ ಲಸಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸುವುದು ಕೂಡ ಕೊರೊನಾ ಹರಡುವಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ದೇಶದಲ್ಲಿ ಹಠಾತ್ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು?
"ಲಸಿಕೆ ಎಂಬ ಅಸ್ತ್ರವನ್ನು ಹೇಗೆ ಉಪಯೋಗಿಸಬೇಕೆಂದು ತಿಳಿದಿರಲಿ"
ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಶಕ್ತಿಶಾಲಿ ಅಸ್ತ್ರವೆಂಬುದು ಸತ್ಯ. ಆದರೆ ಆ ಅಸ್ತ್ರವನ್ನು ಹೇಗೆ ಬಳಸಬಹುದು ಎಂಬುದೂ ತಿಳಿದಿರಬೇಕು. ಈ ಅಸ್ತ್ರದಿಂದ ಎಷ್ಟೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ಹಾಕಲು ಸಾಧ್ಯವಿಲ್ಲ ಎಂಬುದು ಸತ್ಯ. ಆದ್ದರಿಂದ ಆ ಪ್ರಯತ್ನವನ್ನು ಮಾಡುವ ಬದಲು ಹೆಚ್ಚು ಅವಶ್ಯಕವಿರುವವರಿಗೆ ಲಸಿಕೆ ಹಾಕಿ. ಲಭ್ಯವಿರುವ ಲಸಿಕೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರೆಡೆಗೆ ಗಮನ ನೀಡಿ ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆ ತಗ್ಗಿಸುವುದು ಆದ್ಯತೆಯಾಗಬೇಕು
ಸದ್ಯಕ್ಕೆ ದೇಶದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ. ವಯಸ್ಸಾದವರನ್ನು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಬೇಕಿದೆ. ಹೀಗಾಗಿ ಎರಡನೇ ಅಲೆ ಕೊನೆಗೊಳ್ಳುತ್ತಿದ್ದಂತೆ ಸ್ಥಳೀಯ ಮಟ್ಟದಲ್ಲಿ ಸೆರೋ ಸರ್ವೆಗಳನ್ನು ನಡೆಸಿ ಒಂದು ಸೂಕ್ತ ಕಾರ್ಯಸೂಚಿ ತರುವುದು ಬೇರು ಮಟ್ಟದಲ್ಲೇ ಕೊರೊನಾ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 7,33,23,267 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 1,16,22,718 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 6,16,38,580 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,95,34,203 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 143 ದಿನಗಳಲ್ಲಿ 24,24,79,167 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.