ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...
ಉನ್ನಾವೋ, ಏಪ್ರಿಲ್ 12: "ನನಗಾಗ ಹನ್ನೊಂದು ವರ್ಷ! ನನಗೆ ಗೊತ್ತಿತ್ತು, ಆ ಸ್ಪರ್ಶ ಮುಗ್ಧ ಸ್ಪರ್ಶವಲ್ಲ ಅಂತ. ಆದರೆ ಈ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಬೇಕು? ಆತ ಈ ಊರಿನ ಪ್ರತಿಷ್ಠಿತ ವ್ಯಕ್ತಿ, ನನ್ನ ತಂದೆಗೆ ಕೆಲಸ ನೀಡಿದವರು ಬೇರೆ. ನನಗೆ ಯಾರ ಬಳಿ ಹೇಳುವುದು ಎಂದೇ ಗೊತ್ತಾಗದೆ ಸುಮ್ಮನಿದ್ದೆ" ಹೀಗೆ ಸಾಗುತ್ತದೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮನದ ಮಾತು.
ದೇಶದಾದ್ಯಂತ ಸದ್ದು ಮಾಡುತ್ತಿರುವ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಈ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್! ಈಗಾಗಲೇ ಈ ಪ್ರಕರಣವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸಿಬಿಐ ಗೆ ವಹಿಸಿದೆ. ಪ್ರಕರಣದಲ್ಲಿ ನ್ಯಾಯ ನೀಡುವಂತೆ ಕೋರಿ ಆದಿತ್ಯನಾಥ್ ಅವರ ಮನೆಯ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಂತ್ರಸ್ಥೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರು ಪೊಲೀಸ್ ಕಸ್ಟಡಿಯಲ್ಲೇ ಅಸುನೀಗಿದ ನಂತರ ಪ್ರಕರಣ ಮತ್ತಷ್ಟು ಕುತೂಹಲ ಸೃಷ್ಟಿಸಿತ್ತು.
ಬಿಜೆಪಿ ಶಾಸಕನ ವಿರುದ್ಧ ಕೇಳಿಬಂದ ಉನ್ನಾವೋ ಅತ್ಯಾಚಾರ ಪ್ರಕರಣ ಸಿಬಿಐಗೆ
ಈ ಕುರಿತು ಇದುವರೆಗೂ ಮಾತನಾಡದ ಸಂತ್ರಸ್ತೆ, ಆ ಕರಾಳ ದಿನದ ಕುರಿತು ಇದೀಗ ಮಾತನಾಡಿದ್ದಾರೆ.
8 ತರಗತಿಯಲ್ಲೇ ಕಲಿಕೆಗೆ ಗುಡ್ ಬೈ!
ನಾನು ಶಾಲೆಗೆ ಹೋಗುವುದು ಆತನಿಗೆ ಇಷ್ಟವಿರಲಿಲ್ಲ. ಶಾಲೆಗೆ ಹೋಗುವುದರಿಂದ 'ಕೆಟ್ಟ ಜನರ' ಕಣ್ಣು ಬೀಳುತ್ತದೆ ಎಂದು ಅವರು ನಾನು ಶಾಲೆಗೆ ಹೋಗುವುದನ್ನು ತಡೆದರು. ನಂತರ ನನ್ನನ್ನು ಆಗಾಗ ಅವರ ಮನೆಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದರು. ನನ್ನ ತಂದೆಗೆ ಅವರು ಕೆಲಸ ನೀಡಿದ್ದರು. ಇಡೀ ಊರಿನಲ್ಲೂ ಅವರು ಪ್ರಭಾವಿ ವ್ಯಕ್ತಿಯಾಗಿದ್ದರು. ಅವರನ್ನು ದೇವರೆಂಬಂತೆ ನೋಡಲಾಗುತ್ತಿತ್ತು. ಆದ್ದರಿಂದ ಅವರ ವಿರುದ್ಧ ದೂರು ನೀಡುವುದಕ್ಕೆ ಭಯವಾಯಿತು. ಅವರು ನಿರಂತರ ಕಿರುಕುಳ ನೀಡುತ್ತಿದ್ದರೂ ನಾನು ಸುಮ್ಮನಿದ್ದೆ"
ಅಮ್ಮ ಬಾಯಿ ಮುಚ್ಚಿಸಿದರು
"2017 ಜೂನ್ 4 ರಂದು ನನಗೆ ಕೆಲಸ ಕೊಡಿಸುವುದಾಗಿ ನನ್ನನ್ನು ಅವರ ಮನೆಗೆ ಕರೆಸಿಕೊಂಡ ಸನ್ಗಾರ್ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅವರ ಕೋಣೆಯ ಹೊರಗೆ ಹಲವರಿದ್ದುದು ನನಗೆ ಗೊತ್ತಿತ್ತು. ಆದ್ದರಿಂದ ನಾನು ಜೋರಾಗಿ ಕೂಗಿಕೊಂಡೆ. ಆದರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಜೋರಾಗಿ ಅಳುವುದಕ್ಕೆ ಶುರುಮಾಡಿದೆ. ನನ್ನ ಕಣ್ಣಿರನ್ನು ಒರೆಸುತ್ತ, 'ನಿನಗೆ ಒಳ್ಳೆಯ ಕೆಲಸ ನೀಡುತ್ತೇನೆ' ಎಂದರು. ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ದೂರು ನೀಡಿದರೆ ನಿನ್ನ ತಂದೆ ಮತ್ತು ತಮ್ಮನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಒಡ್ಡಿದರು. ನಂತರ ಮನೆಗೆ ಬಂದು ಈ ವಿಷಯವನ್ನು ಮೊದಲು ನಾನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ನಂತರ ಅಮ್ಮನಿಗೆ ಹೇಳಿದೆ. ಅಮ್ಮ ಆಘಾತಗೊಂದರು. ಸದ್ಯಕ್ಕೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು." ಎಂದು ಸಂತ್ರಸ್ಥೆ ಆ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ.
ಸಾಮೂಹಿಕ ಅತ್ಯಾಚಾರ
ಇದಾಗಿ ಏಳು ದಿನಗಳ ನಂತರ ನಾನು ಯಾವುದೋ ಕೆಲಸಕ್ಕೆಂದು ಮನೆಯಿಂದ ಆಚೆ ಹೋಗಿದ್ದಾಗ ಒಂದು ಎಸ್ ಯುವಿಯಲ್ಲಿ ಮೂವರು ಬಂದು ನನ್ನನ್ನು ಎಳೆದುಕೊಂಡು ಹೋಗಿ ಆ ವಾಹನದಲ್ಲೇ ಅತ್ಯಾಚಾರ ಮಾಡಿದರು. ನಂತರ ಒಂಬತ್ತು ದಿನಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಯಿತು. ನಂತರ ನನ್ನನ್ನು 60,000 ರೂಪಾಯಿಗೆ ಮಾರಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ನಾನು ನಾಪತ್ತೆಯಾಗಿದ್ದೇನೆಂದು ನನ್ನ ತಾಯಿ ಪೊಲೀಸರಿಗೆ ದೂರು ನೀದಿದ್ದರು. ಈ ವಿಷಯ ತಿಳಿಯುತ್ತದ್ದಂತೆಯೇ ಅವರು ನನ್ನನ್ನು ಜೂನ್ 20 ರಂದು ಮನೆಯ ಬಳಿ ಬಿಟ್ಟು ಹೋದರು. ಈ ಕೃತ್ಯ ಎಸಗಿದ ಶುಭಂ ಸಿಂಗ್, ಬ್ರಿಜೇಶ್ ಯಾದವ್ ಮತ್ತು ಅವಧ್ ನಾರಾಯಣ್ ಅವರನ್ನು ಬಂಧಿಸಲಾಯಿತು.
ಕೊನೆಗೂ ದಾಖಲಾಯ್ತು ದೂರು
2017 ರ ಜೂನ್ 20 ರಂದು ಮಾಖಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಯ್ತು. ಆದರೆ ಈ ವಿಷಯದಲ್ಲಿ ಸೆನ್ಗಾರ್ ಸಹ ಆರೋಪಿ ಎಂಬುದು ಮೊದಲು ಗೊತ್ತಿರಲಿಲ್ಲ. ಈ ವಿಷಯ ತಿಳಿದಾಗ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು. ಅಲ್ಲದೆ ಸೆನ್ಗಾರ್ ಅವರ ಕಡೆಯವರಿಂದ ಸಾಕಷ್ಟು ಬೆದರಿಕೆ ಕರೆಗಳೂ ಬಂದವು. ಆದರೆ ಈ ವಿಷಯ ಮಾಧ್ಯಮಗಳಲ್ಲೂ ಸದ್ದು ಮಾಡಿದ್ದರಿಂದ ನಂತರ ದೂರು ದಾಖಲಿಸಿಕೊಳ್ಳಲಾಯ್ತು. ಆತ್ಮಹತ್ಯೆಗೆ ಪ್ರಯತ್ನಿಸಿ, ಬಂಧಿತರಾಗಿದ್ದ ಸಂತ್ರಸ್ಥೆಯ ತಂದೆ ಅಸುನೀಗಿದರು. ಸದ್ಯಕ್ಕೆ ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ಗೆ ಒಪ್ಪಿಸಿದೆ.